ಬೆಂಗಳೂರು: ಬಸ್ ಡಿಕ್ಕಿ ಹೊಡೆದ ನಂತರ ಶಾಲೆಗೆ ನಡೆದುಕೊಂಡು ಬಂದ ವಿದ್ಯಾರ್ಥಿ; ತರಗತಿಯಲ್ಲಿ ಕುಳಿತಿದ್ದಾಗ ಕುಸಿದು ಬಿದ್ದು ಸಾವು!

7 ವರ್ಷದ ಶಾಲೆಯ ವಿದ್ಯಾರ್ಥಿಗೆ ಖಾಸಗಿ ಶಾಲಾ ಬಸ್​ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 7 ವರ್ಷದ ಶಾಲೆಯ ವಿದ್ಯಾರ್ಥಿಗೆ ಖಾಸಗಿ ಶಾಲಾ ಬಸ್​ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ವಿದ್ಯಾರ್ಥಿ ನಿತೀಶ್ ಮೃತ ದುರ್ದೈವಿ. ನಿತೀಶ್ ನಡೆದುಕೊಂಡು ಮುನ್ನೆಕೊಳಲು ಸರ್ಕಾರಿ ಶಾಲೆಗೆ ಹೋಗುತ್ತಿದ್ದನು. ಈ ವೇಳೆ ಖಾಸಗಿ ಶಾಲೆಯ ಬಸ್​ ಡಿಕ್ಕಿ ಹೊಡೆದಿದೆ. ಕೂಡಲೇ ಬಸ್​ ಚಾಲಕ ವಿದ್ಯಾರ್ಥಿ ಬಳಿಗೆ ಬಂದು, ಕೆಳಗೆ ಬಿದ್ದ ಬಾಲಕನನ್ನು ಮೇಲೆತ್ತಿ ಏನು ಆಗಿಲ್ಲ ಅಂತ ನೀರು ಕುಡಿಸಿದ್ದಾನೆ.

ನಿತೀಶ್  ಕುಮಾರ್ ಆಪಘಾತದ ವೇಳೆ ಚೆನ್ನಾಗಿ ಮಾತನಾಡುತ್ತಿದ್ದ. ಬಳಿಕ ನಡೆದುಕೊಂಡೇ ಶಾಲೆಗೆ ಹೋಗಿದ್ದಾನೆ. ಕ್ಲಾಸ್ ರೂಂ ನಲ್ಲಿ ಕುಳಿತಿದ್ದ ವೇಳೆ ತಲೆಯಲ್ಲಿ ಊತ ಕಾಣಿಸಿಕೊಂಡು ಬಾಲಕ ಕುಸಿದು ಬಿದ್ದಿದ್ದಾನೆ. ಕೂಡಲೇ ಶಾಲಾ ಸಿಬ್ಬಂದಿ ಪೋಷಕರಿಗೆ ವಿಷಯ ತಿಳಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಗೆ ದಾಖಲಾದ ಕೇವಲ ಒಂದು ಗಂಟೆಯಲ್ಲಿ ಬಾಲಕ ನಿತೀಶ್ ಸಾವನ್ನಪ್ಪಿದ್ದಾನೆ. ಬೆಳಗ್ಗೆ 9.5 ನಿಮಿಷಕ್ಕೆ ಬಸ್ ಡಿಕ್ಕಿ ಹೊಡೆದಿದೆ. 10. 45ಕ್ಕೆ ನಿತೀಶ್ ಸಾವನ್ನಪ್ಪಿದ್ದಾನೆ. ನಿತೀಶ್ ಕುಮಾರ್ ಮುನೆಕೊಳಲು ನಿವಾಸಿ ರಾಜೇಶ್ ಮತ್ತು ಪ್ರಿಯಾ ದಂಪತಿಯ ಪುತ್ರ. ಬಾಲಕನ ಸಾವು ಅನೇಕರನ್ನು ಕಂಗೆಡಿಸಿದೆ.

ಬಾಲಕನಿಗೆ ಡಿಕ್ಕಿ ಹೊಡೆದ ನಂತರ ಖಾಸಗಿ ಶಾಲಾ ಬಸ್ ಚಾಲಕ ವಾಹನ ನಿಲ್ಲಿಸಿದ್ದಾನೆ. ಬಾಲಕನಿಗೆ ಕುಡಿಯಲು ನೀರು ಕೊಟ್ಟಿದ್ದು, ನಿತೀಶ್ ಚೆನ್ನಾಗಿ ಮಾತನಾಡುತ್ತಿದ್ದ, ಇದನ್ನು ಗಮನಿಸಿದ ಚಾಲಕ ವಿಟ್ಟಲ್ ಸ್ಥಳದಿಂದ ತೆರಳಿದ್ದಾನೆ.  ಆಂತರಿಕ ರಕ್ತಸ್ರಾವದಿಂದ ಬಾಲಕ ನಿತೀಶ್ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಹೆಚ್ಎಎಲ್ ಸಂಚಾರಿ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕ ವಿಠಲ್​ನನ್ನು ಬಂಧಿಸಿ, ಬಸ್ ಸೀಜ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com