ತುಮಕೂರು: ತುಮಕೂರಿನಲ್ಲಿ ಇತ್ತೀಚೆಗೆ ಮಹಿಳೆ ಮತ್ತು ಅವಳ ಶಿಶುಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ವಿರುದ್ಧ ಹೇಳಿಕೆ ನೀಡದಂತೆ ಪೊಲೀಸರು ಒತ್ತಡ ಹಾಕುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ತುಮಕೂರು ಜಿಲ್ಲಾಸ್ಪತ್ರೆ ವೈದ್ಯರು ಮತ್ತು ಮೂವರು ದಾದಿಯರ ವಿರುದ್ಧ ಹೇಳಿಕೆ ನೀಡದಂತೆ ಪೊಲೀಸರ ಒತ್ತಡವಿದೆ ಎಂದು ಭಾರತೀಗರ ನಿವಾಸಿಗಳು ಆರೋಪಿಸಿದ್ದಾರೆ. ಜಿಲ್ಲಾ ಜನರಲ್ ಆಸ್ಪತ್ರೆಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಹೆರಿಗೆ ನೋವು ಕಾಣಿಸಿಕೊಂಡಿದ್ದ ಕಸ್ತೂರಿ (30) ಬುಧವಾರ ರಾತ್ರಿ ನೆರೆಮನೆಯ ಸರೋಜಮ್ಮ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದರೆ ಕಸ್ತೂರಿ ಅವರು ತಮ್ಮ ಆಧಾರ್ ಕಾರ್ಡ್ ಮತ್ತು ಸರ್ಕಾರಿ ಆರೋಗ್ಯ ಕಾರ್ಡ್ ಅನ್ನು ನೀಡಲು ವಿಫಲವಾದ ನಂತರ ಚಿಕಿತ್ಸೆ ನಿರಾಕರಿಸಲಾಯಿತು, ಹೀಗಾಗಿ ಆಕೆ ಮನೆಗೆ ಹಿಂದಿರುಗಿದರು, ಗುರುವಾರ ಬೆಳಿಗ್ಗೆ, ಅವಳಿ ಮಕ್ಕಳ ಜೊತೆ ಕಸ್ತೂರಿ ಸಾವನ್ನಪ್ಪಿದ್ದರು.
ಶುಕ್ರವಾರ ಭಾರತೀನಗರಕ್ಕೆ ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಸದಸ್ಯ ಕೆ.ದೊರೈರಾಜು ನೇತೃತ್ವದ ನಿಯೋಗ ಭೇಟಿ ನೀಡಿದಾಗ, ಸರೋಜಮ್ಮ ಸೇರಿದಂತೆ ನಿವಾಸಿಗಳು, ತನಿಖೆಯ ಸಂದರ್ಭದಲ್ಲಿ ಪೊಲೀಸರು ವೈದ್ಯ ಮತ್ತು ನರ್ಸ್ ಗಳ ವಿರುದ್ಧ ಹೇಳಿಕೆ ನೀಡದಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣದಲ್ಲಿ ನಮ್ಮ ಹೆಸರನ್ನು ಸೇರಿಸುವುದಾಗಿ ಹೆದರಿಸುತ್ತಿದ್ದಾರೆ ಎಂದು ನಿಯೋಗಕ್ಕೆ ತಿಳಿಸಿದ್ದಾರೆ. . ಸಂತ್ರಸ್ತೆ ಆಸ್ಪತ್ರೆಗೆ ಭೇಟಿ ನೀಡಿದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಈಗಾಗಲೇ ಪೊಲೀಸರ ಬಳಿ ಇದ್ದು, ಅವರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸ್ ಅಧೀಕ್ಷಕ ರಾಹುಲ್ಕುಮಾರ್ ಶಹಾಪುರವಾಡ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ನಾಗರಿಕರು ಸಾಕ್ಷಿ ಸಮೇತ ತಮ್ಮ ಗಮನಕ್ಕೆ ತಂದರೆ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
Advertisement