ECLGS ಪ್ರಯೋಜನಗಳು ತಳಮಟ್ಟದಲ್ಲಿ ಸಣ್ಣ ಕೈಗಾರಿಕೆಗಳ ತಲುಪುವುದನ್ನು ಸರ್ಕಾರ ಖಚಿತಪಡಿಸಿದೆ: ನಿರ್ಮಲಾ ಸೀತಾರಾಮನ್

ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS)ಅಡಿಯಲ್ಲಿನ ಪ್ರಯೋಜನಗಳು ನೆಲಮಟ್ಟದಲ್ಲಿ ಸಣ್ಣ ಕೈಗಾರಿಕೆಗಳ ತಲುಪುವುದನ್ನು ಬಿಜೆಪಿ ಸರ್ಕಾರ ಖಚಿತಪಡಿಸಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ಬೆಂಗಳೂರು: ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS)ಅಡಿಯಲ್ಲಿನ ಪ್ರಯೋಜನಗಳು ನೆಲಮಟ್ಟದಲ್ಲಿ ಸಣ್ಣ ಕೈಗಾರಿಕೆಗಳ ತಲುಪುವುದನ್ನು ಬಿಜೆಪಿ ಸರ್ಕಾರ ಖಚಿತಪಡಿಸಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಬೆಂಗಳೂರಿನ ಜೆ.ಪಿ.ನಗರದ ಆರ್‌.ವಿ.ಡೆಂಟಲ್‌ ಕಾಲೇಜಿನಲ್ಲಿ ಥಿಂಕರ್ಸ್‌ ಫೋರಮ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ 8–9 ವರ್ಷಗಳಲ್ಲಿ ಕರ್ನಾಟಕ ಮತ್ತು ಕನ್ನಡದ ಅಸ್ಮಿತೆಗೆ ಸದಾ ಮಾನ್ಯತೆ ಕೊಟ್ಟಿದೆ. 

ಬೆಂಗಳೂರನ್ನು ಜಾಗತಿಕ ಮಟ್ಟದ ನಗರವಾಗಿ ರೂಪಿಸುವಲ್ಲಿ ಇಲ್ಲಿನ ಯುವಜನತೆಯ ಪಾತ್ರ ದೊಡ್ಡದು. ಸರ್ಕಾರ ಈ ಪ್ರಯತ್ನಕ್ಕೆ ಪೂರಕವಾಗಿ ನೀತಿಗಳನ್ನು ರೂಪಿಸಿತು. ಪ್ರಧಾನಿ ಮೋದಿ ಗುಜರಾತ್‌ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದ್ದರಿಂದ ರಾಜ್ಯಗಳ ಸಂಕಷ್ಟಗಳನ್ನು ಚೆನ್ನಾಗಿ ಅರಿತಿದ್ದಾರೆ. ಹೀಗಾಗಿ ಅನುದಾನ ನೀಡಿಕೆಯಲ್ಲಿ ಯಾವುದೇ ರಾಜ್ಯಗಳಿಗೂ ಅನ್ಯಾಯವಾಗಿಲ್ಲ. ಭಾರತೀಯ ಕರೆನ್ಸಿ ಈಗ ಜಾಗತಿಕ ಮಾನ್ಯತೆ ಪಡೆದಿದೆ. ಹಲವು ದೇಶಗಳಲ್ಲಿ ಬಾರತೀಯ ಕರೆನ್ಸಿ ಮೂಲಕ ವಾಣಿಜ್ಯ ವಹಿವಾಟಿಗೆ ಅವಕಾಶ ಸಿಕ್ಕಿದೆ. ಸಾಲದ ಸುಳಿಗೆ ಸಿಲುಕಿ ಹಲವು ರಾಷ್ಟ್ರಗಳು ಸಂಕಷ್ಟದಲ್ಲಿವೆ. ಹೀಗಾಗಿ ಭಾರತದ ಜತೆ ವಾಣಿಜ್ಯ ವ್ಯವಹಾರಕ್ಕೆ ಹಲವು ದೇಶಗಳು ಭಾರತೀಯ ಕರೆನ್ಸಿಯನ್ನು ಒಪ್ಪಿಕೊಂಡಿವೆ. ಇದಕ್ಕೆ ಭಾರತದ ಮೇಲಿನ ವಿಶ್ವಾಸ, ನಂಬಿಕೆ, ಸ್ಥಿರ ಸರ್ಕಾರ ಮತ್ತು ಸರ್ಕಾರದ ನೀತಿಗಳು, ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸವೇ ಕಾರಣ ಎಂದರು.

ಅಂತೆಯೇ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಆಮಿಷ ಒಡ್ಡುವ ಆ್ಯಪ್‌ಗಳ ಬಗ್ಗೆ ಎಚ್ಚರಿಕೆ ಇರಬೇಕು. ಮೋಸ ಮಾಡುವವರು ವಿವಿಧ ರೂಪಗಳಲ್ಲಿ ಬರುತ್ತಾರೆ. ಆಮಿಷಗಳಿಗೆ ಬಲಿಯಾಗಬಾರದು. ಕೃಷಿಕರ ಮೇಲೆ ತೆರಿಗೆ ಹಾಕುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಸಂಬಳದಾರರು ತೆರಿಗೆ ವ್ಯಾಪ್ತಿಯಲ್ಲಿದ್ದಾರೆ. ಈ ವರ್ಗದ ನೋವು ನಮಗೆ ಗೊತ್ತಿದೆ. ಈ ವರ್ಗಕ್ಕೆ  ತೆರಿಗೆ ಪ್ರಮಾಣವನ್ನು ಹೆಚ್ಚಿಸಿಲ್ಲ. ಆದರೆ, ತೆರಿಗೆ ವ್ಯಾಪ್ತಿಗೆ ಬರದ ಮತ್ತು ಸಾಕಷ್ಟು ಹಣ ಹೊಂದಿರುವ ವರ್ಗವನ್ನೂ ತೆರಿಗೆ ವ್ಯಾಪ್ತಿಗೆ ತರುವ ಪ್ರಯತ್ನ ನಡೆದಿದೆ. ಚುನಾವಣೆ ಸಂದರ್ಭದಲ್ಲಿ ಉಚಿತ ಕೊಡುಗೆಗಳನ್ನು ಘೋಷಿಸುವ ಸಂದರ್ಭದಲ್ಲಿ ಎಚ್ಚರಿಕೆ ಇರಬೇಕು. ಆಯಾ ರಾಜ್ಯದ ಬಜೆಟ್‌ನ ಇತಿಮಿತಿಗೆ ತಕ್ಕಂತೆ, ರಾಜ್ಯದ ಆರ್ಥಿಕ ವ್ಯವಸ್ಥೆ ದಿವಾಳಿ ಆಗದಂತೆ ಎಚ್ಚರಿಕೆ ವಹಿಸಬೇಕು. ಕಾಂಗ್ರೆಸ್‌ ಕರ್ನಾಟದಲ್ಲಿ ಘೋಷಿಸಿರುವ ಗ್ಯಾರಂಟಿ ಭರವಸೆ ಈಡೇರಿಸಲು ಬಜೆಟ್‌ನ ಮುಕ್ಕಾಲು ಪಾಲು ಹಣ ಬೇಕಾಗುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ಹಣವೇ ಉಳಿಯವುದಿಲ್ಲ. ಬಡವರು ಮತ್ತು ದುರ್ಬಲ ವರ್ಗದವನ್ನು ಸಬಲೀಕರಣ ಮಾಡುವ ಯೋಜನೆಗಳನ್ನು ಪ್ರಕಟಿಸುವುದು ಸೂಕ್ತ ಎಂದರು.

ಚುನಾವಣಾ ರಾಜಕಾರಣಕ್ಕೆ ‘ನಂದಿನಿ’ ವರ್ಸಸ್‌ ‘ಅಮೂಲ್‌’ ವಿವಾದ ಸೃಷ್ಟಿ
ಇತ್ತೀಚೆಗೆ ‘ನಂದಿನಿ’ ವರ್ಸಸ್‌ ‘ಅಮೂಲ್‌’ ವಿವಾದವನ್ನು ಹುಟ್ಟು ಹಾಕಿದ್ದು ಚುನಾವಣಾ ರಾಜಕಾರಣಕ್ಕೆ. ಅಮೂಲ್‌ ಹಾಲು ಕರ್ನಾಟಕದಲ್ಲಿ ಕಾಲಿಡಲು ಅವಕಾಶ ನೀಡಿದ್ದೇ ಕಾಂಗ್ರೆಸ್‌ ಅವಧಿಯಲ್ಲಿ. ಈಗ ಅದೇ ವ್ಯಕ್ತಿ ಬಿಜೆಪಿ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಎಲ್ಲ ರಾಜ್ಯಗಳಲ್ಲೂ ಸಹಕಾರಿ ಹಾಲು ಒಕ್ಕೂಟಗಳು ಇವೆ. ಒಂದು ರಾಜ್ಯದ ಹಾಲು ಮತ್ತೊಂದು ರಾಜ್ಯಕ್ಕೆ ಹೋಗುತ್ತದೆ. ಕರ್ನಾಟಕದ ನಂದಿನಿ ಹಾಲು, ಮೊಸರು, ಪೇಡ ದೆಹಲಿಯಲ್ಲೂ ಸಿಗುತ್ತದೆ. ಅಲ್ಲಿ ನಂದಿನಿ ಸಿಗದಾಗ ಅಮೂಲ್‌ ಹಾಲು ಖರೀದಿಸುತ್ತೇವೆ. ನಂದಿನಿ ಹಾಲು ಬರದೇ ಇದ್ದರೆ, ಬೇರೆ ಹಾಲು ಖರೀದಿಸಲೇಬೇಕಾಗುತ್ತದೆ. ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ಮೊದಲ ಬಾರಿಗೆ ಪ್ರೋತ್ಸಾಹ ಧನ ನೀಡಿದ್ದು, ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ. ಆ ಬಳಿಕ ಬಂದ ಕಾಂಗ್ರೆಸ್‌ ಮತ್ತು ಜೆಡಿಎಸ್ ಸರ್ಕಾರಗಳೂ ಪ್ರೋತ್ಸಾಹ ಧನ ನೀಡುವುದನ್ನು ಮುಂದುವರಿಸಿದವು. ಕೇಂದ್ರ ಸರ್ಕಾರವೂ ಒಂದು ಹಸು ಸಾಕಿದ ಹಾಲು ಉತ್ಪಾಕನಿಗೂ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ನೀಡುವ ಮೂಲಕ ಡೇರಿ ಉದ್ಯಮಕ್ಕೆ ಪ್ರೋತ್ಸಾಹ ನೀಡಿದೆ. ಈ ಎಲ್ಲ ಕಾರಣಗಳಿಗೆ ವಿಶ್ವದಲ್ಲೇ ಭಾರತ ಎರಡನೇ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com