ಬೆಂಗಳೂರು: ಶೀಘ್ರಗತಿಯಲ್ಲಿ ತಮ್ಮ ಉದ್ಯೋಗಗಳ ಖಾಯಂಗೊಳಿಸಿ, ಸೌಲಭ್ಯಗಳ ಒದಗಿಸದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಪೌರಕಾರ್ಮಿಕರು ಭಾನುವಾರ ಎಚ್ಚರಿಕೆ ನೀಡಿದ್ದಾರೆ.
ಅಖಿಲ ಭಾರತ ಕೇಂದ್ರೀಯ ಕಾರ್ಮಿಕ ಒಕ್ಕೂಟ (ಎಐಸಿಸಿಟಿಯು) ಖಾಯಂ ಉದ್ಯೋಗ ಹಾಗೂ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ನಿನ್ನೆ ಬಿಬಿಎಂಪಿ ಪೌರಕಾರ್ಮಿಕ ಸಂಘ ಸಮಾವೇಶ ನಡೆಸಿತು.
“ರಾಜ್ಯದಾದ್ಯಂತ ಎಲ್ಲಾ ಪೌರಕಾರ್ಮಿಕರಿಗೆ ಖಾಯಂ ಉದ್ಯೋಗ ಮತ್ತು ಇತರ ಮೂಲ ಸೌಕರ್ಯಗಳಿಗೆ ಒತ್ತಾಯಿಸಿ ಜುಲೈ 1 ರಂದು ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ನಡೆಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಬೊಮ್ಮಾಯಿಯವರು ಭರವಸೆ ಈಡೇರಿಸುವುದಾಗಿ ತಿಳಿಸಿದ್ದರು. ಈ ಸಂಬಂಧ ಸಮಿತಿ ರಚಿಸುವುದಾಗಿಯೂ ಹೇಳಿದ್ದರು. ಆದರೆ, ಇದೀಗ 48 ಸಾವಿರ ಕಾರ್ಮಿಕರ ಪೈಕಿ ಕೇವಲ 11 ಸಾವಿರ ಪೌರಕಾರ್ಮಿಕರ ಉದ್ಯೋದ ಖಾಯಂಗೊಳಿಸುವುದಾಗಿ ಸರ್ಕಾರ ಹೇಳಿರುವುದು ಬೇಸರ ತರಿಸಿದೆ ಎಂದು ಬಿಬಿಎಂಪಿ ಪೌರಕಾರ್ಮಿಕ ಸಂಘದ ಅಧ್ಯಕ್ಷೆ ನಿರ್ಮಲಾ ಹೇಳಿದ್ದಾರೆ.
ಸರ್ಕಾರ ಕೂಡಲೇ ಉಳಿದ ಕಾರ್ಮಿಕರ ಉದ್ಯೋಗಗಳನ್ನೂ ಖಾಯಂಗೊಳಿಸಬೇಕು. ಅವರಿಗೆ ಯೋಗ್ಯ ವೇತನ, ಸಕಾಲದಲ್ಲಿ ವೇತನ, ನಿವೇಶನ, ವಿಶ್ರಾಂತಿ ಕೊಠಡಿ, ಹೆರಿಗೆ ರಜೆ, ಪಿಂಚಣಿ, ಸಾವು-ನೋವುಗಳಿಗೆ ಪರಿಹಾರ, ಮಕ್ಕಳಿಗೆ ಶಿಕ್ಷಣ ಸೌಲಭ್ಯಗಳ ಕೊಡಬೇಕೆಂದು ನಿರ್ಮಲಾ ಅವರು ಒತ್ತಾಯಿಸಿದ್ದಾರೆ.
ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಮತ್ತು ಸಹಾಯಕರ ಸಂಘದ ಪ್ರಧಾನ ಕಾರ್ಯದರ್ಶಿ ಕೇಶವ ನಾಯಕ್ ಅವರು ಮಾತನಾಡಿ, ''ಕಾರ್ಮಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಚಾಲಕರು ಮತ್ತು ಸಹಾಯಕರು ಇನ್ನೂ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಕಾನೂನಿನ ಪ್ರಕಾರ ಸೇವಾ ಸೌಲಭ್ಯಗಳನ್ನು ಒದಗಿಸಿಲ್ಲ. ಅವರನ್ನೂ ಸರ್ಕಾರ ಪೌರಕಾರ್ಮಿಕರೆಂದು ಗುರುತಿಸಬೇಕೆಂದು ಆಗ್ರಹಿಸಿದ್ದಾರೆ.
Advertisement