ಬೆಂಗಳೂರು: ರಿಲಯನ್ಸ್ ರಿಟೇಲ್ ಲಿಮಿಟೆಡ್(ಆರ್ಆರ್ಎಲ್) ಕ್ಯಾರಿ ಬ್ಯಾಗ್ಗೆ 24.90 ರೂ. ಬಿಲ್ ಮಾಡಿದ್ದಕ್ಕಾಗಿ ಗ್ರಾಹಕನಿಗೆ 7,024.90 ಪೈಸೆ ಪಾವತಿಸುವಂತೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಸರಕುಗಳನ್ನು ಖರೀದಿಸುವ ಮೊದಲು ಕ್ಯಾರಿ ಬ್ಯಾಗ್ ಅನ್ನು ಉಚಿತವಾಗಿ ನೀಡಲಾಗುವುದಿಲ್ಲ ಎಂದು ಗ್ರಾಹಕನಿಗೆ ತಿಳಿಸದೆ ಬಿಲ್ ಮಾಡಿದ್ದಕ್ಕೆ ರಿಲಯನ್ಸ್ ರಿಟೇಲ್ 7 ಸಾವಿರ ರೂಪಾಯಿ ಪಾವತಿಸಬೇಕಾಗಿದೆ.
ಅರ್ಜಿದಾರ ನಂದಿನಿ ಲೇಔಟ್ನ ವಕೀಲ ಸಿ.ರವಿಕಿರಣ್ ಅವರಿಗೆ 5,000 ರೂ. ಪರಿಹಾರ ಮತ್ತು ಕ್ಯಾರಿ ಬ್ಯಾಗ್ಗಾಗಿ ಸಂಗ್ರಹಿಸಲಾದ 24.90 ರೂ ಮರುಪಾವತಿಸುವಂತೆ ಗ್ರಾಹಕ ಕೋರ್ಟ್ ಆರ್ಆರ್ಎಲ್ಗೆ ಸೂಚಿಸಿದೆ.
ಅಧ್ಯಕ್ಷೆ ಎಂ.ಶೋಭಾ ಮತ್ತು ಸದಸ್ಯರಾದ ರೇಣುಕಾದೇವಿ ದೇಶಪಾಂಡೆ ಮತ್ತು ಎಚ್.ಜನಾರ್ದನ್ ಅವರನ್ನೊಳಗೊಂಡ ಆಯೋಗ, ದೂರುದಾರರು ವಕೀಲರಾಗಿರುವುದರಿಂದ ಅವರು ಕೇವಲ 2,000 ರೂ. ವ್ಯಾಜ್ಯ ವೆಚ್ಚಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದೆ.
ವಸ್ತುಗಳನ್ನು ಖರೀದಿಸುವ ಮುನ್ನ ಕ್ಯಾರಿ ಬ್ಯಾಗ್ಗಳಿಗೆ ಹೆಚ್ಚುವರಿ ವೆಚ್ಚವಾಗಲಿದೆ ಎಂಬುದನ್ನು ತಿಳಿಯುವ ಹಕ್ಕು ಗ್ರಾಹಕನಿಗೆ ಇದೆ ಎಂದು ಗಮನಿಸಿದ ಗ್ರಾಹಕ ಆಯೋಗ, ಖರೀದಿಯ ಮೊದಲು ಗ್ರಾಹಕರಿಗೆ ಮಾಹಿತಿ ನೀಡದೆ ಕ್ಯಾರಿ ಬ್ಯಾಗ್ಗಳಿಗೆ ಹೆಚ್ಚುವರಿ ವೆಚ್ಚ ವಿಧಿಸಿದ್ದು ಅನ್ಯಾಯ ಮತ್ತು ಅಶಿಸ್ತು. ನೋಟಿಸ್ ನೀಡಿದ್ದರೂ ಆರ್ಆರ್ಎಲ್ ಆಯೋಗದ ಮುಂದೆ ಹಾಜರಾಗದ ಕಾರಣ ಈ ಆದೇಶವನ್ನು ನೀಡಲಾಗಿದೆ.
Advertisement