ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ಹೊಸದಾಗಿ ಸಮನ್ಸ್ ಜಾರಿ ಮಾಡಿರುವ ಸಂದರ್ಭದಲ್ಲಿ ಮತ್ತು ಯಂಗ್ ಇಂಡಿಯಾಗೆ ಹಣಕಾಸು ನೆರವು ನೀಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ವಿಚಾರಣೆ ಎದುರಿಸಲು ಸಮಯಾವಕಾಶ ಕೇಳಿದ್ದಾರೆ.
ಕರ್ನಾಟಕದಲ್ಲಿ ಈಗ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು ಅದರಲ್ಲಿ ಭಾಗಿಯಾಗಬೇಕಿರುವುದರಿಂದ ವಿಚಾರಣೆಗೆ ಹಾಜರಾಗಲು ಮತ್ತೊಂದು ದಿನಾಂಕವನ್ನು ನಿಗದಿಪಡಿಸುವಂತೆ ಇಡಿಗೆ ಮನವಿ ಮಾಡಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, “ ಭಾರತ್ ಜೋಡೋ ಯಾತ್ರೆ ನಡೆಯುತ್ತಿರುವುದರಿಂದ ವಿಚಾರಣೆಗೆ ಹಾಜರಾಗಲು ಪರ್ಯಾಯ ದಿನಾಂಕವನ್ನು ನೀಡುವಂತೆ ಇಡಿಗೆ ಕೇಳಿದ್ದೇನೆ. ಅಕ್ಟೋಬರ್ 7 ರಂದು, ಮೆರವಣಿಗೆ ಆದಿಚುಂಚನಗಿರಿ ತಲುಪುತ್ತದೆ, ಅಲ್ಲಿ ನಾನು ಇರಬೇಕಾಗಿದೆ ಎಂದರು.
ಯಂಗ್ ಇಂಡಿಯಾ, ನ್ಯಾಷನಲ್ ಹೆರಾಲ್ಡ್ ಮತ್ತು ಟ್ರಸ್ಟ್ಗೆ ತಾವು ಮತ್ತು ಅವರ ಸಹೋದರ ಸುರೇಶ್ ಎಲ್ಲಾ ಬೆಂಬಲವನ್ನು ನೀಡಿದ್ದೇವೆ ಎಂದು ಒಪ್ಪಿಕೊಂಡ ಅವರು,ತನಿಖೆಗೆ ಹಾಜರಾಗಲು ಸಿದ್ದರಿದ್ದೇವೆ. ಆದರೆ ಪರ್ಯಾಯ ದಿನಾಂಕವನ್ನು ನೀಡುವಂತೆ ಮನವಿ ಮಾಡಿದ್ದೇವೆ ಎಂದರು. ಇದೇ ವೇಳೆ, ಯಾತ್ರೆಯನ್ನು ಉಲ್ಲೇಖಿಸಿದ ಅವರು, ರೈತರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ, ಕಾಂಗ್ರೆಸ್ ನಾಯಕರಿಗೆ ಉತ್ಸಾಹ ಉಂಟಾಗಿದೆ ಎಂದರು.
Advertisement