ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ
ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವ ಬಗ್ಗೆ ರಾಜ್ಯ ಸರ್ಕಾರ ಮಂಗಳವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ.
Published: 10th May 2022 05:38 PM | Last Updated: 13th May 2022 09:40 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವ ಬಗ್ಗೆ ರಾಜ್ಯ ಸರ್ಕಾರ ಮಂಗಳವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಾರ್ಗಸೂಚಿ ಆದೇಶ ಹೊರಡಿಸಿದ್ದಾರೆ. ಇದಕ್ಕೂ ಮೊದಲು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು, ಈ ಕುರಿತು ತೀರ್ಮಾನಕ್ಕೆ ಬರುವ ಸಲುವಾಗಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡಿಜಿ ಹಾಗೂ ಐಜಿಪಿ, ಹೆಚ್ಚುವರಿ ಅಡ್ವೊಕೇಟ್ ಜನರಲ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ, ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿದ್ದರು.
ಇದನ್ನು ಓದಿ: ಆಜಾನ್-ಭಜನೆ ಸಂಘರ್ಷ: ಸಾರ್ವಜನಿಕ ಸ್ಥಳಗಳಲ್ಲಿ ಲೌಡ್ ಸ್ಪೀಕರ್ ಬಳಕೆಗೆ ಶೀಘ್ರ ಮಾರ್ಗಸೂಚಿ ಬಿಡುಗಡೆ
ಈ ಸಂದರ್ಭದಲ್ಲಿ ಧ್ವನಿವರ್ಧಕಗಳ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶ, ರಾಜ್ಯ ಸರ್ಕಾರವು ಶಬ್ದ ಮಾಲಿನ್ಯ (ನಿಯಮ ಮತ್ತು ನಿಯಂತ್ರಣ) ರೂಪಿಸಿರುವ ನಿಯಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಬಳಿಕ ಇಲ್ಲಿ ಹೇಳಿರುವ ಅಂಶಗಳನ್ನು ಜಾರಿಗೆ ತರಲು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಆದೇಶ ನೀಡಿದ್ದಾರೆ.
ಶಬ್ದ ಮಾಲಿನ್ಯ (ನಿಯಮ ಮತ್ತು ನಿಯಂತ್ರಣ) ನಿಯಮಗಳು, 2000, ನಿಯಮ 3(1) ಅಡಿಯಲ್ಲಿ ಹೇಳಿರುವಂತೆ ‘ಹಗಲಿನ ಸಮಯ’ ಎಂದರೆ ಬೆಳಗ್ಗೆ 6.00 ರಿಂದ ಬೆಳಗ್ಗೆ 10.00 ರವರೆಗೆ ಬಳಸಬಹುದು ಮತ್ತು ರಾತ್ರಿಯ ಸಮಯ ಎಂದರೆ ರಾತ್ರಿ 10.00 ರಿಂದ ಬೆಳಗ್ಗಿನ ಜಾವ 6.00 ರವರೆಗೆ ಸಾರ್ವಜನಿಕವಾಗಿ ಧ್ವನಿವರ್ಧಕ ಬಳಕೆ ಮಾಡುವಂತಿಲ್ಲ. ಉಳಿದ ಸಮಯದಲ್ಲಿ ಧ್ವನಿವರ್ಧಕ ಬಳಕೆ ಮಾಡಲು ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆದಿರಬೇಕು.
ಮಾರ್ಗಸೂಚಿ ಪ್ರಕಾರ ಧ್ವನಿವರ್ಧಕಗಳು ಅಥವಾ ಸಾರ್ವಜನಿಕ ವಿಳಾಸ ವ್ಯವಸ್ಥೆಯನ್ನು ಬಳಸುವ ಎಲ್ಲಾ ಬಳಕೆದಾರರು 15 ದಿನಗಳೊಳಗೆ ಗೊತ್ತುಪಡಿಸಿದ ಪ್ರಾಧಿಕಾರದಿಂದ ಲಿಖಿತ ಅನುಮತಿಯನ್ನು ಪಡೆಯಬೇಕು. ಪಡೆಯದವರು ಸ್ವಯಂಪ್ರೇರಣೆಯಿಂದ ತೆಗೆದುಹಾಕಬೇಕು ಅಥವಾ ಗೊತ್ತುಪಡಿಸಿದ ಪ್ರಾಧಿಕಾರವು ತೆಗೆದುಹಾಕಲು ಕ್ರಮ ತೆಗೆದುಕೊಳ್ಳಬೇಕು.
ಅನುಮತಿ ನೀಡುವ ಪ್ರಾಧಿಕಾರಗಳು: ಎಲ್ಲ ಪೊಲೀಸ್ ಕಮಿಷನರೇಟ್ ಪ್ರದೇಶಗಳಲ್ಲಿ – ಸಹಾಯಕ ಪೊಲೀಸ್ ಕಮಿಷನರ್ ಜುರಿಸ್ಡಿಕ್ಷನಲ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿ. ಇತರ ಪ್ರದೇಶಗಳಲ್ಲಿ ಡಿವೈಎಸ್ಪಿ, ತಾಲ್ಲೂಕು ದಂಡಾಧಿಕಾರಿ (ತಹಸಿಲ್ದಾರ್).
ಲೌಡ್ ಸ್ಪೀಕರ್ಗಳು ಮತ್ತು ಸಾರ್ವಜನಿಕ ವಿಳಾಸ ವ್ಯವಸ್ಥೆಯನ್ನು ಬಳಸುವ ಎಲ್ಲಾ ಆವರಣಗಳಿಗೆ ಇದು ಅನ್ವಯಿಸುತ್ತದೆ. ಇದನ್ನು ತಕ್ಷಣದ ಪರಿಣಾಮದೊಂದಿಗೆ ಕಾರ್ಯಗತಗೊಳಿಸಲು ಅಗತ್ಯವಿರುವ ಸರ್ಕಾರಿ ನಿರ್ದೇಶನಗಳನ್ನು ಸಂಬಂಧಪಟ್ಟವರಿಗೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ನಿರ್ಬಂಧಿಸಿದ ವೇಳೆಗಳಲ್ಲಿ ಪ್ರಾರ್ಥನಾ ಮಂದಿರಗಳಲ್ಲಿ ಆಜಾನ್ಗೆ ಲೌಡ್ ಸ್ಪೀಕರ್ ಬಳಕೆ ನಿಲ್ಲಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿ ದೇವಸ್ಥಾನಗಳಲ್ಲಿ ಸುಪ್ರಭಾತ, ಭಜನೆ ಮತ್ತು ಹನುಮಾನ್ ಚಾಲೀಸ್ ಅನ್ನು ಮೇ 9ರ ಬೆಳಗ್ಗಿನ ಜಾವದಿಂದ ಆರಂಭಿಸಿವೆ ಎಂಬುದನ್ನು ಸ್ಮರಿಸಬಹುದು.