ಇಂದಿನಿಂದ 3 ದಿನ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗಲಿದೆ, ಕ್ಷಮೆ ಇರಲಿ- ಡಿಕೆ ಶಿವಕುಮಾರ್
ರಾಜ್ಯದ ಜನರಿಗೆ ಶಿವರಾತ್ರಿ ಹಬ್ಬದ ಶುಭಾಶಯಗಳು, ರಾಜ್ಯದ ಜನರ ಬದುಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ, ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗುವುದಕ್ಕೆ ಕ್ಷಮೆ ಕೋರಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್.
Published: 01st March 2022 02:47 PM | Last Updated: 01st March 2022 03:27 PM | A+A A-

ಮೇಕೆದಾಟು ಪಾದಯಾತ್ರೆ
ಬೆಂಗಳೂರು: ಮೇಕೆದಾಟು ಪಾದಯಾತ್ರೆ 2.0 ಪರಿಣಾಮ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜನತೆಯ ಕ್ಷಮೆ ಕೋರಿದ್ದಾರೆ.
ಕೆಂಗೇರಿಯ ಪೂರ್ಣಿಮಾ ಪ್ಯಾಲೇಸ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೊದಲನೇ ಹಂತದ ಭಾಗದಲ್ಲಿ ಪಾದಯಾತ್ರೆಗೆ ಸಹಕಾರ ಇತ್ತು, ರಾಜ್ಯದ ಜನರ ಬದುಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ, ಉಕ್ರೇನ್ ವಿಚಾರ ಇಲ್ಲದ್ದಿದ್ರೆ ಮಾಧ್ಯಮದವರು ಕೂಡ ಹೆಚ್ಚು ಪ್ರಚಾರ ಕೊಡುತ್ತಿದ್ದರು ಎಂದರು.
ಇಂದಿನಿಂದ ಬೆಂಗಳೂರಿನಲ್ಲಿ ಮೂರು ದಿನ ಪಾದಯಾತ್ರೆ ಮಾಡುತ್ತಿದ್ದೇವೆ. ಬೆಂಗಳೂರನಲ್ಲಿ ಟ್ರಾಫಿಕ್ ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕಾಗಿ ನಾನು ಜನತೆಯಲ್ಲಿ ಕ್ಷಮೆ ಕೇಳುತ್ತಿದ್ದೇನೆ. ನಿಮಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಮುಂದಿನ ಮೂವತ್ತು ವರ್ಷಕ್ಕೋಸ್ಕರ ನಾವು ಹೋರಾಟ ಮಾಡುತ್ತಿದ್ದೇವೆ. ಬೆಂಗಳೂರಿನ ಜನರು ನಮಗೆ ಸಹಕಾರ ಕೊಡಬೇಕು ಎಂದರು.
ಇದೇ ವೇಳೆ ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ ಡಿ.ಕೆ ಶಿವಕುಮಾರ್, ಕುಡಿಯುವ ನೀರಿನ ಯೋಜನೆಗೆ ಯಾರ ಅನುಮತಿ ಬೇಕಾಗಿಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಗೋವಿಂದ ಕಾರಜೋಳಗೆ ಇದು ಗೊತ್ತಿಲ್ವಾ? ನಾನು ಕೂಡ ಕೆಲ ತಿಂಗಳು ಜಲಸಂಪನ್ಮೂಲ ಸಚಿವನಾಗಿದ್ದೆ ಎನ್ ಓ ಸಿ ಬೇಕಾಗಿಲ್ಲ ಆದರೂ ಈ ಬಗ್ಗೆ ಸುಮ್ನೆ ಮಾತನಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ 2.0: 37 ಮಂದಿ ಕಾಂಗ್ರೆಸ್ ನಾಯಕರ ವಿರುದ್ಧ ಮತ್ತೆ ಎಫ್ಐಆರ್
ನಮ್ಮ ಪಕ್ಷದ ಪ್ರಚಾರದ ಬ್ಯಾನರ್ ಗಳನ್ನ ರಾತ್ರೋರಾತ್ರಿ ತೆಗಸಲಾಗುತ್ತಿದೆ, ಎಲ್ಲರಿಗೂ ಒಂದೇ ಕಾನೂನು ರಾಜ್ಯದಲ್ಲಿದೆ , ನಮ್ಮ ಫ್ಲೆಕ್ಸ್ ,ಬ್ಯಾನರ್ ತೆಗಸಿದ್ದಾರೆ ಆದರೆ ಯಡಿಯೂರಪ್ಪ ಹುಟ್ಟು ಹಬ್ಬ,ಅಶ್ವತ್ ನಾರಾಯಣ್ ಹುಟ್ಟುಹಬ್ಬ,ಸೋಮಣ್ಣ ಹುಟ್ಟು ಹಬ್ಬ, ಶಿವರಾತ್ರಿ ಹಬ್ಬದ ಬೋರ್ಡ್ ಹಾಕಿದ್ದಾರೆ ಇದು ಯಾವ ನ್ಯಾಯ, ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಮೇಲೆ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕಪಡಿಸಿ, ನೀವು ಬಿಬಿಎಂಪಿ ಕಚೇರಿ ಹೆಸರಿನ ಬದಲು ಬಿಜೆಪಿ ಪಾರ್ಟಿ ಅಂತ ಬೋರ್ಡ್ ಹಾಕಿಕೊಳ್ಳಿ ಎಂದು ಡಿ.ಕೆ ಶಿವಕುಮಾರ್ ಕಿಡಿ ಕಾರಿದ್ದಾರೆ.
ಪೊಲೀಸರ ವಿರುದ್ಧವೂ ಹರಿಹಾಯ್ದ ಡಿ.ಕೆ ಶಿವಕುಮಾರ್, ಪೋಲಿಸರು ಅವರ ಬಟ್ಟೆ ಬಿಚ್ಚಿ ಬಿಜೆಪಿ ಬಟ್ಟೆ ಹಾಕಿಕೊಳ್ಳಲಿ. ಶಿವಮೊಗ್ಗದಲ್ಲಿ ಯಾವ ಯಾವ ಪೊಲೀಸ್ ಅಧಿಕಾರಿಗಳು ಏನೇನು ಮಾಡುತ್ತಿದ್ದಾರೆ ನನಗೆ ಗೊತ್ತಿದೆ ಎಲ್ಲಾ ಮಾಹಿತಿ ನನ್ನ ಬಳಿ ಇದೆ. ಯಾರಿಗೂ ಅಧಿಕಾರ ಶಾಶ್ವತ ಅಲ್ಲ. ಇದು ನೆನಪಿರಲಿ ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ಸರ್ಕಾರ ಬದಲಾವಣೆಯಾಗುತ್ತೆ ಎಂದು ಡಿ ಕೆ ಶಿವಕುಮಾರ್ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಗೃಹ ಸಚಿವ ಒಬ್ಬ ನಾಲಾಯಕ್:
144 ಸೆಕ್ಷನ್ ಇದ್ದರೂ ಈಶ್ವರಪ್ಪ, ಅಲ್ಲಿನ ಸಂಸದರು ಶಿವಮೊಗ್ಗದಲ್ಲಿ ರ್ಯಾಲಿ ಮಾಡುತ್ತಾರೆ. ಅಲ್ಲಿ ನಡೆದ ಗಲಾಟೆಗೆ ಅವರೇ ಕಾರಣ. ಅವರ ಮೇಲೆ ಯಾಕೆ ಇನ್ನು ಕೇಸ್ ಹಾಕಿಲ್ಲ. ಈಶ್ವರಪ್ಪ ಸ್ಥಳೀಯ ಶಾಸಕರಾಗಿದ್ದರೆ ಅವರ ಮನಗೆ ಹೋಗಬೇಕಿತ್ತು. ಯಾರಾದರೂ ರ್ಯಾಲಿ ಮಾಡುತ್ತಾರೇನ್ರಿ. ಇದನ್ನ ಸರ್ಮಥನೆ ಮಾಡಿಕೊಳ್ಳೋ ಗೃಹ ಸಚಿವ ಒಬ್ಬ ನಾಲಾಯಕ್ ಎಂದು ಆಕ್ರೋಶ ಹೊರಹಾಕಿದ್ದಾರೆ
ನಾನು ಕೂಡ ಹರ್ಷ ಮನೆಗೆ ಹೋಗುತ್ತೇನೆ. ಅವನು ನಮ್ಮ ಹುಡುಗ. ನಮ್ಮ ಜಿಲ್ಲಾಧ್ಯಕ್ಷರ ಬಳಿ ಮಾತನಾಡಿದ್ದೇನೆ. ಪಾದಾಯಾತ್ರೆ ಬಳಿಕ ಹರ್ಷ ನಿವಾಸಕ್ಕೆ ಹೋಗುತ್ತೇನೆ ಎಂದು ಡಿ.ಕೆ ಶಿವಕುಮಾರ್ ಇದೇ ವೇಳೆ ತಿಳಿಸಿದರು.