ಬೆಂಗಳೂರು: ಶಾಲಾ ಪಠ್ಯಪುಸ್ತಕದಲ್ಲಿ ಟಿಪ್ಪು ಪಠ್ಯ ಪರಿಷ್ಕರಣೆ ಕುರಿತ ವಿಚಾರ ದಿನೇದಿನೇ ತಾರಕಕ್ಕೇರುತ್ತಿದೆ. ಈ ಮಧ್ಯೆ ಇಂದು ಸೋಮವಾರ ಶಿಕ್ಷಣ ಸಚಿವ ಬಿ ಸಿ ನಾಗೇಶ್ ವಿಧಾನಸಭೆಯಲ್ಲಿ ಕಲಾಪ ವೇಳೆ ಈ ಕುರಿತು ಉತ್ತರಿಸಲಿದ್ದು ಟಿಪ್ಪು ಪಠ್ಯ ಪರಿಷ್ಕರಣೆಯೋ, ಅಥವಾ ಟಿಪ್ಪು ಕುರಿತ ವಿಷಯವನ್ನು ಪಠ್ಯದಿಂದ ತೆಗೆದುಹಾಕುವುದೋ ಎಂಬ ಗೊಂದಲಗಳಿಗೆ ತೆರೆ ಎಳೆಯಲಿದ್ದಾರೆ.
ವಿರೋಧ ಪಕ್ಷಗಳು ಟಿಪ್ಪು ಕುರಿತ ಪಠ್ಯವನ್ನು ತೆಗೆಯುವುದಕ್ಕೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದ್ದು ಸದನದಲ್ಲಿ ತೀವ್ರ ಗದ್ದಲ, ಕೋಲಾಹಲ ಏರ್ಪಡುವ ಸಾಧ್ಯತೆಯಿದೆ. ಸರ್ಕಾರದ ನಿಲುವಿಗೆ ಈಗಾಗಲೇ ಕಾಂಗ್ರೆಸ್ ಮುಖಂಡ ಯು ಟಿ ಖಾದರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಟಿಪ್ಪು ಕುರಿತ ಪಠ್ಯದ ಪರಿಷ್ಕರಣೆ ಬಗ್ಗೆ ಮಾಹಿತಿ ನೀಡುವುದಾಗಿ ಸಚಿವ ಬಿ ಸಿ ನಾಗೇಶ್ ಹೇಳಿದ್ದರು. ಈಗಾಗಲೇ ಟಿಪ್ಪು ಪಠ್ಯ ಪರಿಷ್ಕರಣೆಯಾಗಿ ಸರ್ಕಾರದ ಕೈ ಸೇರಿದೆ. ಪಠ್ಯಪುಸ್ತಕ ಸಮಿತಿ ಸದಸ್ಯ ಚಕ್ರತೀರ್ಥರಿಂದ ವರದಿ ತರಿಸಿಕೊಂಡಿದ್ದು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ.
ಇಂದು ಸದನದಲ್ಲಿ ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಸಚಿವ ಬಿ ಸಿ ನಾಗೇಶ್ ಉತ್ತರಿಸಲಿದ್ದಾರೆ. ಟಿಪ್ಪು ಕುರಿತ ವಿವಾದಕ್ಕೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಬಿ ಸಿ ನಾಗೇಶ್, ಇತಿಹಾಸವನ್ನು ತಿರುಚುವ ಕೆಲಸ ಮಾಡಿದ್ದರೆ ಅದನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದೇವೆ. ಮಕ್ಕಳು ಓದಬೇಕಾಗಿರುವ ಕೆಲವು ಪಠ್ಯಗಳನ್ನು ತಂದಿದ್ದೇವೆ, ಇದರಲ್ಲಿ ಯಾವುದೇ ರೀತಿಯ ರಾಜಕೀಯವಿಲ್ಲ. ಸಮಿತಿಯಲ್ಲಿಯೂ ರಾಜಕೀಯವಿಲ್ಲ ಎಂದಿದ್ದಾರೆ.
Advertisement