ಬೆಂಗಳೂರು: ಫ್ಲೈಓವರ್ ನಿಂದ ಕೆಳಗೆ ಬಿದ್ದು ಇಬ್ಬರು ಸವಾರರು ಸಾವು

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. 

ಅಪಘಾತದಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೆಚ್ಎಸ್ಆರ್ ಲೇಔಟ್ ನಿವಾಸಿಗಳಾದ ಅಮಿತ್ ಸಿಂಗ್ (29) ಮತ್ತು ಅಮೋಲ್ ಪ್ರಮೋದ್ ಆಮ್ಟೆ (29) ಮೃತ ಸವಾರರಾಗಿದ್ದಾರೆ. ಸವಾರ ಸೌರವ್ ದೇ (29) ಎಡಗೈ ಹಾಗೂ ತಲೆಗೆ ಗಾಯಗಳಾಗಿದೆ. 

ಶನಿವಾರ ಬೆಳಿಗ್ಗೆ 10.45ರ ಸುಮಾರಿಗೆ ಬಳ್ಳಾರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರೈತರ ಸಂತೆ ಬಳಿ ಫ್ಲೈ ಓವರ್ ಮೇಲೆ ಈ ಅಪಘಾತ ಸಂಭವಿಸಿದೆ. 

ಮಹಾರಾಷ್ಟ್ರದ ಅಮೋಲ್ ಪ್ರಮೋದ್ ಆಮ್ಟೆ, ದೆಹಲಿಯ ಅಮಿತ್ ಸಿಂಗ್ ಹಾಗೂ ರಾಜಸ್ಥಾನದ ಸೌರವ್ ದೇ ನಗರದ ಹೆಚ್ಎಸ್ಆರ್ ಲೇಔಟ್ ನ ನಿಫ್ಟ್ ಕಾಲೇಜಿನಲ್ಲಿ ಎಂಟೆಕ್ ವ್ಯಾಸಾಂಗ ಮಾಡುತ್ತಿದ್ದರು. ನಂದಿ ಬೆಟ್ಟಕ್ಕೆ ಜಾಲಿ ರೈಡ್'ಗೆ ಹೋಗುವುದಾಗಿ ನಿರ್ಧರಿಸಿದ ಮೂವರು ಒಂದೇ ಬೈಕ್ ನಲ್ಲಿ ತೆರಳಿದ್ದರು. ನಂದಿ ಹೋಗಿ ಸುತ್ತಾಡಿಕೊಂಡು ಮತ್ತೆ ನಗರಕ್ಕೆ ವಾಪಸ್ಸಾಗುತ್ತಿದ್ದರು. 

ಈ ವೇಳೆ ಬಳ್ಳಾರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರೈತರ ಸಂತೆ ಬಳಿ ಫ್ಲೈ ಓವರ್ ನಲ್ಲಿ ಬರುವಾಗ ಸ್ಟ್ಯಾಂಡ್ ಹಾಕುವುದನ್ನು ಮರೆತಿದ್ದ ಹಿನ್ನೆಲೆಯಲ್ಲಿ ವಾಹನದ ಸ್ಟ್ಯಾಂಡ್ ರಸ್ತೆ ಪಕ್ಕದ ಸಿಮೆಂಟ್ ಬ್ಲಾಕ್'ಗೆ ತಗುಲಿದೆ. ಇದರಿಂದ ಬೇಕ್ ನಿಯಂತ್ರಮ ತಪ್ಪಿ ಫ್ಲೈ ಓವರ್'ನ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಿಂಬದಿಯಲ್ಲಿ ಕುಳಿತಿದ್ದ ಅಮಿತ್ ಸಿಂಗ್ ಹಾಗೂ ಪ್ರಮೋದ್ ಆಮ್ಟೆ ಫ್ಲೈಓವರ್'ನಿಂದ ಹಾರಿ ಕೆಳೆ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಇಬ್ಬರು ತಲೆಗೆ ಗಂಭೀರ ಗಾಯವಾಗಿದೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸೌರವ್ ದೇ ಹೆಲ್ಮೆಟ್ ಧರಿಸಿದ್ದ ಪರಿಣಾಮ ಕೈ ಹಾಗೂ ತಲೆಗೆ ಸಣ್ಣ ಪ್ರಮಾಣದ ಗಾಯವಾಗಿದೆ. 

ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಕೂಡಲೇ ಗಾಯಾಳುಗಳ ನೆರವಿಗೆ ಧಾವಿಸಿ, ಮೂವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಅಮೋಲ್ ಪ್ರಮೋದ್ ಆಮ್ಟೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಅಮಿತ್ ಸಿಂಗ್ ಚಿಕಿತ್ಸೆ ಫಲಿಸದೆ ಮಧ್ಯಾಹ್ನ 12.50ರ ಸುಮಾರಿಗೆ ಕೊನೆಯುಸಿರೆಳೆದಿದ್ದಾನೆ. ಸವಾರ ಸೌರವ್ ದೇಗೆ ಚಿಕಿತ್ಸೆ ಮುಂದುವರೆದಿದ್ದು, ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 

ಜಾಲಿ ರೈಡ್‌ಗೆ ಸೌರವ್ ದೇ ಅಣ್ಣನ ಬೈಕ್ ತೆಗೆದುಕೊಂಡು ಹೋಗಿದ್ದ. ಸರಿಯಾದ ಹೆಲ್ಮೆಟ್ ಧರಿಸಿದ್ದರಿಂದ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರನೆ. ಮೃತಪಟ್ಟ ಇಬ್ಬರಲ್ಲಿ ಒಬ್ಬರು ಗುಣಮಟ್ಟವಿಲ್ಲದ ಹೆಲ್ಮೆಟ್ ಧರಿಸಿದ್ದು, ಮತ್ತೊಬ್ಬ ಹೆಲ್ಮೆಟ್ ಧರಿಸಿರದೇ ಇರುವುದು ಕಂಡು ಬಂದಿದೆ. ಮೃತರಿಬ್ಬರೂ ಫ್ಲೈಓವರ್ ಅಡಿಯಲ್ಲಿನ ಮೆಟ್ರೋ ನಿರ್ಮಾಣದ ಸ್ಥಳದಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ ಪ್ರದೇಶದೊಳಗೆ ಬಿದ್ದಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com