ಗದಗ: ಮಧ್ಯಾಹ್ನದ ಬಿಸಿಯೂಟದಲ್ಲಿ ಸಿಹಿತಿಂಡಿ, ಈ ಶಾಲೆಯಲ್ಲಿ ಶೇ.100 ರಷ್ಟು ಮಕ್ಕಳ ಹಾಜರಾತಿ!
ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಇದೊಂದು ಸಿಹಿ ಸುದ್ದಿಯಾಗಿದೆ. ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಧ್ಯಾಹ್ನದ ಬಿಸಿಯೂಟದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿನಿಸುಗಳನ್ನು ನೀಡಲಾಗುತ್ತಿದೆ. ಇದರ ಪರಿಣಾಮ ಹಾಜರಾತಿ ಶೇ. 100 ರಷ್ಟಾಗಿದೆ.
Published: 24th August 2023 11:40 AM | Last Updated: 24th August 2023 01:27 PM | A+A A-

ನರೇಗಲ್ ಸರ್ಕಾರಿ ಶಾಲೆ ವಿದ್ಯಾರ್ಥಿಗಳು
ಗದಗ: ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಇದೊಂದು ಸಿಹಿ ಸುದ್ದಿಯಾಗಿದೆ. ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮಧ್ಯಾಹ್ನದ ಬಿಸಿಯೂಟದಲ್ಲಿ ವಿದ್ಯಾರ್ಥಿಗಳಿಗೆ ಸಿಹಿ ತಿನಿಸುಗಳನ್ನು ನೀಡಲಾಗುತ್ತಿದೆ. ಇದರ ಪರಿಣಾಮ ಹಾಜರಾತಿ ಶೇ. 100 ರಷ್ಟಾಗಿದೆ.
ಪ್ರತಿದಿನ ಅನ್ನ ಮತ್ತು ಸಾಂಬಾರ್ ಹೊರತುಪಡಿಸಿ, ಗೋಧಿ ಪಾಯಸ, ಕಡಲೆ ಹೋಳಿಗೆ, ಲಡ್ಡು, ಹುಗ್ಗಿ, ಮೈಸೂರು ಪಾಕ್ ಮತ್ತು ಜಿಲೇಬಿಯನ್ನು ಒಳಗೊಂಡಿರುವ ಒಂದು ಸಿಹಿತಿಂಡಿ ಊಟದ ಭಾಗವಾಗಿದೆ. ಸಿಹಿತಿಂಡಿ ನೀಡಲು ದಿನವೊಂದಕ್ಕೆ 2,000 ರೂ. ವೆಚ್ಚ ತಗಲುತ್ತಿದ್ದು, ಸರಕಾರದ ಅನುದಾನ ವ್ಯಾಪ್ತಿಗೆ ಬರದ ಕಾರಣ ಪಟ್ಟಣದ ನಿವಾಸಿಗಳು ದೇಣಿಗೆ ನೀಡಿ ಖರ್ಚು ಭರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ದಾನಿಗಳಿಂದ ನಡೆಸಲ್ಪಡುತ್ತಿರುವ ಈ ಉಪಕ್ರಮಕ್ಕೆ ಶಾಲಾ ಸಮಿತಿಯು ಅಮೃತ್ ಭೋಜನ್ ಎಂದು ಹೆಸರಿಸಿದೆ. ಈ ತಿಂಗಳು ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಸಮಿತಿಗೆ ಈಗಾಗಲೇ ಜಮೆ ಮಾಡಲಾಗಿದೆ.
2021ರ ಶ್ರಾವಣ ಮಾಸದಲ್ಲಿ ಮೊದಲಿಗೆ ಹಾಜರಾತಿಯನ್ನು ಸುಧಾರಿಸುವ ಆಲೋಚನೆಯನ್ನು ಶಾಲಾ ಸಮಿತಿ ಮಾಡಿತ್ತು. ಅಮೃತ್ ಭೋಜನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ್ದರಿಂದ ಸಮಿತಿಯು ಅದನ್ನು ಮುಂದುವರೆಸಿತು. ಶಾಲೆಯಲ್ಲಿ 307 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 125 ಹುಡುಗರು ಮತ್ತು 182 ಹುಡುಗಿಯರಿದ್ದು, ಎಲ್ಲರೂ ಗೈರು ಹಾಜರಾಗದೆ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.
ಇದನ್ನೂ ಓದಿ: ಕ್ರೀಡೆ, ಕರಕುಶಲ ತರಬೇತಿ, 50 ವರ್ಷಗಳಿಂದ ನಿಸ್ವಾರ್ಥ ಸೇವೆ: ಕೊಳೆಗೇರಿಗಳಲ್ಲಿನ ವಿಶೇಷ ಚೇತನರ ಬಾಳಿಗೆ ಬೆಳಕು ಈ ಶಾಲೆ!
1ರಿಂದ 7ರವರೆಗೆ ತರಗತಿಗಳನ್ನು ಹೊಂದಿರುವ ಈ ಶಾಲೆಯಲ್ಲಿ ಸಿಹಿತಿಂಡಿಗಳಲ್ಲದೆ ಕ್ರೀಡೆ ಹಾಗೂ ನೈತಿಕ ತರಗತಿಗಳನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದಾರೆ. ಈ ಕುರಿತು ಮಾತನಾಡಿದ ನರೇಗಲ್ ನಿವಾಸಿ ಎಸ್. ಉದಯ್ ‘‘ಗುಣಮಟ್ಟದ ಶಿಕ್ಷಣಕ್ಕಾಗಿ ಪೈಪೋಟಿ ಇರುವುದರಿಂದ ಅನೇಕ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಿಗೆ ಹೋಗುತ್ತಿಲ್ಲ. ಮಧ್ಯಾಹ್ನದ ಊಟದಲ್ಲಿ ಸಿಹಿತಿಂಡಿ ನೀಡುವುದು ಉತ್ತಮ ಕ್ರಮವಾಗಿದ್ದು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಇತರ ಸರ್ಕಾರಿ ಶಾಲೆಗಳಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯ ಬಿ.ಬಿ.ಕುರಿ ಮಾತನಾಡಿ, ಅಮೃತ ಭೋಜನ ಹೊರತಾಗಿ ಉತ್ತಮ ಶಿಕ್ಷಣವನ್ನೂ ನೀಡುತ್ತಿದ್ದೇವೆ ಎಂದು ತಿಳಿಸಿದರು.