ಮದ್ಯವ್ಯಸನಿ ಮಗನನ್ನು ಡಂಬಲ್ಸ್‌ನಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ಅಪ್ಪ

ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೋಟೆ ಉಪವಿಭಾಗದ ದೇವಲಾಪುರದಲ್ಲಿ ಶುಕ್ರವಾರ ಮಧ್ಯಾಹ್ನ ಹಿರಿಯ ನಾಗರಿಕರೊಬ್ಬರು ತಮ್ಮ ಮಗನನ್ನು ಕಬ್ಬಿಣದ ಡಂಬಲ್ಸ್‌ನಿಂದ ಹೊಡೆದು ಕೊಂದಿದ್ದು, ಬಳಿಕ ಪೊಲೀಸರ ಮುಂದೆ ಶರಣಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಕೋಟೆ ಉಪವಿಭಾಗದ ದೇವಲಾಪುರದಲ್ಲಿ ಶುಕ್ರವಾರ ಮಧ್ಯಾಹ್ನ ಹಿರಿಯ ನಾಗರಿಕರೊಬ್ಬರು ತಮ್ಮ ಮಗನನ್ನು ಕಬ್ಬಿಣದ ಡಂಬಲ್ಸ್‌ನಿಂದ ಹೊಡೆದು ಕೊಂದಿದ್ದು, ಬಳಿಕ ಪೊಲೀಸರ ಮುಂದೆ ಶರಣಾಗಿದ್ದಾರೆ.

ಮೃತ ತ್ಯಾಗರಾಜ್‌ಗೆ 38 ವರ್ಷವಾಗಿದ್ದರೆ, ತಂದೆ ಮುನಿಸ್ವಾಮಿಗೆ 65 ವರ್ಷ ವಯಸ್ಸಾಗಿದೆ. ಇಬ್ಬರೂ ದಿನಗೂಲಿ ಕಾರ್ಮಿಕರಾಗಿದ್ದು, ಮದ್ಯ ಸೇವಿಸಲು ಹಣಕ್ಕಾಗಿ ತ್ಯಾಗರಾಜ್‌ ಪೋಷಕರಿಗೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆತನ ಚಿತ್ರಹಿಂಸೆಯನ್ನು ತಾಳಲಾರದೆ, ಅವರು ತಮ್ಮ ಮಗಳೊಂದಿಗೆ ಇರಲು ಪ್ರಾರಂಭಿಸಿದ್ದಾರೆ. ಆಗಲೂ, ತ್ಯಾಗರಾಜ್ ತನ್ನ ಸಹೋದರಿಯ ನಿವಾಸಕ್ಕೆ ಭೇಟಿ ನೀಡಿ ಕಿರುಕುಳ ನೀಡುತ್ತಲೇ ಇದ್ದ. ಹಣ ನೀಡದಿದ್ದರೆ, ತನ್ನ ವೃದ್ಧ ಪೋಷಕರಿಗೆ ಥಳಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಆತನ ಕಿರುಕುಳದಿಂದ ಹತಾಶರಾಗಿದ್ದ ಮುನಿಸ್ವಾಮಿ ತಮ್ಮ ಮಗನನ್ನು ಕೊಂದು ರಕ್ತದ ಕಲೆಯಿದ್ದ ಡಂಬಲ್ಸ್‌ಗಳೊಂದಿಗೆ ಪೊಲೀಸರ ಮೊರೆ ಹೋಗಿದ್ದಾರೆ. ಸದ್ಯ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

'ಶುಕ್ರವಾರ ಮಧ್ಯಾಹ್ನ ತ್ಯಾಗರಾಜ್ ಮತ್ತು ಆತನ ತಂದೆಯೊಂದಿಗೆ ಜಗಳ ಉಂಟಾಗಿದೆ. ಜಗಳ ವಿಕೋಪಕ್ಕೆ ತಿರುಗಿ ರೋಸಿಹೋಗಿದ್ದ ತಂದೆ ಡಂಬಲ್ಸ್‌ನಿಂದ ತಲೆಗೆ ಹೊಡೆದು ಕೊಂದಿದ್ದಾರೆ. ಬಳಿಕ ಪೊಲೀಸರಿಗೆ ಶರಣಾಗಿದ್ದಾರೆ. ನಂತರ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ಮೃತದೇಹವನ್ನು ಶವಾಗಾರಕ್ಕೆ ಸ್ಥಳಾಂತರಿಸಿದೆ.

ಕುಟುಂಬದ ಇತರ ಸದಸ್ಯರೊಂದಿಗೆ ಮಾತನಾಡಿದ ನಂತರ ಸಂತ್ರಸ್ತ ನೀಡುತ್ತಿದ್ದ ಕಿರುಕುಳದ ಬಗ್ಗೆ ನಮಗೆ ತಿಳಿಯಿತು ಎಂದು ಪೊಲೀಸರು ತಿಳಿಸಿದ್ದು, ಭಾರತೀಯ ದಂಡ ಸಂಹಿತೆ ಕಲಂ 302 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com