ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ಕೆ-ರೇರಾ) ಬಾಗಲೂರು ರಸ್ತೆ ಕ್ರಾಸ್ನಲ್ಲಿರುವ ಕೃಷ್ಣ ಶೆಲ್ಟನ್ ಅಪಾರ್ಟ್ಮೆಂಟ್ನ ಮನೆ ಖರೀದಿದಾರರಿಗೆ ಮನೆ ಪಡೆಯಲು ತಮ್ಮದೇ ಆದ ಕ್ರಿಯಾ ಯೋಜನೆಯನ್ನು ಸಲ್ಲಿಸುವಂತೆ ಸೂಚಿಸಿದೆ.
ನಿಗದಿತ ಗಡುವಿನ ನಂತರ ಏಳು ವರ್ಷ ಕಳೆದರೂ ಬಿಲ್ಡರ್ ಕೃಷ್ಣ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್(ಕೆಇಪಿಎಲ್) ಭರವಸೆ ನೀಡಿದ ಸೌಕರ್ಯಗಳೊಂದಿಗೆ ಯೋಜನೆ ಪೂರ್ಣಗೊಳಿಸಲು ವಿಫಲವಾದ ಕಾರಣ, ಖರೀದಿದಾರರು ಮಧ್ಯಪ್ರವೇಶಿಸುವಂತೆ ರೇರಾಗೆ ಮನವಿ ಮಾಡಿದ್ದರು.
12-ಅಂತಸ್ತಿನ ವಿವಿಧ ಆಯಾಮಗಳ ಒಟ್ಟು 260 ಫ್ಲಾಟ್ಗಳ ಈ ಯೋಜನೆಯನ್ನು ಮಾರ್ಚ್ 2015ಕ್ಕೆ ಪೂರ್ಣಗೊಳಿಸಬೇಕಾಗಿತ್ತು.
ಅಕ್ಟೋಬರ್ 19 ರಂದು ನಡೆದ ವಿಚಾರಣೆಯಲ್ಲಿ ಕರ್ನಾಟಕ ರೇರಾ ESCROW ಖಾತೆಗೆ (ಎರಡು ಪಾರ್ಟಿಗಳ ನಡುವಿನ ವಹಿವಾಟಿನ ಸಮಯದಲ್ಲಿ ಮೂರನೇ ವ್ಯಕ್ತಿ ಹೊಂದಿರುವ ತಾತ್ಕಾಲಿಕ ಖಾತೆ) 3 ಕೋಟಿ ರೂಪಾಯಿ ಠೇವಣಿ ಮಾಡುವಂತೆ ಬಿಲ್ಡರ್ಗೆ ಆದೇಶಿಸಿತ್ತು.
"ಅಕ್ಟೋಬರ್ 25 ರೊಳಗೆ ಠೇವಣಿ ಮಾಡದಿದ್ದರೆ, ಠೇವಣಿ ಮಾಡುವ ದಿನಾಂಕದವರೆಗೆ ಪ್ರತಿದಿನ ಒಂದು ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ" ಎಂದು ಕೆ-ರೇರಾ ಎಚ್ಚರಿಕೆ ನೀಡಿತ್ತು.
ಈ ಬೆಳವಣಿಗೆಯನ್ನು ಖಚಿತಪಡಿಸಿದ ಪ್ರಾಧಿಕಾರದ ಅಧ್ಯಕ್ಷ ಕಿಶೋರ್ ಚಂದ್ರ ಅವರು, ಭೂಮಾಲೀಕರು ಮತ್ತು ಪ್ರವರ್ತಕರಿಗೆ ಯಾವುದೇ ಅಪಾರ್ಟ್ಮೆಂಟ್ ಮಾರಾಟ ಮಾಡದಂತೆ ರೇರಾ ತಡೆಯಾಜ್ಞೆ ನೀಡಿದೆ. ಅದರ ಬಗ್ಗೆ ಇತರ ಖರೀದಿದಾರರಿಗೆ ಎಚ್ಚರಿಕೆ ನೀಡಲು ನೋಟಿಸ್ ಅಂಟಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
Advertisement