ಉಡುಪಿಯಲ್ಲಿ ಕರ್ನಾಟಕದ ಮೊದಲ ಸರ್ಕಾರಿ ಸೇನಾ ಆಯ್ಕೆ ತರಬೇತಿ ಶಾಲೆ ಆರಂಭ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ ‘ಕೋಟಿ ಚೆನ್ನಯ ಸೇನಾ ಆಯ್ಕೆ ತರಬೇತಿ ಶಾಲೆ’ಯನ್ನು ತೆರೆಯುತ್ತಿದೆ.
ಉಡುಪಿ ಜಿಲ್ಲೆಯ ಕೋಟಿ ಚೆನ್ನಯ ಸೇನಾ ಆಯ್ಕೆ ತರಬೇತಿ ಶಾಲೆಗೆ ಆಯ್ಕೆಯಾದ ಯುವಕರ ದೈಹಿಕ ಪರೀಕ್ಷೆ
ಉಡುಪಿ ಜಿಲ್ಲೆಯ ಕೋಟಿ ಚೆನ್ನಯ ಸೇನಾ ಆಯ್ಕೆ ತರಬೇತಿ ಶಾಲೆಗೆ ಆಯ್ಕೆಯಾದ ಯುವಕರ ದೈಹಿಕ ಪರೀಕ್ಷೆ

ಉಡುಪಿ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೆಲವೇ ಕೆಲವು ಯುವಕರು ಸೇನೆಯನ್ನು ಸೇರಲು ಆಸಕ್ತಿ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅನೇಕ ಕಾರಣಗಳಿಗಾಗಿ, ಈ ಅವಳಿ ಜಿಲ್ಲೆಗಳ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ಷಣಾ ಪಡೆಗಳಿಗೆ ಸೇರಿಲ್ಲ. ಇದಕ್ಕೆ ಕಾರಣವೆಂದರೆ, ಒಂದು ಸರಿಯಾದ ಮಾರ್ಗದರ್ಶನ ದೊರೆಯದಿರುವುದು ಮತ್ತು ತರಬೇತಿಯ ಕೊರತೆ. ಆದರೆ, 15 ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ರಾಜ್ಯದ ಮೊದಲ ಸರ್ಕಾರಿ ಸೇನಾ ಆಯ್ಕೆ ತರಬೇತಿ ಶಾಲೆ ಆರಂಭವಾಗಲಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ ‘ಕೋಟಿ ಚೆನ್ನಯ ಸೇನಾ ಆಯ್ಕೆ ತರಬೇತಿ ಶಾಲೆ’ಯನ್ನು ತೆರೆಯುತ್ತಿದೆ.

ತರಬೇತಿ ಶಾಲೆಗೆ ತುಳುವ ಅವಳಿ ವೀರರಾದ ಕೋಟಿ ಮತ್ತು ಚೆನ್ನಯರ ಹೆಸರನ್ನು ಇಡಲಾಗಿದೆ. ಮೊದಲ ಬ್ಯಾಚ್‌ಗೆ 100 ಯುವಕರನ್ನು ಸೇರಿಸಿಕೊಳ್ಳಲಾಗುವುದು ಮತ್ತು ಅವರು ಭಾರತೀಯ ರಕ್ಷಣಾ ಪಡೆಗಳಿಗೆ 'ಅಗ್ನಿವೀರ'ರಾಗಿ ಸೇರಲು ಸಹಾಯ ಮಾಡಲು ನಾಲ್ಕು ತಿಂಗಳ ಕಠಿಣ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆಯುವವರಿಗೆ ಉಚಿತ ಊಟ ಮತ್ತು ವಸತಿ ನೀಡಲಾಗುವುದು. ಈಗಾಗಲೇ 60 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, 15 ದಿನಗಳಲ್ಲಿ ತರಬೇತಿ ಆರಂಭವಾಗಲಿದೆ. ಇನ್ನೂ 40 ಮಂದಿಯನ್ನು ಶೀಘ್ರದಲ್ಲೇ ನೋಂದಾಯಿಸಿಕೊಳ್ಳಲಾಗುವುದು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಶೇ 75 ಮತ್ತು ಎಸ್‌ಸಿ ಅಭ್ಯರ್ಥಿಗಳಿಗೆ ಶೇ 25 ಮೀಸಲಾತಿ ಇದೆ.

ಈ ರೀತಿಯ ತರಬೇತಿ ಶಾಲೆಯನ್ನು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ತೆರೆಯಲಾಗುವುದು ಮತ್ತು ಮುಂದಿನ ತಿಂಗಳುಗಳಲ್ಲಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ತೆರೆಯಲಾಗುವುದು. ಈ ಶಾಲೆಗಳಲ್ಲಿ ತರಬೇತಿ ಪಡೆದವರು ರಕ್ಷಣಾ ಪಡೆಗಳಿಗೆ ಆಯ್ಕೆಯಾಗುವ ಉತ್ತಮ ಅವಕಾಶಗಳಿವೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಟಿಎನ್‌ಐಇಗೆ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಮಾತನಾಡಿ, ಕರಾವಳಿಯಲ್ಲಿ ಸಶಸ್ತ್ರ ಪಡೆ ಸೇರುವ ಯುವಕರಲ್ಲಿ ಕ್ರಮೇಣ ಆಸಕ್ತಿ ಹೆಚ್ಚುತ್ತಿದ್ದು, ಇದಕ್ಕೆ ಈ ತರಬೇತಿ ಶಾಲೆ ಸಹಕಾರಿಯಾಗಲಿದೆ ಎಂದರು.

ಹಾವೇರಿಯಲ್ಲಿ ನಡೆಯುತ್ತಿರುವ ಅಗ್ನಿಪಥ್ ನೇಮಕಾತಿ ರ‍್ಯಾಲಿಯಲ್ಲಿ ಅವರ ಹುಟ್ಟೂರಾದ ಸುಳ್ಯ ತಾಲೂಕಿನ 100ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದೇ ಇದಕ್ಕೆ ಸ್ಪಷ್ಟ ಉದಾಹರಣೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಕ್ಯಾಪ್ಟನ್ ಆಗಿ ನಿವೃತ್ತರಾಗಿರುವ ಮಾಜಿ ಎಂಎಲ್‌ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು, ಇತರ ದೇಶಗಳ ಪಡೆಗಳ ನೇಮಕಾತಿ ತಂತ್ರಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿದ ನಂತರ ‘ಅಗ್ನಿಪಥ್’ ಯೋಜಿಸಲಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com