ಪರಿಷತ್ ನಲ್ಲೂ "Paycm" ಗದ್ದಲ; ಪೋಸ್ಟರ್ ಪ್ರದರ್ಶಿಸಿ ಬಿಜೆಪಿ ಆಕ್ರೋಶ, ಕುರ್ಚಿ ಮೇಲೆ ಹತ್ತಿದ ಪ್ರಕಾಶ್ ರಾಥೋಡ್​!

ವಿಧಾನ ಪರಿಷತ್ ಕಲಾಪದಲ್ಲೂ "Paycm" ಪೋಸ್ಟರ್ ವಿಚಾರ ಮಾರ್ಧನಿಸಿದ್ದು, ಸದನದಲ್ಲಿ ಪೋಸ್ಟರ್ ಪ್ರದರ್ಶಿಸಿ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪರಿಷತ್ ನಲ್ಲೂ Paycm ಪೋಸ್ಟರ್ ಗದ್ದಲ
ಪರಿಷತ್ ನಲ್ಲೂ Paycm ಪೋಸ್ಟರ್ ಗದ್ದಲ

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲೂ "Paycm" ಪೋಸ್ಟರ್ ವಿಚಾರ ಮಾರ್ಧನಿಸಿದ್ದು, ಸದನದಲ್ಲಿ ಪೋಸ್ಟರ್ ಪ್ರದರ್ಶಿಸಿ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಇಂದು ವಿಧಾನಪರಿಷತ್​ನಲ್ಲಿ ಪೇ ಸಿಎಂ ಪೋಸ್ಟರ್ ವಿಚಾರ ಪ್ರತಿಧ್ವನಿಸಿದ್ದು ಗದ್ದಲ, ಕೋಲಾಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ‘ಪೇಸಿಎಂ’ ಪೋಸ್ಟರ್ ಅಭಿಯಾನದಲ್ಲಿ ಭಾಗಿಯಾದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಬೆಂಗಳೂರು ನಗರ ಪೊಲೀಸರ ಕ್ರಮದ ಕುರಿತು ರಾಜ್ಯ ವಿಧಾನ ಪರಿಷತ್ತಿನಲ್ಲಿ ಗುರುವಾರ ಆಕ್ರೋಶಭರಿತ ದೃಶ್ಯಗಳು ಕಂಡುಬಂದವು. ಕಾಂಗ್ರೆಸ್ ಕಾರ್ಯಕರ್ತರ ಬಂಧನ ಖಂಡಿಸಿ ಕಾಂಗ್ರೆಸ್ ಸದಸ್ಯರು ಪೇ ಸಿಎಂ’ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಪರಿಷತ್​ನಲ್ಲಿ ಕಾಂಗ್ರೆಸ್​​-ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆದಿದ್ದು ಗದ್ದಲದ ನಡುವೆಯೇ ಬಿಜೆಪಿ ಸದಸ್ಯರು ಕೂಡ ಉಭಯ ಪಕ್ಷಗಳ ಸದಸ್ಯರ ಹಾಗೂ ಸಿದ್ದರಾಮಯ್ಯ ಅವಧಿಯ ಭ್ರಷ್ಟಾಚಾರ ಹಗರಣಗಳ ಪೋಸ್ಟರ್​ ಪ್ರದರ್ಶನ ಮಾಡಿದರು. 

"PayCM-40 ಪ್ರತಿಶತ ಕಮಿಷನ್ ಸ್ವೀಕರಿಸಲಾಗಿದೆ" ಎಂದು ಬೆಂಗಳೂರಿನ ಹಲವು ಸ್ಥಳಗಳಲ್ಲಿ ಸಿಎಂ ಮುಖದ ಪೋಸ್ಟರ್‌ಗಳನ್ನು ಅಂಟಿಸಿದ ನಂತರ, ಪೊಲೀಸರು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ತಂಡದ ಸದಸ್ಯರನ್ನು ಬಂಧಿಸಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಕಾರ್ಯಕರ್ತರ ಬಂಧನದ ವಿರುದ್ಧ ಪ್ರತಿಭಟಿಸಿದರು ಮತ್ತು ಅವರನ್ನು ತಕ್ಷಣ ಬಿಡುಗಡೆ ಮಾಡಲು ಒತ್ತಾಯಿಸಿದರು. ಮಧ್ಯರಾತ್ರಿ ಕಾರ್ಯಕರ್ತರನ್ನ ಬಂಧಿಸಿದ್ದಾರೆ ಕಾರ್ಯಕರ್ತರು ಟೆರೆರಿಸ್ಟ್ ಗಳಾ? 40%, 100% ಎಲ್ಲಾ ವಿಚಾರಗಳು ಚರ್ಚೆಯಾಗಲಿ ಎಂದು ಕಾಂಗ್ರೆಸ್ ನಾಯಕ ಹರಿಪ್ರಸಾದ್ ಆಗ್ರಹಿಸಿದರು. 

ಕಾಂಗ್ರೆಸ್​​-ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ಆಗಿದೆ. ಬಿಜೆಪಿ ಸದಸ್ಯರು ಕೂಡ ಉಭಯ ಪಕ್ಷಗಳ ಸದಸ್ಯರ ಹಾಗೂ ಸಿದ್ದರಾಮಯ್ಯ ಅವಧಿಯ ಭ್ರಷ್ಟಾಚಾರ ಹಗರಣಗಳ ಪೋಸ್ಟರ್ ಹಿಡಿದು ಪ್ರದರ್ಶಿಸಿದ್ದಾರೆ. ಭ್ರಷ್ಟ ಕಾಂಗ್ರೆಸ್​​ಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ. ಇನ್ನು ಈ ಗದ್ದಲದ ನಡುವೆಯೇ ವಿಧೇಯಕ ಮಂಡಿಸಲಾಗಿದ್ದು ಇದಕ್ಕೆ ತೀವ್ರ ಆಕ್ರೋಶ ಹೊರ ಹಾಕಲಾಗಿದೆ. ಇನ್ನು ಹೌಸ್​​ ಆರ್ಡರ್​ನಲ್ಲಿ ಇಲ್ಲ ಎಂದು ಜೆಡಿಎಸ್ ಸದಸ್ಯರು ಘೋಷಣೆ ಕೂಗಿದ್ದಾರೆ. ಗದ್ದಲದ ನಡುವೆಯೇ ಸಭಾಪತಿ ಪ್ರಶ್ನೋತ್ತರ ಮುಂದುವರಿಸಿದ್ರು. ಪ್ರಶ್ನೋತ್ತರ ಮುಗಿಸಿ ಕಾಗದ ಪತ್ರಗಳನ್ನು ಮುಂದಿಟ್ರು. ಈ ವೇಳೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಸದಸ್ಯರು ಭ್ರಷ್ಟ ಕಾಂಗ್ರೆಸ್​​ಗೆ ಧಿಕ್ಕಾರ ಎಂದು ಘೋಷಣೆ ಕೂಗುದ್ರು. ಆಗ ಗದ್ದಲ ಮತ್ತಷ್ಟು ಹೆಚ್ಚಾಗಿದ್ದು ಈ ವೇಳೆ ಸಭಾಪತಿ ಪೀಠದ ರಕ್ಷಣೆಗೆ ಮಾರ್ಷಲ್​ಗಳು ಧಾವಿಸಿದ್ದು ತೀವ್ರ ಗದ್ದಲ ಹಿನ್ನೆಲೆ ಮಧ್ಯಾಹ್ನ 3ಕ್ಕೆ ಕಲಾಪ ಮುಂದೂಡಲಾಗಿದೆ.

ಬಿಜೆಪಿ ಸದಸ್ಯರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಭಾವಚಿತ್ರವಿರುವ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದಾಗ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮಾತ್ರ ಪೊಲೀಸರು ಕ್ರಮ ಕೈಗೊಂಡಿದ್ದು ಏಕೆ ಎಂದು ಪ್ರಶ್ನಿಸಿದರು. ಪ್ರಚಾರಕ್ಕೆ ಕಾರಣರಾದವರ ವಿರುದ್ಧ ಪೊಲೀಸರ ಕ್ರಮವನ್ನು ಸರ್ಕಾರ ಸಮರ್ಥಿಸಿಕೊಂಡಾಗ, ವಿರೋಧ ಪಕ್ಷದ ಸದಸ್ಯರು ಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಸದನದ ಬಾವಿಗೆ ಧಾವಿಸಿದರು. ಆಡಳಿತಾರೂಢ ಬಿಜೆಪಿ ಸದಸ್ಯರು ಕೂಡ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿದರು.

ಹಂಗಾಮಿ ಅಧ್ಯಕ್ಷರು ಗದ್ದಲದ ನಡುವೆಯೇ ಕಲಾಪವನ್ನು ನಡೆಸಲು ಪ್ರಯತ್ನಿಸಿದರು ಮತ್ತು ಕೆಲವು ಮಸೂದೆಗಳು (ಈ ಹಿಂದೆ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟವು) ಕೌನ್ಸಿಲ್‌ನಲ್ಲಿ ಅಂಗೀಕರಿಸಲ್ಪಟ್ಟವು. ಗದ್ದಲದ ನಡುವೆಯೇ ವಿಧೇಯಕಗಳನ್ನು ಅಂಗೀಕರಿಸಿದ ಹಂಗಾಮಿ ಸಭಾಪತಿಯವರ ನಿರ್ಧಾರದಿಂದ ಕೆರಳಿದ ಕಾಂಗ್ರೆಸ್ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಸೇರಿದಂತೆ ಕೆಲವು ವಿಪಕ್ಷ ಸದಸ್ಯರು ತಮ್ಮ ಕುರ್ಚಿಗಳ ಮೇಲೆ ನಿಂತು ಪ್ರತಿಭಟಿಸಿದರೆ, ಇನ್ನು ಕೆಲವರು ಹಂಗಾಮಿ ಸಭಾಪತಿಯವರ ಪೀಠದತ್ತ ಧಾವಿಸಿದರು. ಹೀಗಾಗಿ ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಯಿತು. ಬಳಿಕವೂ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಘೋಷಣೆಗಳನ್ನು ಮುಂದುವರೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com