ಬೆಂಗಳೂರು: ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಬಾಂಬ್ ಇಡಲಾಗಿದೆ ಎಂದು ಹುಸಿ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಾಪ್ಟ್ ವೇರ್ ಇಂಜಿನಿಯರ್ ಹೆಬ್ಬಗೋಡಿ ನಿವಾಸಿ ಪ್ರಶಾಂತ್ ಬಂಧಿತ ಆರೋಪಿ. ಈತ ಶುಕ್ರವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಗೆ ಮೂರು ಬಾರಿ ಕರೆ ಮಾಡಿ ವಿಧಾನಸೌಧದಲ್ಲಿ ಬಾಂಬ್ ಇರಿಸಲಾಗಿದೆ. ಇದು ಸದ್ಯದಲ್ಲೇ ಸ್ಫೋಟಗೊಳ್ಳಲಿದೆ ಎಂದು ಹೇಳಿದ್ದ. ಕೂಡಲೇ ಕಚೇರಿ ಸಿಬ್ಬಂದಿ ವಿಧಾನಸೌಧ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೇಂದ್ರ ವಿಭಾಗ ಪೊಲೀಸರು ಪೋನ್ ಕಾಲ್ ಮಾಹಿತಿ ಆಧರಿಸಿ ಒಂದು ವಿಶೇಷ ತಂಡ ರಚಿಸಿ ಪರಿಶೀಲನೆ ಮಾಡಿದಾಗ ಅದೊಂದು ಹುಸಿ ಬಾಂಬ್ ಕರೆ ಎಂಬುದು ತಿಳಿದುಬಂದಿದೆ.
ನಂತರ ಆರೋಪಿಗಾಗಿ ಕಾರ್ಯಾಚಾರಣೆ ನಡೆಸಿ ತಡರಾತ್ರಿ ಪರಪ್ಪನ ಅಗ್ರಹಾರದ ಬಳಿ ಆರೋಪಿಯನ್ನು ಬಂಧಿಸಲಾಯಿತು. ಆರೋಪಿ ಗೂಗಲ್ ನಲ್ಲಿ ಸರ್ಜ್ ಮಾಡಿ ವಿಧಾನಸೌಧದ ಫೋನ್ ನಂಬರ್ ಪಡೆದಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement