ಶಿವಮೊಗ್ಗ: ಸೀಗೇಹಟ್ಟಿಯಲ್ಲಿ ಮೊನ್ನೆ ಅಕ್ಟೋಬರ್ 24ರಂದು ಹಳೇ ವೈಷಮ್ಯಕ್ಕೆ ಪ್ರವೀಣ್ ಎಂಬಾತನೊಂದಿಗೆ ಮಾತಿನ ಚಕಮಕಿ ನಡೆಸಿದ ದುಷ್ಕರ್ಮಿಗಳು ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ ಸೋದರಿ ಅಶ್ವಿನಿ ಹೇಳಿಕೊಂಡಂತೆ ಅವರ ಕುಟುಂಬಕ್ಕೆ ಬೆದರಿಕೆ ಹಾಕಿಲ್ಲ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ.ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಆಕೆ ಯಾವುದೇ ದೂರು ಕೂಡ ದಾಖಲಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಇನ್ನೂ ಪತ್ತೆಯಾಗದ ಮಾರ್ಕೆಟ್ ಫೌಜಾನ್, ಫರಾಜ್ ಮತ್ತು ಅಜರ್ ಅಲಿಯಾಸ್ ಅಜ್ಜು ಹಾಗೂ ಇನ್ನಿಬ್ಬರು ಎರಡು ಬೈಕ್ಗಳಲ್ಲಿ ಸೀಗೆಹಟ್ಟಿಗೆ ತೆರಳಿ ಪ್ರವೀಣ್ ನೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ ಎಂದು ಎಸ್ಪಿ ಸುದ್ದಿಗಾರರಿಗೆ ತಿಳಿಸಿದರು. ನಂತರ ಭರಮಪ್ಪ ನಗರಕ್ಕೆ ತೆರಳಿ ಪ್ರಕಾಶ್ ಜತೆ ವಾಗ್ವಾದ ನಡೆಸಿ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ.
ಪ್ರವೀಣ್ ಮತ್ತು ಫೌಜಾನ್ ನಡುವೆ ಹಳೆಯ ದ್ವೇಷವಿತತು. ಅವರು ಮುಖಾಮುಖಿಯಾದಾಗಲೆಲ್ಲ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುತ್ತಾ ದ್ವೇಷ ಸಾಧಿಸುತ್ತಿದ್ದರು. ಪ್ರಕಾಶ್ ಮತ್ತು ಪ್ರವೀಣ್ ಕೂಡ ಕೆಲ ದಿನಗಳ ಹಿಂದೆ ಫೌಜಾನ್ ವಿರುದ್ಧ ಕ್ಷುಲ್ಲಕವಾಗಿ ಮಾತನಾಡುತ್ತಿದ್ದರು. ವೈಯಕ್ತಿಕ ವೈಷಮ್ಯದಿಂದ ಘಟನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
Advertisement