ಪೌರ ಕಾರ್ಮಿಕರ ಜೊತೆ ಕುಳಿತು ಸಿಎಂ ಬೊಮ್ಮಾಯಿ ಉಪಾಹಾರ ಸೇವನೆ; ಭಾವನೆಗಳಿಗೆ ಸ್ಪಂದನೆ

ಇಂದು ಸೆಪ್ಟೆಂಬರ್ 23 ಪೌರ ಕಾರ್ಮಿಕ ದಿನಾಚರಣೆ. ಆ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ನಿವಾಸದಲ್ಲಿ ಪೌರ ಕಾರ್ಮಿಕರೊಂದಿಗೆ ಬೆರೆತು ಅವರ ಕಷ್ಟಸುಖಗಳನ್ನು ಆಲಿಸಿ, ಅವರಿಗೆ ಉಪಾಹಾರದ ಆತಿಥ್ಯ ನೀಡಿ ಅವರ ಜೊತೆ ಕುಳಿತು ಉಪಾಹಾರ ಸೇವಿಸಿದರು.
ಪೌರ ಕಾರ್ಮಿಕರ ಜೊತೆ ಉಪಾಹಾರ ಸವಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು
ಪೌರ ಕಾರ್ಮಿಕರ ಜೊತೆ ಉಪಾಹಾರ ಸವಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು

ಬೆಂಗಳೂರು: ನಮ್ಮ ಸಮಾಜದ ಸ್ವಾಸ್ಥ್ಯವನ್ನು ಸಮರ್ಪಕವಾಗಿ ಕಾಯ್ದುಕೊಳ್ಳುವಲ್ಲಿ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂದು ಸೆಪ್ಟೆಂಬರ್ 23 ಪೌರ ಕಾರ್ಮಿಕ ದಿನಾಚರಣೆ. ಆ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ನಿವಾಸದಲ್ಲಿ ಪೌರ ಕಾರ್ಮಿಕರೊಂದಿಗೆ ಬೆರೆತು ಅವರ ಕಷ್ಟಸುಖಗಳನ್ನು ಆಲಿಸಿ, ಅವರಿಗೆ ಉಪಾಹಾರದ ಆತಿಥ್ಯ ನೀಡಿ ಅವರ ಜೊತೆ ಕುಳಿತು ಉಪಾಹಾರ ಸೇವಿಸಿದರು.

ಸಿಎಂ ಬೊಮ್ಮಾಯಿ ಅವರ ಸರ್ಕಾರಿ ‌ನಿವಾಸ ರೇಸ್‌ ವ್ಯೂನಲ್ಲಿ 500ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಸಿಎಂ ಬೊಮ್ಮಾಯಿ ಅವರಿಗೆ ಗೋವಿಂದ ಕಾರಜೋಳ, ಕೋಟಾ ಶ್ರೀನಿವಾಸ್ ಪೂಜಾರಿ, ಸಿಸಿ ಪಾಟೀಲ್, ಪರಿಷತ್ ಸದಸ್ಯ ಚಲವಾದಿ ನಾರಾಯಣ ಸ್ವಾಮಿ, ಶಾಸಕ ಎನ್.ಮಹೇಶ್ ಮತ್ತಿತರರು ಸಾಥ್ ನೀಡಿದರು. ಸಿಎಂ ಪೌರಕಾರ್ಮಿಕರ ಕಷ್ಟ ನೆನೆದು ಭಾವುಕರಾಗಿ ಮಾತನಾಡಿದ್ದು, ಸರ್ಕಾರ 11,000ಕ್ಕೂ ಹೆಚ್ಚು ಪೌರ ಕಾರ್ಮಿಕರ ಖಾಯಂ ನಿರ್ಧಾರ ಮಾಡಿದೆ ಎಂದು ತಿಳಿಸಿದ್ದಾರೆ.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಸಮಾಜದ ಜನರ ಸೇವೆ ಮಾಡುವ ಪೌರ ಕಾರ್ಮಿಕರಿಗೆ ಅವರ ಸೇವೆಯಲ್ಲಿ ಭದ್ರತೆಯಿರಲಿಲ್ಲ. ಅನುಕೂಲವಿರಲಿಲ್ಲ. ಇದಕ್ಕಾಗಿ ನಮ್ಮ ಸರ್ಕಾರ ಸಮಿತಿ ರಚಿಸಿ ಸಮಿತಿ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ಸಭೆ ನಡೆಸಿದ್ದೇವೆ. ರಾಜ್ಯದಲ್ಲಿ ಹಂತಹಂತವಾಗಿ 43 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು ಅದರಲ್ಲಿ ಮೊದಲನೆ ಹಂತದಲ್ಲಿ 11 ಸಾವಿರ ಪೌರ ಕಾರ್ಮಿಕರನ್ನು ಸೇವೆಯಲ್ಲಿ ಖಾಯಂಗೊಳಿಸಲಾಗುವುದು ಎಂದು ತಿಳಿಸಿದರು.

ಪೌರ ಕಾರ್ಮಿಕರನ್ನು ಸೇವೆಯಲ್ಲಿ ಖಾಯಂಗೊಳಿಸುವುದರಿಂದ ಕಾರ್ಮಿಕರ ಮನದಲ್ಲಿ ಒಂದು ಹೊಸ ಹೊರಪು, ಉತ್ಸಾಹ ಮೂಡಿದೆ. ಇಷ್ಟು ವರ್ಷಗಳ ಸೇವೆ, ಕಠಿಣ ಪರಿಶ್ರಮಕ್ಕೆ ಒಂದು ಸಾರ್ಥಕತೆ ಸಿಗುತ್ತಿದೆ ಎಂಬ ಭಾವನೆ ಬರುತ್ತಿದೆ. ಪೌರ ಕಾರ್ಮಿಕರ ಭಾವನೆಗಳಿಗೆ ಗೌರವ ನೀಡಿ ಮುಂದಿನ ಕಾರ್ಯಕ್ರಮಗಳನ್ನು ಮಾಡುತ್ತೇವೆ. ಅತ್ಯಂತ ತಳಮಟ್ಟದಲ್ಲಿರುವ ಕೆಲಸ, ಅವರಿಗೆ ಗೌರವ ಕೊಡುವ, ಅವರಲ್ಲಿ ಆತ್ಮವಿಶ್ವಾಸ ತುಂಬಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಸಿಎಂ ಬೊಮ್ಮಾಯಿ ಪಕ್ಕ ಕುಳಿತು ಉಪಾಹಾರ ಸೇವಿಸಿದ ಪೌರ ಕಾರ್ಮಿಕರ ಮುಖದಲ್ಲಿ ನಗು ಮೂಡಿತ್ತು. ಮುಖ್ಯಮಂತ್ರಿಗಳು ನಮ್ಮ ಸಮಸ್ಯೆಗಳನ್ನು ಆಲಿಸಿದ್ದಾರೆ, ಇಷ್ಟು ವರ್ಷಗಳ ನಂತರ ಸೇವೆಯಲ್ಲಿ ಖಾಯಂ ಮಾಡುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಪೌರ ಕಾರ್ಮಿಕರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com