ವರ್ಷಾಂತ್ಯದಲ್ಲಿ ಮಹದಾಯಿಗೆ ಚಾಲನೆ: ಕೇಂದ್ರದ ಬೆನ್ನು ಬಿದ್ದ ಸಿಎಂ ಬೊಮ್ಮಾಯಿ
ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ಮಹದಾಯಿ ಯೋಜನೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಜನತೆಯ ಬಹುದಿನಗಳ ಬೇಡಿಯಾಗಿರುವ ಕಳಸಾ ಬಂಡೂರಿ ಕುಡಿಯುವ...
Published: 06th May 2022 09:16 AM | Last Updated: 06th May 2022 01:38 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನ ಮಹದಾಯಿ ಯೋಜನೆಗೆ ಚಾಲನೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಜನತೆಯ ಬಹುದಿನಗಳ ಬೇಡಿಯಾಗಿರುವ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗೆ ತ್ವರಿತ ಜಾರಿಗೊಳಿಸಲು ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹದಾಯಿ ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಗೋವಾ ಸರ್ಕಾರದ ನೆಪ ಹೇಳುತ್ತ ಸಾಗಿದರೆ, ಕರ್ನಾಟಕದ ಜನತೆಗೆ ಉತ್ತರ ಹೇಳುವುದು ಕಷ್ಟವಾಗಲಿದೆ. ಗೋವಾ ವಿಧಾನಸಭೆ ಚುನಾವಣೆಗಳೂ ಮುಕ್ತಾಯವಾಗಿದ್ದು, ಈಗಲೂ ಅನಗತ್ಯ ವಿಳಂಬ ಮಾಡುವುದರಿಂದ ಸರ್ಕಾರದ ನಡೆಯ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಭಾವನೆ ಮೂಡುತ್ತದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಳಂಬ ಧೋರಣೆ ಮಾಡುವುದು ಸರಿಯಲ್ಲ ಎಂದು ಖಡಕ್ ಆಗಿಯೇ ಒತ್ತಾಯಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ರೀತಿ ತೊಂದರೆ ಆಗಲ್ಲ: ಸಿಎಂ ಬೊಮ್ಮಾಯಿ
ಮಾಹಿತಿ ಕೇಳಿದ ಕೇಂದ್ರ: ರಾಜ್ಯ ಸರ್ಕಾರದ ಒತ್ತಡದ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗ ಮಹದಾಯಿ ಯೋಜನೆ ಅನುಷ್ಠಾನಗೊಳಿಸುವುದರಿಂದ ಪರಿಸರದ ಮೇಲಾಗುವ ಪರಿಣಾಮ ಮತ್ತು ಹಾನಿಯ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು ಎಂದು ತಿಳಿದು ಬಂದಿದ್ದು, ಕೇಂದ್ರ ಜಲ ಆಯೋಗದ ಸೂಚನೆ ಮೇರೆಗೆ ಸಿಎಂ ಒಂದು ವಾರದ ಹಿಂದೆ ಮತ್ತೊಂದು ಪತ್ರ ಬರೆದಿದ್ದಾರೆ.
ಪತ್ರ ಬರೆದ ಸಿಎಂ: ಕೇಂದ್ರ ಸರ್ಕಾರ ಮಹಾದಾಯಿ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರದಿಂದ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ನೀಡಬೇಕಿದೆ. ಮಹದಾಯಿ ನ್ಯಾಯಮಂಡಳಿ ಆದೇಶದಂತೆ ಕರ್ನಾಟಕದ ಪಾಲಿನ ನೀರನ್ನು ಧಾರವಾಡ ಹುಬ್ಬಳ್ಳಿ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಕುಡಿಯುವ ನೀರು ಒದಗಿಸಲು ಮಲಪ್ರಭಾ ನದಿಗೆ ಕಳಸಾ ಮತ್ತು ಬಂಡೂರಿ ನಾಲೆಗಳ ಮೂಲಕ ಮಹದಾಯಿ ನೀರು ಹರಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯ ಸಿದ್ದತೆ ಮಾಡಿಕೊಂಡಿದೆ. ಪರಿಸರದ ಮೇಲೆ ಹೆಚ್ಚಿನ ಪರಿಣಾಮ ಆಗದಿರುವುದು ಹಾಗೂ ಈ ಯೋಜನೆ ಜಾರಿಯಿಂದ ಅರಣ್ಯ ನಾಶ ಪ್ರಮಾಣ ಕಡಿಮೆ. ಅದಕ್ಕೆ ಪರ್ಯಾಯವಾಗಿ ರಾಜ್ಯ ಸರ್ಕಾರ ಹಾಕಿಕೊಂಡಿರುವ ಯೋಜನೆ ಕುರಿತು ಮಾಹಿತಿ ನೀಡಿ, ಆದಷ್ಟು ಶೀಘ್ರ ಅನುಮತಿ ನೀಡುವಂತೆ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ: ಸಂಪುಟ ವಿಸ್ತರಣೆ, ನೀರಾವರಿ ಯೋಜನೆ, ಜಿಎಸ್ಟಿ ಕುರಿತು ಚರ್ಚೆ
ಚುನಾವಣೆಗೂ ಮುನ್ನ ಚಾಲನೆ: ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನವೇ ಯೋಜನೆಗೆ ಅಧಿಕೃತ ಚಾಲನೆ ನೀಡಿ, ಉತ್ತರ ಕರ್ನಾಟಕ ಭಾಗದ ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಸರತ್ತು ನಡೆಸಿದ್ದು, 2008ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರೇ ಮಹದಾಯಿ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಈಗ ತಾವು ಮುಖ್ಯಮಂತ್ರಿಯಾಗಿರುವಾಗ ಈ ಯೋಜನೆಗೆ ಅಧಿಕೃತ ಚಾಲನೆ ನೀಡಲು ಆಸಕ್ತಿ ವಹಿಸಿ ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಮೇಕೆದಾಟು ಬಳಿಕ ಮಹದಾಯಿ: ಟ್ರ್ಯಾಕ್ಟರ್ ರ್ಯಾಲಿಗೆ ಕಾಂಗ್ರೆಸ್ ನಾಯಕರು ಮುಂದು
ಹಣ ಮೀಸಲು: ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯದ ಪಾಲಿನ ನೀರಿನ ಬಳಕೆಗೆ ಅನುವಾಗುವಂತೆ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಅದರ ಆಧಾರದಲ್ಲಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಸಚಿವ ಸಂಪುಟ ಸಹ ಅನುಮೋದನೆಗಳನ್ನು ನೀಡಿದೆ. ಇದರಿಂದ 2.18 ಟಿಎಂಸಿ ನೀರು ಪಡೆಯುವ ಬಂಡೂರ ನಾಲಾ ತಿರುವಿಗೆ ಮತ್ತು ಕಳಸಾ ನಾಲೆಯಿಂದ 3.56 ಟಿಎಂಸಿ ಪೈಕಿ 1.72 ಟಿಎಂಸಿ ನೀರು ಪಡೆಯುವ ಯೋಜನೆಗಳಿಗೆ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಗೆ 1675 ಕೋಟಿ ರೂ. ಆಡಳಿತಾತ್ಮಕ ಅನುಮೋದನೆಯನ್ನೂ ಸರ್ಕಾರ ನೀಡಿದೆ. ಈ ಯೋಜನೆಗೆ ಸಂಬಂಧಿಸಿದಂತೆ 2.18 ಟಿಎಂಸಿ ನೀರು ಪಡೆಯುವ ಬಂಡೂರಿ ಬಂಡೂರಾ ನಾಲಾ ತಿರುವಿಗೆ 791 ಕೋಟಿ ರೂ. ಪರಿಷ್ಕೃತ ಅಂದಾಜು, ಕಳಸಾ ನಾಲೆಯಿಂದ 3.56 ಟಿಎಂಸಿ ಪೈಕಿ 1.72 ಟಿಎಂಸಿ ನೀರು ಪಡೆಯುವ ಯೋಜನೆಗೆ 885.80 ಕೋಟಿ ರೂ. ಅನುಮೋದನೆ ನೀಡಿದೆ.