ರೈತರ ರಕ್ಷಣೆಗಾಗಿ ಕಂದಾಯ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರದ ನಿರ್ಧಾರ: ಜೆಸಿ ಮಾಧುಸ್ವಾಮಿ
ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವವರ ವಿರುದ್ಧ ಭೂಕಬಳಿಕೆ ಪ್ರಕರಣಗಳು ದಾಖಲಾಗುತ್ತಿದ್ದು, ರೈತರನ್ನು ಕಿರುಕುಳದಿಂದ ರಕ್ಷಿಸಲು ಕಂದಾಯ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
Published: 09th March 2022 09:35 AM | Last Updated: 09th March 2022 09:35 AM | A+A A-

ಜೆಸಿ ಮಾಧುಸ್ವಾಮಿ
ಬೆಂಗಳೂರು: ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವವರ ವಿರುದ್ಧ ಭೂಕಬಳಿಕೆ ಪ್ರಕರಣಗಳು ದಾಖಲಾಗುತ್ತಿದ್ದು, ರೈತರನ್ನು ಕಿರುಕುಳದಿಂದ ರಕ್ಷಿಸಲು ಕಂದಾಯ ಕಾಯ್ದೆಗೆ ಸೂಕ್ತ ತಿದ್ದುಪಡಿ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಕಾಂಗ್ರೆಸ್ನ ಎಚ್.ಕೆ.ಪಾಟೀಲ ಅವರು ಮುಂಡರಗಿಯ ಕೇಲೂರಿನಲ್ಲಿ ನಡೆದ ಘಟನೆಯನ್ನು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಮೃತಪಟ್ಟ ಕುಟುಂಬದವರಿಗೆ ಪರಿಹಾರ ನೀಡಲಾಗುವುದು. ಅಷ್ಟೇ ಅಲ್ಲ, ಈ ಸಮಸ್ಯೆಯನ್ನು ಶಾಶ್ವತವಾಗಿ ಕೊನೆಗಾಣಿಸಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.
ಕರ್ನಾಟಕ ಭೂಕಂದಾಯ ಕಾಯ್ದೆಯ 192 (ಎ)ರ ವ್ಯಾಪ್ತಿಯಿಂದ ‘ಕೃಷಿ ಭೂಮಿ’ಯನ್ನು ಕೈಬಿಟ್ಟು ತಿದ್ದುಪಡಿ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು.
ಬೆಂಗಳೂರು ಸುತ್ತಮುತ್ತ ನಡೆಯುತ್ತಿರುವ ಭಾರೀ ಪ್ರಮಾಣದ ಭೂಕಬಳಿಕೆ ಮೇಲೆ ಕಠಿಣ ಕ್ರಮ ಜರುಗಿಸಲು ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದೆ. ಆದರೆ, ಗ್ರಾಮಾಂತರ ಪ್ರದೇಶಗಳಲ್ಲಿ ಕೃಷಿಗಾಗಿ ನಡೆದಿರುವ ಒತ್ತುವರಿ ಪ್ರಕರಣಗಳನ್ನೇ ಭೂಕಬಳಿಕೆ ಎಂದು ತರಲಾಗುತ್ತಿದೆ. ಇದರಿಂದ ದೂರದ ಊರುಗಳಿಂದ ರೈತರು ಪ್ರತಿನಿತ್ಯವೂ ನ್ಯಾಯಾಲಯಕ್ಕೆ ಬರಬೇಕಾಗಿದೆ.
8–10 ಬ್ಯಾಚ್ಗಳಲ್ಲಿ 300 ರಿಂದ 400 ರೈತರು ಬಂದು ನಿಲ್ಲುವುದನ್ನು ನೋಡಿ ನಾಚಿಕೆ ಆಗುತ್ತದೆ. ಕಾಯ್ದೆಯಲ್ಲಿ ಭೂ ಒತ್ತುವರಿ ಎಂಬುದರ ಬದಲಿಗೆ ಭೂಕಬಳಿಕೆ ಎಂಬ ಪದ ಬಳಸಲಾಗಿದೆ. ಇದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿಯ ಕಿರುಕುಳದಿಂದ ಬೇಸತ್ತು ಇಬ್ಬರು ಮಹಿಳೆಯರು ವಿಷ ಸೇವಿಸಿದ್ದು, ಅದರಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಇನ್ನೊಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಹತ್ತಾರು ವರ್ಷಗಳಿಂದ ಕಷ್ಟ ಪಟ್ಟು ಬೆಳೆಸಿದ ತೋಟವನ್ನು ನಾಶ ಮಾಡಿದ್ದಾರೆ. ಈ ಪ್ರದೇಶದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ.
ರೈತರು ಭೂ ಒತ್ತುವಾರಿ ಮಾಡಿದ್ದಾರೆಯೇ ಹೊರತು ಭೂ ಕಬಳಿಕೆ ಮಾಡಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ರಚಿಸಬೇಕು ಎಂದು ಎಚ್.ಕೆ.ಪಾಟೀಲ ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಬಿ.ಎಸ್.ಯಡಿಯೂರಪ್ಪ, ಕಿರುಕುಳದಿಂದಾಗಿಯೇ ಮಹಿಳೆಯರು ವಿಷ ಸೇವನೆ ಮಾಡಿದ್ದಾರೆ. ಈ ಘಟನೆ ದುರದೃಷ್ಟಕರ ಎಂದರು.