ಸ್ಥಳದಲ್ಲಿ ದೇವರು ಇರುವುದು ನಿಜ, ದೇವಾಲಯ ನಾಶವಾಗಿದ್ದು ಮರುಸ್ಥಾಪಿಸಬೇಕಿದೆ: ತಾಂಬೂಲ ಪ್ರಶ್ನೆಗೆ ಕೇರಳದ ದೈವಜ್ಞರಿಂದ ಉತ್ತರ
ಮಳಲಿ ಮಸೀದಿ ನವೀಕರಣದ ವೇಳೆ ದೇವಾಲಯದ ಮಾದರಿ ರಚನೆ ಪತ್ತೆಯಾದ ಹಿನ್ನೆಲೆಯಲ್ಲಿ ದೈವ ಸಾನಿಧ್ಯ ದೃಢೀಕರಣಕ್ಕಾಗಿ ಬುಧವಾರ ಬೆಳಗ್ಗೆ 8 ಗಂಟೆಯಿಂದ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಆರಂಭವಾಗಿದ್ದು, ಈ ವೇಳೆ ಕೇರಳ ದೈವಜ್ಞರು ಸ್ಥಳದಲ್ಲಿ ಈ ಹಿಂದೆ ದೇವದಾಲಯವಿತ್ತು...
Published: 25th May 2022 10:40 AM | Last Updated: 25th May 2022 01:32 PM | A+A A-

ತಾಂಬೂಲ ಪ್ರಶ್ನೆ ಕೇಳುತ್ತಿರುವುದು.
ಮಂಗಳೂರು: ಮಳಲಿ ಮಸೀದಿ ನವೀಕರಣದ ವೇಳೆ ದೇವಾಲಯದ ಮಾದರಿ ರಚನೆ ಪತ್ತೆಯಾದ ಹಿನ್ನೆಲೆಯಲ್ಲಿ ದೈವ ಸಾನಿಧ್ಯ ದೃಢೀಕರಣಕ್ಕಾಗಿ ಬುಧವಾರ ಬೆಳಗ್ಗೆ 8 ಗಂಟೆಯಿಂದ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಆರಂಭವಾಗಿದ್ದು, ಈ ವೇಳೆ ಕೇರಳ ದೈವಜ್ಞರು ಸ್ಥಳದಲ್ಲಿ ಈ ಹಿಂದೆ ದೇವದಾಲಯವಿತ್ತು, ವಿವಾದದಿಂದ ದೇವಾಲಯ ನಾಶಪಡಿಸಲಾಗಿದೆ, ದೇವಸ್ಥಾನ ಮರುಸ್ಥಾಪಿಸಬೇಕೆಂದು ಹೇಳಿದ್ದಾರೆ.
ತಾಂಬೂಲ ಪ್ರಶ್ನೆ ವೇಳೆ ಕೇರಳದ ಪ್ರಖ್ಯಾತ ಜ್ಯೋತಿಷಿ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಅವರು ಉತ್ತರ ನೀಡಿದ್ದು, ಮಳಲಿಯ ಮಸೀದಿ ಸ್ಥಳದಲ್ಲಿ ದೇವರು ಇರುವುದು ನಿಜ ಎಂದು ಹೇಳಿದ್ದಾರೆ.
ಸಾಮಾನ್ಯ ತಾಂಬೂಲ ಪ್ರಶ್ನೆಯಲ್ಲಿ ಪೂರ್ಣವಾದ ಚೈತನ್ಯವಿದೆ. ನಾವು ಪ್ರಾರ್ಥಿಸಿ ಇಟ್ಟ ರಾಶಿಯಲ್ಲಿ ದೇವರು ಇರುವುದು ನಿಜ. ಪೂರ್ವದಲ್ಲಿ ಇದೊಂದು ಮಠದ ರೂಪದಲ್ಲಿತ್ತು. ಇದು ದೈವ ಸಾನ್ನಿಧ್ಯ ಇದ್ದಂತಹ ಸ್ಥಳ. ವಿವಾದದಿಂದಾಗಿ ದೇವಾಲಯ ನಾಶಪಡಿಸಿ, ಮಸೀದಿ ಕಟ್ಟಲಾಗಿದೆ. ದೇವಾಲಯವನ್ನು ಮರುಸ್ಥಾಪಿಸಬೇಕಿದೆ ಎಂದು ತಿಳಿಸಿದ್ದಾರೆ.
ಪುರಾತನ ಕಾಲದಲ್ಲಿ ಈ ಸ್ಥಳದಲ್ಲಿ ಗುರುಮಠದ ಸಾನಿಧ್ಯ ಇರುವುದು ತಾಂಬೂಲ ಪ್ರಶ್ನೆಯಲ್ಲಿ ತಿಳಿದುಬಂದಿದೆ. ಹಿಂದಿನ ಕಾಲದಲ್ಲಿ ವಿವಾದದಿಂದ (ಶೈವ/ವೈಷ್ಣವ ವಿವಾದ) ನಾಶವಾಯಿತು. ಆ ಸಂದರ್ಭದಲ್ಲಿ ಒಂದು ಮರಣವೂ ಆಗಿದೆ. ನಾಶವಾದಾಗ ಈ ಸ್ಥಳದಲ್ಲಿ ಇದ್ದವರು ಇಲ್ಲಿಂದ ಹೋಗಿದ್ದಾರೆ. ಇಲ್ಲಿಂದ ಮಠವನ್ನು ಕೂಡ ಬೇರೆಡೆ ಸ್ಥಳಾಂತರ ಮಾಡಿದ್ದಾರೆ. ಆದರೆ, ಅವರು ಪೂರ್ಣವಾಗಿ ಕೊಂಡು ಹೋಗಿಲ್ಲ. ಅರ್ಧ ಸಾನಿಧ್ಯ ಇಲ್ಲಿಯೇ ಉಳಿದಿದೆ.
ಇದೀಗ ಈ ಜಾಗದ ಮಾಲಕತ್ವ ಹೊಂದಿರುವವರೂ ಸೇರಿದಂತೆ ಎಲ್ಲರೂ ಒಟ್ಟಾಗಿ ಜೀರ್ಣೋದ್ಧಾರ ಮಾಡಬೇಕು. ಇಲ್ಲದಿದ್ದರೆ ಊರಿಗೆ ಗಂಡಾಂತರವಿದೆ. ಈ ಪ್ರದೇಶದಲ್ಲಿ ಶಿವಕಲೆಯಿದೆ. ಅಲ್ಲಿ ಶಿವಸಾನಿಧ್ಯವಿದೆ. ಇದರ ಆರಾಧನೆ ಮಾಡಿದ ಪೂರ್ವಿಕರ ಮನೆಯಲ್ಲಿ ಈಗಲೂ ಪೂಜೆ ಮಾಡಲಾಗುತ್ತಿದೆ ಎಂದಿದ್ದಾರೆ.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಜಿಲ್ಲಾಡಳಿತ ಮಂಡಳಿ ಪರಿಸ್ಥಿತಿಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಗತ್ಯ ಕ್ರಮಗಳ ಕೈಗೊಂಡಿದೆ. ಈಗಾಗಲೇ ಸ್ಥಳದಲ್ಲಿ ಸೆಕ್ಷನ್ 144 ಜಾರಿ ಮಾಡಿದೆ ಎಂದು ಹೇಳಿದ್ದಾರೆ.