ಕಬಿನಿ ಬಳಿ ಹುಲಿ ಸಾವು: ಮರಿಗಳ ಪತ್ತೆಗೆ ಕರ್ನಾಟಕ ಅರಣ್ಯಾಧಿಕಾರಿಗಳ ಕಾರ್ಯಾಚರಣೆ
ಕಬಿನಿ ಹಿನ್ನೀರಿನಲ್ಲಿ ಹೆಣ್ಣು ಹುಲಿ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಕರ್ನಾಟಕ ಅರಣ್ಯಾಧಿಕಾರಿಗಳು ಆ ಹುಲಿಯ ಮರಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
Published: 14th November 2022 08:15 AM | Last Updated: 14th November 2022 07:21 PM | A+A A-

ಸಂಗ್ರಹ ಚಿತ್ರ
ಮೈಸೂರು: ಕಬಿನಿ ಹಿನ್ನೀರಿನಲ್ಲಿ ಹೆಣ್ಣು ಹುಲಿ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಕರ್ನಾಟಕ ಅರಣ್ಯಾಧಿಕಾರಿಗಳು ಆ ಹುಲಿಯ ಮರಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅಂತರಸಂತೆ ಅರಣ್ಯ ವ್ಯಾಪ್ತಿಯ ಕಬಿನಿ ಬಳಿ ಬಲೆಗೆ ಸಿಲುಕಿ ಮೃತಪಟ್ಟ ಹುಲಿಯ ಮೂರು ಮರಿಗಳ ಪತ್ತೆಗೆ ಅರಣ್ಯಾಧಿಕಾರಿಗಳು ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ. ‘ನಯಂಚಿ ಕಟ್ಟೆ ಹೆಣ್ಣು’ ಎಂಬ ಅಡ್ಡಹೆಸರಿರುವ ಈ ಹುಲಿ ತನ್ನ ಮೂರು ಮರಿಗಳೊಂದಿಗೆ ಕಳೆದ ಎರಡು ತಿಂಗಳಿಂದ ಕಬಿನಿ ಸಫಾರಿ ಪ್ರದೇಶದಲ್ಲಿ ಬೀಡು ಬಿಟ್ಟಿತ್ತು. ಅಂತರಸಂತೆ ವ್ಯಾಪ್ತಿಯ ತಾರಕಾ ಡ್ಯಾಮ್ ಲಿಫ್ಟ್ ನೀರಾವರಿ ಕಾಲುವೆ ಬಳಿಯ ಹುಣಸೆಕೊಪ್ಪ ಗ್ರಾಮದ ಕೃಷಿ ಹೊಲದಲ್ಲಿ ಹಾಕಿದ್ದ ಬಲೆಗೆ ಹುಲಿ ಸಿಲುಕಿ ಮೃತಪಟ್ಟಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಕಬ್ಬಿನ ಗದ್ದೆಯಲ್ಲಿ 2 ಮರಿಗಳಿಗೆ ಜನ್ಮ ನೀಡಿದ ಚಿರತೆ: ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು
ಅಂತರಸಂತೆ ವ್ಯಾಪ್ತಿಯ ನಾನಂಚಿ ಕಟ್ಟೆಯಲ್ಲಿ ತನ್ನ ಸೀಮೆಯನ್ನು ಮಾಡಿಕೊಂಡಿದ್ದ ಹುಲಿ ತನ್ನ ಎಂಟು ತಿಂಗಳ ಮೂರು ಮರಿಗಳೊಂದಿಗೆ ತಾರಕ ಅಣೆಕಟ್ಟಿನ ಬಳಿ ತೆರಳಿತ್ತು. ಹುಲಿಯ ಶವವನ್ನು ಪತ್ತೆ ಮಾಡಿದ ಅರಣ್ಯಾಧಿಕಾರಿಗಳು ಏಳು ದಿನಗಳ ಹಿಂದೆಯೇ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಹುಲಿ ತನ್ನ ಮೂರು ಮರಿಗಳೊಂದಿಗೆ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಕಾಣಿಸಿಕೊಂಡಿದ್ದರಿಂದ, ಅರಣ್ಯಾಧಿಕಾರಿಗಳು ಭಾನುವಾರದಿಂದ ಮರಿಗಳನ್ನು ರಕ್ಷಿಸಲು ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಮರಿಗಳನ್ನು ಪತ್ತೆ ಹಚ್ಚಲು ಅರಣ್ಯಾಧಿಕಾರಿಗಳು ಈ ಪ್ರದೇಶದಲ್ಲಿ 30 ಕ್ಯಾಮೆರಾ ಟ್ರ್ಯಾಪ್ಗಳನ್ನು ಅಳವಡಿಸಿದ್ದಾರೆ.
ಅರಣ್ಯಾಧಿಕಾರಿಗಳು ಶಿಬಿರದ ಆನೆಗಳಾದ ಅಭಿಮನ್ಯು ಮತ್ತು ಭೀಮನನ್ನು ಕೂಂಬಿಂಗ್ ಕಾರ್ಯಾಚರಣೆಗೆ ಕರೆಸಿಕೊಂಡಿದ್ದಾರೆ ಮತ್ತು ಬೋನುಗಳನ್ನು ಕೂಡ ಹಾಕಿದ್ದಾರೆ. ಎಸಿಎಫ್ ರಂಗಸ್ವಾಮಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.