ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಂದಿಳಿದಿದ್ದಾರೆ. ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿಯವರನ್ನು ರಾಜ್ಯಪಾಲ ತ್ಯಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅವರ ಸಂಪುಟ ಸದಸ್ಯರು ಬರಮಾಡಿಕೊಂಡಿದ್ದಾರೆ. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೊದಲಾದವರಿದ್ದರು.
ಹೆಚ್ ಎಎಲ್ ಏರ್ ಪೋರ್ಟ್ ಗೆ ವಿಶೇಷ ವಿಮಾನದಲ್ಲಿ ಬಂದಿಳಿದ ಮೋದಿಯವರು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಇಲ್ಲವೇ ರಸ್ತೆ ಮಾರ್ಗದ ಮೂಲಕ ನೇರವಾಗಿ ವಿಧಾನಸೌಧದ ಶಾಸಕರ ಭವನಕ್ಕೆ ತೆರಳಲಿದ್ದಾರೆ. ಅಲ್ಲಿ ಇಂದು ಕನಕದಾಸ ಜಯಂತಿ ಪ್ರಯುಕ್ತ ಕನಕದಾಸ ಪ್ರತಿಮೆಗೆ ಮತ್ತು ವಾಲ್ಮೀಕಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ.
ಬಿಗಿ ಭದ್ರತೆ: ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಹೆಚ್ ಎಎಲ್ ನಿಂದ ವಿಧಾನಸೌಧ ಮಾರ್ಗದಲ್ಲಿ ಇಕ್ಕೆಲಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಎಲ್ಲೆಡೆ ಬಿಜೆಪಿ ಬಾವುಟ, ಸರ್ಕಾರದ ಕಾರ್ಯಕ್ರಮದ ಫ್ಲೆಕ್ಸ್ ಗಳು, ಪ್ರಧಾನಿಯವರ ಭಾವಚಿತ್ರವಿರುವ ಬ್ಯಾನರ್ ಗಳು, ಫ್ಲೆಕ್ಸ್ ಗಳು ರಾರಾಜಿಸುತ್ತಿವೆ.
Advertisement