ಬೆಂಗಳೂರು: ಡಾ.ಶಿವರಾಮ ಕಾರಂತ ಬಡಾವಣೆಯನ್ನು ರಚಿಸುವ 17 ಗ್ರಾಮಗಳ ಪೈಕಿ ಏಳು ಗ್ರಾಮಗಳಲ್ಲಿ ಒಟ್ಟು 150 ಎಕರೆ ಪ್ರದೇಶವನ್ನು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (EWS) ಮನೆ ನಿರ್ಮಾಣಕ್ಕಾಗಿ ಸುಪ್ರೀಂ ಕೋರ್ಟ್ ನೇಮಿಸಿರುವ ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿ ಗುರುತಿಸಿದೆ. ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ 30 ಚದರ ಮೀಟರ್ ಅಳತೆಯಲ್ಲಿ 15 ಸಾವಿರ 1BHK ಮನೆಗಳನ್ನು ನಿರ್ಮಿಸಲಿದೆ.
ನ್ಯಾಯಾಲಯದ ಆದೇಶದ ಮೂಲಕ ಲೇಔಟ್ ರಚನೆಯ ಮೇಲ್ವಿಚಾರಣೆಗೆ ಸಮಿತಿಯನ್ನು ಇತ್ತೀಚೆಗೆ ನೇಮಿಸಲಾಗಿದೆ. ನಿನ್ನೆ ಶುಕ್ರವಾರ ಬಿಡಿಎ ಉನ್ನತಾಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ಸಮಿತಿ ಸದಸ್ಯರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಉತ್ತರ ಬೆಂಗಳೂರಿನ ರಾಮಗೌಡನಹಳ್ಳಿ, ಶ್ಯಾಮರಾಜಪುರ, ದೊಡ್ಡಬೆಟ್ಟಹಳ್ಳಿ, ಮೇಡಿ ಅಗ್ರಹಾರ, ಬೈಲಕೆ, ಲಕ್ಷ್ಮೀಪುರ ಮತ್ತು ಗಾಣಿಗೆರೆಹಳ್ಳಿ ಗ್ರಾಮಗಳಲ್ಲಿ ಮನೆಗಳು ನಿರ್ಮಾಣಗೊಳ್ಳಲಿವೆ. ಸಮಿತಿಯ ಸದಸ್ಯ, ನಿವೃತ್ತ ಡಿಜಿಪಿ ಎಸ್ ಟಿ ರಮೇಶ್, ನೆಲ ಮಹಡಿ ಸೇರಿದಂತೆ ಮೂರು ಅಂತಸ್ತಿನ ಬ್ಲಾಕ್ಗಳಲ್ಲಿ ನಿರ್ಮಿಸಲಾಗುವ ಈ ಮನೆಗಳು ಉತ್ತಮ ರಸ್ತೆಗಳು, ಕುಡಿಯುವ ನೀರು ಮತ್ತು ಹಲವಾರು ಸೌಕರ್ಯಗಳನ್ನು ಹೊಂದಿರುವ ಲೇಔಟ್ಗಳಾಗಿ ರಚನೆಯಾಗಲಿವೆ ಎಂದು ತಿಳಿಸಿದರು.
ಹೌಸಿಂಗ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕ ಎಸ್ ಬಸವರಾಜು, “ಈ ಸಬ್ಸಿಡಿ ಫ್ಲಾಟ್ಗಳನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಇತರ ರಾಜ್ಯ ಸರ್ಕಾರದ ಯೋಜನೆಗಳ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ನಾವು ಕೆಲಸ ಪ್ರಾರಂಭಿಸಿದ ನಂತರ ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ಆನ್ಲೈನ್ನಲ್ಲಿ ಹಂಚಿಕೆ ಮಾಡಲಾಗುತ್ತದೆ. ಯೋಜನೆ ಪೂರ್ಣಗೊಳ್ಳಲು 18 ತಿಂಗಳು ತೆಗೆದುಕೊಳ್ಳುತ್ತದೆ. ಇದೇ ವೇಳೆ ಲೇಔಟ್ಗೆ ಕರೆದಿರುವ ಅಲ್ಪಾವಧಿ ಟೆಂಡರ್ಗೆ 19 ಬಿಡ್ಗಳು ಬಂದಿವೆ ಎಂದರು.
ಉನ್ನತ ಬಿಡಿಎ ಅಧಿಕಾರಿಯೊಬ್ಬರು, ಒಟ್ಟು ಒಂಬತ್ತು ಬಿಡ್ದಾರರು ಯೋಜನೆಗಳಿಗೆ 19 ಬಿಡ್ಗಳನ್ನು ಹಾಕಿದ್ದಾರೆ. ಕೆಲವರು ಎರಡಕ್ಕಿಂತ ಹೆಚ್ಚು ಬಿಡ್ಗಳನ್ನು ಹಾಕಿದ್ದಾರೆ. ತಾಂತ್ರಿಕ ಸುತ್ತನ್ನು ಪ್ರಸ್ತುತ ಮೌಲ್ಯಮಾಪನ ಮಾಡಲಾಗುತ್ತಿದೆ ಎಂದರು.
Advertisement