ಕೊಪ್ಪಳ: ಕೊಪ್ಪಳದ ಸಂಕನೂರು ಗ್ರಾಮದ ಬಳಿ ಪ್ರವಾಹದಿಂದಾಗಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾಲ್ವರು ಮಹಿಳೆಯರ ಮೃತದೇಹಗಳನ್ನು ರಕ್ಷಣಾ ತಂಡ ಭಾನುವಾರ ಮಧ್ಯಾಹ್ನ ಹೊರ ತೆಗೆದಿವೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಚಿವ ಹಾಲಪ್ಪ ಆಚಾರ್ ಅವರು ಸರ್ಕಾರದ ವತಿಯಿಂದ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಇದರಿಂದ ಸಮಾಧಾನಗೊಳ್ಳದ ಗ್ರಾಮಸ್ಥರು, ಹಳ್ಳಕ್ಕೆ ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಸೇತುವೆ ನಿರ್ಮಿಸಿಕೊಡಿ ಅಂತ ಕೇಳಿದ್ರೂ ನಿರ್ಲಕ್ಷ್ಯಿಸಿದ್ದೀರಿ. ನಿಮ್ಮ ನಿರ್ಲಕ್ಷ್ಯಕ್ಕೆ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು.
ಕಳೆದ ಎರಡು ದಿನಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ವರಣನ ಅಬ್ಬರ ಜೋರಾಗಿದ್ದು, ನಿರಂತರ ಮಳೆಯಿಂದ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಹಳ್ಳ ತುಂಬಿ ಹರಿಯುತ್ತಿತ್ತು. ಕೃಷಿ ಕೆಲಸಕ್ಕೆ ಹೋಗಿ ವಾಪಸ್ ಮನೆಗೆ ಮರಳುವಾಗ ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿ ಹೋಗಿದ್ದರು.
ಕೊಚ್ಚಿ ಹೋಗಿದ್ದ ಮಹಿಳೆಯರನ್ನು 32 ವರ್ಷದ ಗಿರಿಜಾ ಮಾಲಿಪಾಟೀಲ್, 40 ವರ್ಷದ ಭುವನೇಶ್ವರಿ ಪೊಲೀಸ್ ಪಾಟೀಲ್ 45 ವರ್ಷದ ಪವಿತ್ರಾ ಪೊಲೀಸ್ ಪಾಟೀಲ್ ಹಾಗೂ 19 ವರ್ಷದ ವೀಣಾ ಮಾಲಿಪಾಟೀಲ್ ಎಂದು ಗುರುತಿಸಲಾಗಿದೆ.
Advertisement