ರೈತರ ಪ್ರತಿಭಟನೆ ವೇಳೆ ಹಲವು ಖಾತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ಕೇಂದ್ರ ಸೂಚಿಸಿತ್ತು: ಹೈಕೋರ್ಟ್‌ಗೆ ಟ್ವಿಟರ್ ಮಾಹಿತಿ

ಕಳೆದ ವರ್ಷ ದೆಹಲಿಯ ಗಡಿಯಲ್ಲಿ ನಡೆದ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಹಲವಾರು ಖಾತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ತನಗೆ ಸೂಚಿಸಿತ್ತು ಎಂದು ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್....
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ಕಳೆದ ವರ್ಷ ದೆಹಲಿಯ ಗಡಿಯಲ್ಲಿ ನಡೆದ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಹಲವಾರು ಖಾತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ತನಗೆ ಸೂಚಿಸಿತ್ತು ಎಂದು ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್ ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಪುನರಾವರ್ತಿತ ಅಪರಾಧದ ಹೊರತು ರಾಜಕೀಯ ಟೀಕೆಗಳ ಹಿನ್ನೆಲೆಯಲ್ಲಿ ವೈಯಕ್ತಿಕ ಟ್ವೀಟ್ ಅನ್ನು ಮಾತ್ರ ನಿರ್ಬಂಧಿಸಲು ಕಾನೂನು ಅನುಮತಿಸುತ್ತದೆ. ಆದರೆ ಸಂಪೂರ್ಣ ಖಾತೆಯನ್ನಲ್ಲ ಎಂದು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ಪೀಠಕ್ಕೆ ಟ್ವಿಟರ್ ಹೇಳಿದೆ.

ಫೆಬ್ರವರಿ 2021 ಮತ್ತು ಫೆಬ್ರವರಿ 2022 ರ ನಡುವೆ ಕೇಂದ್ರ ಸರ್ಕಾರವು 10 ನಿರ್ಬಂಧಿಸುವ ಆದೇಶಗಳಿಗೆ ಸಂಬಂಧಿಸಿದಂತೆ ಟ್ವಿಟ್ಟರ್ ಪರವಾಗಿ ವಿಚಾರಣೆಗೆ ಹಾಜರಾದ ಹಿರಿಯ ವಕೀಲ ಅರವಿಂದ್ ಎಸ್ ದಾತರ್ ಅವರು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ರ ಪ್ರಕಾರ ಖಾತೆಗಳನ್ನು ಸಂಪೂರ್ಣ ನಿರ್ಬಂಧಿಸಲು ಅವಕಾಶ ಇಲ್ಲ ಎಂದು ಹೇಳಿದ್ದಾರೆ.

ಪತ್ರಿಕೆಗಳು ಮತ್ತು ಟೆಲಿವಿಷನ್ ಚಾನೆಲ್‌ಗಳು ರೈತರ ಆಂದೋಲನವನ್ನು ವರದಿ ಮಾಡುತ್ತಿರುವಾಗ, ಖಾತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಏಕೆ ಸೂಚಿಸಿದರು ಎಂದು ಕೋರ್ಟ್ ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ದಾತರ್ ಅವರು, ವಾಕ್ ಸ್ವಾತಂತ್ರ್ಯವು ಸರ್ಕಾರವನ್ನು ಟೀಕಿಸುವ ಹಕ್ಕನ್ನು ಒಳಗೊಂಡಿದೆ. ಕಾನೂನಿನ ಮಿತಿಯಲ್ಲಿ ಟೀಕೆ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಸಹ ಹೇಳಿದೆ. ಆದರೆ ಕೇಂದ್ರ ಸರ್ಕಾರದ ಆದೇಶ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಹೇಳಿದರು.

ನ್ಯಾಯಮೂರ್ತಿ ದೀಕ್ಷಿತ್ ಅವರು ಅಮೆರಿಕದಂತಹ ಇತರ ದೇಶಗಳಲ್ಲಿ ನ್ಯಾಯವ್ಯಾಪ್ತಿಗಳಲ್ಲಿ ಇಂತಹ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತಾರೆ ಎಂಬುದನ್ನು ತಿಳಿಸಿ ಎಂದರು. ಇದಕ್ಕೆ ವಕೀಲರು ಸಮಯ ಕೋರಿದರು. ಹೀಗಾಗಿ ನ್ಯಾಯಮೂರ್ತಿ ದೀಕ್ಷಿತ್ ಚಾರಣೆಯನ್ನು ಅಕ್ಟೋಬರ್ 17ಕ್ಕೆ ಮುಂದೂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com