ಕಗ್ಗತ್ತಲಿನಲ್ಲಿ ಜೀವನ ನಡೆಸುತ್ತಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆಗೆ ಕೊನೆಗೂ ಸಿಕ್ತು ವಿದ್ಯುತ್ ಸೌಲಭ್ಯ, ಆದರೂ ನಿಂತಿಲ್ಲ ಹೋರಾಟ!
ಹನೂರು ತಾಲ್ಲೂಕಿನ ಗಿರಿಜನರ ಕುಗ್ರಾಮದಲ್ಲಿ ದಶಕಗಳಿಂದ ವಿದ್ಯುತ್ ಸೌಲಭ್ಯವಿಲ್ಲದೆ ಕಗ್ಗತ್ತಲಿನಲ್ಲಿ ಜೀವನ ನಡೆಸುತ್ತಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಾದಮ್ಮ ಅವರ ಹೋರಾಟಕ್ಕೆ ಕೊನೆಗೂ ಪ್ರತಿಫಲವನ್ನು ಸಿಕ್ಕಿದೆ.
Published: 08th February 2023 12:29 PM | Last Updated: 08th February 2023 07:38 PM | A+A A-

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಾದಮ್ಮ.
ಮೈಸೂರು: ಹನೂರು ತಾಲ್ಲೂಕಿನ ಗಿರಿಜನರ ಕುಗ್ರಾಮದಲ್ಲಿ ದಶಕಗಳಿಂದ ವಿದ್ಯುತ್ ಸೌಲಭ್ಯವಿಲ್ಲದೆ ಕಗ್ಗತ್ತಲಿನಲ್ಲಿ ಜೀವನ ನಡೆಸುತ್ತಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಾದಮ್ಮ ಅವರ ಹೋರಾಟಕ್ಕೆ ಕೊನೆಗೂ ಪ್ರತಿಫಲವನ್ನು ಸಿಕ್ಕಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಲ್ಲೂಕಿನ ಜೀರಿಗೆಗದ್ದೆಗೆ ಮೂಲಕ ಸೌಕರ್ಯ ಒದಗಿಸುವಂತೆ ಹಲವು ವರ್ಷಗಳಿಂದಲೂ ಪಂಚಾಯಿತಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಬಳಿ ಮಾದಮ್ಮ ಅವರು ಮನವಿ ಮಾಡಿಕೊಂಡಿದ್ದರು. ಈ ವಿಚಾರ ವಸತಿ ಸಚಿವ ವಿ.ಸೋಮಣ್ಣ ಅವರ ಗಮನಕ್ಕೆ ಬಂದಿತ್ತು. ಕೂಡಲೇ ಅವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ವಿದ್ಯುತ್ ಸಂಪರ್ಕ ಕಲ್ಪಿಸಲು ಹೆಚ್ಚುವರಿ ಕಂಬಗಳನ್ನು ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅಗತ್ಯಬಿದ್ದರೆ ವೆಚ್ಚ ಭರಿಸುವುದಾಗಿಯೂ ತಿಳಿಸಿದ್ದರು. ಸಚಿವರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಇದೀಗ ಗ್ರಾಮಕ್ಕೆ ವಿದ್ಯುತ್ ಸೌಲಭ್ಯನ್ನು ಕಲ್ಪಿಸುತ್ತಿದ್ದಾರೆ. ಮಾದಮ್ಮ ಅವರ ಮನೆಗೆ ವಿದ್ಯುತ್ ಸೇವೆಯನ್ನು ಒದಗಿಸಿದ್ದಾರೆ. ಕುಗ್ರಾಮದಲ್ಲಿ ಒಟ್ಟು 20 ಮನೆಗಳಿದ್ದು, 12 ಮನೆಗಳಿಗೆ ವಿದ್ಯುತ್ ಸೌಲಭ್ಯವನ್ನು ಅಧಿಕಾರಿಗಳು ನೀಡಿದ್ದಾರೆ. ಆದರೆ, ಇನ್ನುಳಿದ 8 ಮನೆಗಳಿಗೆ ಮಾತ್ರ ವಿದ್ಯತ್ ಸಂಪರ್ಕ ಪೂರ್ಣಪ್ರಮಾಣದಲ್ಲಿ ಆಗಿಲ್ಲ. ಹೀಗಾಗಿ ಮಾದಮ್ಮ ಅವರು ಮತ್ತೆ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆಂದು ತಿಳಿದುಬಂದಿದೆ.
ಮಾದಮ್ಮ ಅವರ ಪುತ್ರಿ ಮುತ್ತಮ್ಮ ಪೂಣೇಗೌಡ, ಅವರ ಸಂಬಂಧಿಕರಾದ ಮಾದಮ್ಮ ಶೋಭಾ, ಚಿಕ್ಕಮ್ಮ, ಸೋಮಣ್ಣ ಮತ್ತಿತರರಿಗೆ ಇನ್ನೂ ವಿದ್ಯುತ್ ಸೇವೆ ದೊರೆತಿಲ್ಲ ಎನ್ನಲಾಗಿದೆ. ಇದೀಗ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾದಮ್ಮ ಹೋರಾಟವನ್ನು ಮುಂದುವರೆಸಲು ನಿರ್ಧರಿಸಿದ್ದು, ಉಳಿದ ಮನೆಗಳಿಗೂ ವಿದ್ಯುತ್ ಸಂಪರ್ಕ ಒದಗಿಸುವಂತೆ ಎಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕಾಡಿಗೆ ಮಾರಕವಾದ 'ಲಂಟಾನ ಕಮರಾ' ಬಳಸಿ ಪೀಠೋಪಕರಣ ತಯಾರಿ, ಜೀವನೋಪಾಯವನ್ನೇ ಜೀವನಾಧಾರ ಮಾಡಿಕೊಂಡ ಬುಡಕಟ್ಟು ಕುಟುಂಬ!
ಎಲ್ಲಾ ಮನೆಗಳಿಗೆ ವಿದ್ಯುತ್ ಸರಬರಾಜು ಮಾಡಲು ಇನ್ನೂ ನಾಲ್ಕು ಕಂಬಗಳು ಮತ್ತು ತಂತಿಗಳು ಬೇಕಾಗುತ್ತವೆ. ಅದನ್ನು ಉನ್ನತ ಅಧಿಕಾರಿಗಳ ಆದೇಶದಿಂದ ಮಾತ್ರ ಮಾಡಬಹುದು ಎಂದು ಸ್ಥಳೀಯ ಎಂಜಿನಿಯರ್ ಹೇಳಿದ್ದಾರೆ.
ವಿದ್ಯುತ್ ಸಂಪರ್ಕ ಒದಗಿಸುವಲ್ಲಿ ತಾರತಮ್ಯಗಳು ನಡೆದಿದ್ದು, ಸಮಸ್ಯೆ ಸಂಪೂರ್ಣವಾಗಿ ಪರಿಹಾರಗೊಳ್ಳದ ಕಾರಣ ಕೊಳ್ಳೇಗಾಲದಲ್ಲಿ ಎಸ್ಕಾಂ ಅಧಿಕಾರಿಗಳನ್ನು ಭೇಟಿ ಮಾಡುವುದಾಗಿ ಮಾದಮ್ಮ ಅವರು ಹೇಳಿದ್ದಾರೆ.
ಅಧಿಕಾರಿಗಳ ಲೋಪಕ್ಕೆ ನನ್ನ ಅಜ್ಜಿಯನ್ನೇಕೆ ದೂಷಿಸಬೇಕು ಎಂದು ಮಾದಮ್ಮ ಅವರ ಮೊಮ್ಮಗ ಮಾಳಣ್ಣ ಅವರು ಹೇಳಿದ್ದಾರೆ.
ವಿದ್ಯುತ್ ಸಂಪರ್ಕ ಹೊರತು ಪಡಿಸಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ನೀಡುವ 5 ಲಕ್ಷ ನಗದು ಪುರಸ್ಕಾರವೂ ಸಿಗದಿರುವ ಬಗ್ಗೆ ಮಾದಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾತೆಗೆ ಹಣ ಬಂದಿದೆಯೇ ಎಂದು ಪರಿಶೀಲಿಸಲು ಆಗಾಗ್ಗೆ ನನ್ನನ್ನು ಬ್ಯಾಂಕ್'ಗೆ ಕಳುಹಿಸುತ್ತಿರುತ್ತಾರೆಂದು ಮಾದಮ್ಮ ಅವರ ಮೊಮ್ಮಗಳು ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುಲಿಂಗಯ್ಯ ಅವರು ಮಾತನಾಡಿ, ಈ ವಿಚಾರವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಮಾದಮ್ಮ ಅವರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.