ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ ಸುಮಾರು 89 ವರ್ಷಗಳ ನಂತರ ಭರ್ತಿಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಬಾಗಿನ ಅರ್ಪಿಸಿದರು.
ಹೂಗಳಿಂದ ಅಲಂಕಾರಗೊಂಡಿದ್ದ ವಾಣಿವಿಲಾಸ ಜಲಾಶಯಕ್ಕೆ ಸಿಎಂ ಬೊಮ್ಮಾಯಿ ಅವರು ಬಾಗಿನ ಅರ್ಪಿಸಿ, ಪುಷ್ಪಾರ್ಚನೆ ಮಾಡಿದರು. ಸಿಎಂ ಬೊಮ್ಮಾಯಿಗೆ ಮಾಜಿ ಸಿಎಂ ಯಡಿಯೂರಪ್ಪ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಸಾಥ್ ನೀಡಿದರು.
ಬಳಿಕ ಹಿರಿಯೂರಿನಲ್ಲಿ ನಡೆದ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ವಾಣಿವಿಲಾಸ ಜಲಾಶಯಕ್ಕೆ ಕಾಯಕಲ್ಪ ನೀಡುತ್ತೇವೆ. ಅದಕ್ಕಾಗಿ 738 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದೇವೆ. ಜಲಾಶಯದ ಕಾಲುವೆಗಳ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು.
2007-08ರಲ್ಲಿ ನೀರಾವರಿ ಯೋಜನೆಗಾಗಿ ಹೋರಾಟ ನಡೆದಿತ್ತು. ಚಿತ್ರದುರ್ಗದಲ್ಲಿ 580 ದಿನ ರೈತರು ನಿರಂತರ ಧರಣಿ ನಡೆಸಿದ್ದರು. ಆದರೆ ಹಿಂದಿನ ಸರ್ಕಾರಗಳು ನಿರ್ಲಕ್ಷ್ಯ ತೋರಿದ್ದವು. ನೀರಾವರಿ ಸಚಿವನಾಗಿದ್ದಾಗ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದೆ. ಆಗಿನ ಸಿಎಂ ಆಗಿದ್ದ ಬಿ.ಎಸ್ ಯಡಿಯೂರಪ್ಪ ಜೊತೆ ಚರ್ಚಿಸಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗಿತ್ತು. ಹಿರಿಯೂರಿಗೆ ಬಂದು ಹೋದ 15 ದಿನದಲ್ಲೇ ಆದೇಶ ಹೊರಡಿಸಿದ್ದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
Advertisement