ದಾವಣಗೆರೆ: 'ಹಿಂದೂ' ಎನ್ನುವ ಪದ ಪರ್ಷಿಯನ್ ಮೂಲದ್ದು. ಈ ಪದದ ಅರ್ಥ ಅಶ್ಲೀಲವಾಗಿದೆ ಎಂಬ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಬುಧವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ಶಾಸಕ ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿಗೆ ಧಮ್ ಇದ್ದರೆ ಕುರಾನ್, ಬೈಬಲ್ ಕುರಿತು ಮಾತನಾಡಲಿ. ಕ್ರಿಶ್ಚಿಯನ್ ಅಥವಾ ಇಸ್ಲಾಂ ಬಗ್ಗೆ ಮಾತನಾಡಿದ್ದರೆ ಇಷ್ಟೊತ್ತಿಗೆ ಗೋರಿಯಲ್ಲಿ ಇರುತ್ತಿದ್ದರು ಎಂದು ಹೇಳಿದ್ದಾರೆ.
ಹಿಂದೂಗಳಿಗೆ ತಾಳ್ಮೆ ಜಾಸ್ತಿಯಿದೆ, ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡಬೇಡಿ. ಬಹಿರಂಗವಾಗಿ ಇಂತಹ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ನೀಡಬಾರದು ಎಚ್ಚರಿಸಿದ್ದಾರೆ.
ಸ್ಮಶಾನದಲ್ಲಿ ಪೂಜೆ, ಮದುವೆ ಮಾಡುತ್ತಾರೆ. ಅವರಿಗೆ ಹಿಂದೂ ಧರ್ಮದ ಬಗ್ಗೆ ಮಾತನಾಡುವ ಹಕ್ಕಿಲ್ಲ. ಹಿಂದೂ ಎಂಬ ಶಬ್ಧ ಬಹಳ ಹಳೆಯದು. ಇದಕ್ಕೆ 2,400 ವರ್ಷಗಳ ಇತಿಹಾಸವಿದೆ. ಕೂಡಲೇ ಸತೀಶ್ ಜಾರಕಿಹೋಳಿ ಹಿಂದೂಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮಾಜಿ ಶಾಸಕ ಬಿ ಟಿ ಲಲಿತಾ ನಾಯಕ್ ವಿರುದ್ಧ ಗರಂ ಆದ ಮುತಾಲಿಕ್, ದೈವಿಕ ನರ್ತಕರಿಗೆ 2 ಸಾವಿರ ರೂ ಮಾಶಾಸನ ನೀಡುವುದು ತಪ್ಪು ಎಂಬ ಹೇಳಿಕೆಯನ್ನು ಖಂಡಿಸಿದರು.
ಮಸೀದಿಯಲ್ಲಿ ಆಜಾನ್ ಕೂಗುವ ಮುಸ್ಲಿಮರಿಗೂ ಸರ್ಕಾರ ಮಾಶಾಸನ ನೀಡುತ್ತಿದೆ. ತಾಕತ್ತಿದ್ದರೆ ಅದರ ಬಗ್ಗೆಯೂ ಮಾತನಾಡಿ. ಅದನ್ನು ಹೊರತುಪಡಿಸಿ ಹಿಂದೂಗಳ ಬಗ್ಗೆ ಮಾತನಾಡೋದಲ್ಲ ಎಂದರು.
Advertisement