ಗಿಗ್ ಕಾರ್ಮಿಕರಿಗೆ ಸವಲತ್ತುಗಳ ವಿಸ್ತರಿಸಲು ಸರ್ಕಾರ ಮುಂದು!

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಗಿಗ್ ಕಾರ್ಮಿಕರಿಗೆ ವಾರದ ರಜೆ, ನೌಕರರ ರಾಜ್ಯ ವಿಮೆ (ಇಎಸ್‌ಐ), ಭವಿಷ್ಯ ನಿಧಿ ಮತ್ತು ಆರೋಗ್ಯ ವಿಮೆಯಂತಹ ಪ್ರಯೋಜನಗಳನ್ನು ವಿಸ್ತರಿಸುವ ಹೊಸ ನೀತಿಯನ್ನು ಹೊರತರಲು ರಾಜ್ಯ ಸರ್ಕಾರ ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಗಿಗ್ ಕಾರ್ಮಿಕರಿಗೆ ವಾರದ ರಜೆ, ನೌಕರರ ರಾಜ್ಯ ವಿಮೆ (ಇಎಸ್‌ಐ), ಭವಿಷ್ಯ ನಿಧಿ ಮತ್ತು ಆರೋಗ್ಯ ವಿಮೆಯಂತಹ ಪ್ರಯೋಜನಗಳನ್ನು ವಿಸ್ತರಿಸುವ ಹೊಸ ನೀತಿಯನ್ನು ಹೊರತರಲು ರಾಜ್ಯ ಸರ್ಕಾರ ಮುಂದಾಗಿದೆ.

ಆಹಾರ ವಿತರಣಾ ಏಜೆಂಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್ ಆಧಾರಿತ ಚಾಲಕರು ಸೇರಿದಂತೆ ಗಿಗ್ ಕಾರ್ಮಿಕರಿಗೆ ಪ್ರಯೋಜನಗಳನ್ನು ಒದಗಿಸಲು ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಕರ್ನಾಟಕದಲ್ಲಿ 1.6 ಕೋಟಿಗೂ ಅಧಿಕ ಮಂದಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಿಗ್ ಕಾರ್ಮಿಕರಿಕೆ ಸವಲತ್ತು ವಿಸ್ತರಿಸಲು ಕರಡು ಸಿದ್ಧವಾಗಿದ್ದು, ಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಕೇಂದ್ರದಿಂದ ಅನುಮತಿ ಬಂದ ಕೂಡಲೇ ನೀತಿಗಳನ್ನು ಕಾರ್ಯಗತಗೊಳಿಸಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷಾ ತಿಳಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು, ಪ್ರಸ್ತುತ ನಮ್ಮ ಬಳಿ ಮಾಹಿತಿಗಳಿಲ್ಲದ ಕಾರಣ ರಾಜ್ಯದಲ್ಲಿ ಗಿಗ್ ಕಾರ್ಮಿಕರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಪ್ರಸ್ತುತ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಕಾರ್ಮಿಕ ನಿಯಮಗಳಿಗಾಗಿ ಕಾಯುತ್ತಿದ್ದೇವೆ. ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ಪ್ರತಿಯೊಂದು ರಾಜ್ಯವೂ ತನ್ನದೇ ಆದ ನಿಯಮಗಳನ್ನು ರೂಪಿಸಿಕೊಳ್ಳಬಹುದು. ಹೀಗಾಗಿ ಈ ಸಂಬಂಧ ನಾವು ಕರಡನ್ನು ರೂಪಿಸಿದ್ದೇವೆ. ಇದು ಕೇಂದ್ರ ಸರ್ಕಾರ ಜಾರಿಗೊಳಿಸಿದ ಕಾನೂನುಗಳಿಗೆ ವಿರುದ್ಧವಾಗಿಲ್ಲ ಎಂಬುದನ್ನು ಖಚಿತಪಡಿಸುತ್ತೇನೆ. ಕರಡಿನಲ್ಲಿ ಈಗಿನಂತೆ, ಅಪಘಾತಗಳು ಅಥವಾ ಆರೋಗ್ಯ ಅಸ್ವಸ್ಥತೆಗಳ ಸಂದರ್ಭಗಳಲ್ಲಿ ಗಿಗ್ ಕೆಲಸಗಾರರನ್ನು ರಕ್ಷಿಸಲು ಯಾವುದೇ ಕಾನೂನುಗಳು ಅಥವಾ ನಿಬಂಧನೆಗಳಿಲ್ಲ. ಹೊಸ ನಿಯಮಗಳು ಈ ಕಾರ್ಮಿಕರ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂಬ ಭರವಸೆಯಿದೆ ಎಂದು ತಿಳಿಸಿದರು.

ಪ್ರತೀ ಡೆಲಿವರಿ ಅಥವಾ ಪ್ರತೀ ಟ್ರಿಪ್"ಗೆ ಅವರಿಗೆ ಪಾವತಿ ಮಾಡಲಾಗುತ್ತಿದೆ. ಆದರೆ, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಅವರೇ ಭರಿಸಬೇಕಾಗಿದೆ. ಹೊಸ ನೀತಿಯಲ್ಲಿ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಲು ವಿಫಲರಾದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಸ್ತಾಪಗಳಿವೆ ಎಂದು ಹೇಳಿದ್ದಾರೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ವಿನ್ಯಾಸಗೊಳಿಸಿದ ಮತ್ತು ನಿರ್ವಹಿಸುವ ಇಆಶ್ರಮ್ ಪೋರ್ಟಲ್ ಅನ್ನು ಗಿಗ್ ಕೆಲಸಗಾರರು ಸೇರಿದಂತೆ ಅಸಂಘಟಿತ ವಲಯದ ಎಲ್ಲಾ ಕಾರ್ಮಿಕರ ದಾಖಲಾತಿ, ನೋಂದಣಿ, ಸಂಗ್ರಹಣೆ ಮತ್ತು ಅಗತ್ಯವಿರುವ ಡೇಟಾವನ್ನು ಗುರುತಿಸಲು ಬಳಸಲಾಗುತ್ತಿದೆ.

ಇದುವರೆಗೆ ಕರ್ನಾಟಕದ 71 ಲಕ್ಷ ಕಾರ್ಮಿಕರು ಪ್ರಮುಖವಾಗಿ ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗಾರ್ಮೆಂಟ್ ಕಾರ್ಖಾನೆಯ ಉದ್ಯೋಗಿಗಳು ಮತ್ತು ಗಿಗ್ ಕಾರ್ಮಿಕರು ಪೋರ್ಟಲ್ ನಲ್ಲಿ ಹೆಚ್ಚಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com