ಬೆಂಗಳೂರು: ಬಿಬಿಎಂಪಿ ಅಧಿಕಾರಿಯೊಬ್ಬರು, ನೌಕರರ ಸಂಘದ ಅಸ್ತಿತ್ವದಲ್ಲಿಲ್ಲದ ಅಧಿಕಾರಿಯೊಬ್ಬರ ನಕಲಿ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡು, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ಆಯುಕ್ತರಿಗೆ ಅಕ್ರಮ ಪತ್ರ ವ್ಯವಹಾರ ನಡೆಸಿದ ಆರೋಪ ಕೇಳಿ ಬಂದಿದೆ.
ಆರೋಪಿ ಎಂ ಮಾಯಣ್ಣ ಅವರ ಮೇಲೆ ಈ ಹಿಂದೆ ತಮ್ಮ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿದ್ದರು. ಮಾಯಣ್ಣ ವಿರುದ್ಧ ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಕೆ.ನರಸಿಂಹ ದೂರು ದಾಖಲಿಸಿದ್ದಾರೆ. ಅಮೃತ್ ರಾಜ್ ಎಂಬುವರ ಲೆಟರ್ ಹೆಡ್ ಬಳಸಿಕೊಂಡು ಮಾಯಣ್ಣ ಅವ್ಯವಹಾರ ನಡೆಸಿದ್ದಾರೆ ಎಂಬುದಾಗಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಮಾಯಣ್ಣ ವಿರುದ್ಧ ಐಪಿಸಿ ಸೆಕ್ಷನ್ 420ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಕುರಿತು ಪ್ರತಿಕ್ರಿಯಿಸಿದ ಮಾಯಣ್ಣ, ದೂರು ನೀಡಿರುವ ಕೆ ನರಸಿಂಹ ಎಂಬುವವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೌಕರರ ಸಂಘದಿಂದ ಪದಚ್ಯುತಿಗೊಂಡಿರುವ ಅಮೃತ್ ರಾಜ್ ಎಂಬಾತನ ಸೂಚನೆ ಮೇರೆಗೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅವರು (ಅಮೃತ್ ರಾಜ್) ನನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ಸಹಕಾರ ಇಲಾಖೆಯಿಂದ ನೋಂದಾಯಿತವಾಗಿರುವ ನಮ್ಮ ಸಂಘದ ವಿರುದ್ಧ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಹಿನ್ನಡೆ ಅನುಭವಿಸಿ ಇದೀಗ ಹೊಸ ನೌಕರರ ಸಂಘವನ್ನು ಹುಟ್ಟುಹಾಕಿ ನಮ್ಮ ಸಂಘವನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ.
ಈ ಹಿಂದೆಯೂ ಅವರೇ ನನ್ನ ಮೇಲೆ ಎಸಿಬಿ ದಾಳಿ ನಡೆಸಿದ್ದರು. ಅವರು ನನ್ನ ವಿರುದ್ಧ ಸುಳ್ಳು ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದರು, ಆ ವಿಷಯ ಕೂಡ ಬಹಿರಂಗವಾಯಿತು ಎಂದು ಮಾಯಣ್ಣ ದೂರಿದ್ದಾರೆ.
Advertisement