ಜಕ್ಕೂರು ಏರೋಡ್ರಮ್ ಖಾಸಗಿಯವರಿಗೆ ನೀಡುವ ಪ್ರಶ್ನೆಯೇ ಇಲ್ಲ: ಸಚಿವ ನಾರಾಯಣಗೌಡ

ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯನ್ನು ನಾಲ್ಕು ವರ್ಷದಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮುಚ್ಚುವ ಹಂತಕ್ಕೆ ತಂದಿದ್ದರು. ಇದರ ಹಿಂದೆ ರಿಯಲ್ ಎಸ್ಟೇಟ್ ಉದ್ಯಮದ ದೊಡ್ಡ ಮಾಫಿಯಾವೇ ಕೆಲಸ ಮಾಡಿತ್ತು...
ಸಚಿವ ಡಾ.ನಾರಾಯಣಗೌಡ
ಸಚಿವ ಡಾ.ನಾರಾಯಣಗೌಡ

ಬೆಂಗಳೂರು: ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯನ್ನು ನಾಲ್ಕು ವರ್ಷದಿಂದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮುಚ್ಚುವ ಹಂತಕ್ಕೆ ತಂದಿದ್ದರು. ಇದರ ಹಿಂದೆ ರಿಯಲ್ ಎಸ್ಟೇಟ್ ಉದ್ಯಮದ ದೊಡ್ಡ ಮಾಫಿಯಾವೇ ಕೆಲಸ ಮಾಡಿತ್ತು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಹೇಳಿದ್ದಾರೆ.

ಈ ಕುರಿತು ಅವರು ಪತ್ರಿಕಾ ಪ್ರಕಟಣೆ ನೀಡಿರುವ ಸಚಿವರು, ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯನ್ನು ಮುಚ್ಚುವ ಯತ್ನ ನನ್ನ ಗಮನಕ್ಕೆ ಬಂದಿದ್ದರಿಂದ ಶಾಲೆಯನ್ನು ಪುನಾರಂಭ ಮಾಡಿ, ನೂರು ಜನ ನಿರುದ್ಯೋಗಿಗಳಿಗೆ ಪೈಲಟ್ ತರಬೇತಿ ನೀಡಿ ಉದ್ಯೋಗ ದೊರಕಿಸುವ ಕೆಲಸ ಮಾಡಲಾಗುತ್ತಿದೆ.

ನಿಯಮ ಉಲ್ಲಂಘಿಸಿ  ನಿರ್ಮಿಸಿರುವ ಖಾಸಗಿ ಕಟ್ಟಡಗಳನ್ನು ಒಡೆದು ಹಾಕಲು ನೋಟಿಸ್ ನೀಡಲಾಗಿದೆ. ಕಟ್ಟಡಗಳನ್ನು ಒಡೆದು ಹಾಕಲು ನೋಟೀಸ್ ನೀಡಿರುವುದರ ವಿರುದ್ಧವಾಗಿ ಈ ರೀತಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಯಾವುದೇ ಅಪಪ್ರಚಾರಗಳಿಗೆ ಬಗ್ಗುವ ಪ್ರಶ್ನೆಯೇ ಇಲ್ಲ. ನಿಯಮ ಉಲ್ಲಂಘಿಸಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಲಾಗುವುದು. ಅಲ್ಲದೇ,  ಹತ್ತಾರು ವರ್ಷಗಳಿಂದ ಬಾಡಿಗೆಯನ್ನೇ ನೀಡದೇ, ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತಂದು ಅಲ್ಲೇ ಮುಂದುವರೆದಿರುವ ಕೆಲವು ಖಾಸಗಿ ವಿಮಾನಯಾನ ಸಂಸ್ಥೆಗಳು ಕೂಡ ಇದರಲ್ಲಿ ಭಾಗಿಯಾಗಿವೆ. ಈ ಎಲ್ಲಾ ಕುತಂತ್ರಗಳಿಗೆ ಬಲಿಯಾಗುವುದಿಲ್ಲ ಎಂದಿದ್ದಾರೆ.

ಜಕ್ಕೂರು ವೈಮಾನಿಕ ತರಬೇತಿ ಶಾಲೆಯನ್ನು ಹಂತಹಂತವಾಗಿ ಅಭಿವೃದ್ಧಿಗೊಳಿಸುವ ಸಲುವಾಗಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಖಾಸಗಿಯವರಿಗೆ ನೀಡುವ ಯಾವುದೇ ಪ್ರಶ್ನೆ ಇಲ್ಲ ಎಂದು ವಿಧಾನಸಭೆಯ ಕಲಾಪದಲ್ಲಿಯೇ ಭರವಸೆ ನೀಡಿದ್ದೇನೆ, ನಾನು ಮತ್ತೊಮ್ಮೆ ಅದನ್ನು ಪುನರುಚ್ಚರಿಸುತ್ತಿದ್ದೇನೆ.

ವೈಮಾನಿಕ ಚಟುವಟಿಕೆಗಳಿಗೆ ಸೀಮಿತವಾಗಿ ಹಂತಹಂತವಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಮಾತ್ರ ಸರ್ಕಾರದ ಮುಂದೆ ಇದೆ. ಅದರಲ್ಲಿ ಸಿಮ್ಯುಲೇಟರ್‌ ತರಬೇತಿ ಮಹತ್ವದಾಗಿದೆ. ಅದನ್ನು ಅಳವಡಿಸುವುದರಿಂದ ಖಾಸಗಿಯವರ ಪಾಲಾಗುತ್ತಿರುವ ಆದಾಯವನ್ನು ಸರ್ಕಾರಕ್ಕೆ ತಂದುಕೊಡುವ ಉದ್ದೇಶ ಹೊಂದಲಾಗಿದೆ. ಇದೆಲ್ಲದರ ನಡುವೆಯೂ ಈ ಪ್ರಸ್ತಾವನೆಯನ್ನು ಸಾರ್ವಜನಿಕರ ಮುಂದೆ ತೆರದಿಡಲಾಗುವುದು. ಸಾರ್ವಜನಿಕರ ಅಭಿಪ್ರಾಯಗಳ ಪರಿಗಣಿಸಿ ಮುಂದುವರೆಯಲಾಗುವುದು. ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನೀಡುವ ಪ್ರಸ್ತಾಪ ಸರ್ಕಾರದ ಮುಂದೆ ಇರುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ.

ಕ್ಯಾಡ್ ಸಂಸ್ಥೆಯನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ರಚಿಸಿ ರಾಜೀವ್ ಗಾಂಧಿ ಏರೋ ಸ್ಪೋರ್ಟ್ಸ್ ಸೊಸೈಟಿ ಹೆಸರಿನಲ್ಲಿ 25 ಎಕರೆ ಜಾಗ ನೀಡಲು ಹಿಂದಿನ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿತ್ತು. ಅದನ್ನು ನಾನು ರದ್ದುಪಡಿಸಿರುತ್ತೇನೆ.

ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ 50 ಎಕರೆ ಮೀಸಲು ಎಂದು ಸುದ್ದಿಯಾಗುತ್ತಿರುವ ವಿಚಾರ ಆಧಾರ ರಹಿತ ಸತ್ಯಕ್ಕೆ ದೂರವಾದ ವಿಷಯವಾಗಿದೆ.

03-03-2018ರಂದು ನಡೆದಿದ್ದ ಸಚಿವ ಸಂಪುಟದಲ್ಲಿ ಅನುಮೋದನೆಯಾಗಿ, 13-03-2018 ರಂದು ಸರ್ಕಾರಿ ಆದೇಶ ಹೊರಡಿಸುವ ಮೂಲಕ ಫ್ಲೈಯಿಂಗ್ ನಿರ್ಮಾಣಕ್ಕೆ ಹಾಗೂ ಫ್ಲೈಯಿಂಗ್ ಕ್ಲಬ್‌ಗೆ 15 ಎಕರೆ ಜಾಗವನ್ನು ಮೀಸಲಿಡಲು ಅವಕಾಶ ಮಾಡಿಕೊಡಲಾಗಿತ್ತು. ಅದನ್ನು ನಾನು 15-09-2021 ರ ಸರ್ಕಾರಿ ಆದೇಶದಲ್ಲಿ ರದ್ದುಪಡಿಸಿರುತ್ತೇನೆ. ಫ್ಲೈಯಿಂಗ್ ಕ್ಲಬ್ ಹೆಸರಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಎಲ್ಲಾ ಚಟುವಟಿಕೆಗಳನ್ನು ಅಲ್ಲಿಯೇ ರದ್ದುಗೊಳಿಸಿದ್ದೇನೆ. ಈ ಬಗ್ಗೆ ಕಳೆದ ಅಧಿವೇಶನದಲ್ಲಿ ಸದನದಲ್ಲೇ ನಾನು ಭರವಸೆ ನೀಡಿರುತ್ತೇನೆ ಎಂದು ತಿಳಿಸಿದ್ದಾರೆ.

ತಪ್ಪು ಸಂದೇಶವನ್ನು ರವಾನಿಸುವುದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಮಹಾರಾಜರು ನೀಡಿರುವ ಜಾಗದಲ್ಲಿ ಒಂದಿಂಚೂ ಜಾಗವನ್ನು ಖಾಸಗಿಯವರ ಪಾಲಾಗಲು ಬಿಡುವುದಿಲ್ಲ ಎಂದು ನಾರಾಯಣಗೌಡ ಹೇಳಿದ್ದಾರೆ.

ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯನ್ನು ಅಭಿವೃದ್ದಿಪಡಿಸಲು ಸರ್ಕಾರದ ಮುಂದಿರುವ ಪ್ರಸ್ತಾವನೆ

೧. ಹಾರಾಟ ತರಬೇತಿ ಶಾಲೆ: ಹಾಲಿ ಇರುವ ಶಾಲೆಯ ತರಬೇತಿ ಸಿಮುಲೇಟರ್‌, ಟೈಪ್‌ರೈಟಿಂಗ್‌ ತರಬೇತಿ, ಹ್ಯಾಂಗರ್‌ ಇತ್ಯಾದಿ ಮೂಲಸೌಲಭ್ಯಗಳನ್ನು ಅಭಿವೃದ್ದಿಪಡಿಸುವುದು.

೨. ಜ್ಞಾನ ಮತ್ತು ಮಾಹಿತಿ ಮನರಂಜನೆ; MRO ವಲಯ, ವಿಮಾನಯಾನ ಜ್ಙಾನ ವಲಯ, ಗ್ರೌಂಡ್‌ ಕ್ರ್ಯೂ ತರಬೇತಿ, ಮ್ಯೂಸಿಯಂ ಇತ್ಯಾದಿ.

೩. ಸಾಹಸ ಕ್ರೀಡಾ ಪ್ರವಾಸೋದ್ಯಮ ಮತ್ತು ಆರೋಗ್ಯ‌ ರಕ್ಷಣೆ : ವಾಯು ಸಾಹಸ ಕ್ರೀಡೆಗಳು, ಡ್ರೋಣ್‌ ತರಬೇತಿ, ಚಾರ್ಟರ್‌ ಹಾರಾಟ, ಹೆಲಿ ಟೂರಿಸಂ ಮತ್ತು ಹೆಲಿ ಆಂಬುಲೆನ್ಸ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com