ಬೆಂಗಳೂರು: ಕೋರ್ಟ್ ಆವರಣದೊಳಗೆ ವಕೀಲರು ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುವ ಹಕ್ಕನ್ನು ಹೊಂದಿರುವುದಿಲ್ಲ ಎಂದು ರಾಜ್ಯ ಹೈಕೋರ್ಟ್ ಹೇಳಿದೆ. ಈ ಸಂಬಂಧ ವಕೀಲ ಎನ್.ಎಸ್. ವಿಜಯನಾಥ್ ಬಾಬು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.
ವಕೀಲರ ಕಾಯ್ದೆಯ ಸೆಕ್ಷನ್ 30, ಕಾನೂನು ಅಭ್ಯಸಿಸುವ ಹಕ್ಕನ್ನು ನೀಡಿದ್ದು, ಕೋರ್ಟ್ ಆವರಣದೊಳಗೆ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುವ ಹಕ್ಕು ನೀಡಿಲ್ಲ. ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಅಂಶಗಳು ಇಲ್ಲದಿರುವುದರಿಂದ ದೂರುದಾರರು ತಪ್ಪಾಗಿ ಅರ್ಜಿ ಸಲ್ಲಿಸಿರುವುದಾಗಿ ಹಂಗಾಮಿ ಮುಖ್ಯ ನ್ಯಾಯಾಧೀಶ ಅಲೋಕ್ ಅರಾದೆ ಮತ್ತು ನ್ಯಾಯಾಧೀಶ ಎಸ್. ವಿಶ್ವಜಿತ್ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿತು.
ಹೊಸ ವಾಹನಗಳ ಮೇಲಿನ ಸ್ಟಿಕರ್ ಗೆ ಸಂಬಂಧಿಸಿದಂತೆ ವಕೀಲರ ಸಂಘದಿಂದ ಇದೇ ವರ್ಷ ಆಗಸ್ಟ್ 5 ರಂದು ನೀಡಿರುವ ನೋಟಿಸ್ ರದ್ದುಪಡಿಸಬೇಕೆಂದು ಕೋರಿ ಬೆಂಗಳೂರು ವಕೀಲರ ಸಂಘದ ಸದಸ್ಯರಾಗಿರುವ ದೂರುದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಕೀಲರಿಂದ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದೊಂದಿಗೆ ನೋಟಿಸ್ ನೀಡಿರುವುದನ್ನು ಗಮನಿಸಿದ ನ್ಯಾಯಾಲಯ, ಕೋರ್ಟ್ ಆವರಣದೊಳಗೆ ಪಾರ್ಕಿಂಗ್ ಜಾಗ ಹೆಚ್ಚಿಗೆ ಇಲ್ಲದಿರುವುದರಿಂದ ವಾಹನಗಳ ನಿಯಂತ್ರಣ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿತು.
Advertisement