ಬೆಂಗಳೂರು ನಗರದೊಳಗೆ ಟ್ರಾಕ್ಟರ್ ಸಂಚಾರ ನಿರ್ಬಂಧ ವಿರೋಧಿಸಿ ಚಾಲಕರು, ಮಾಲೀಕರ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದ ರಸ್ತೆಗಳಲ್ಲಿ ಟ್ರಾಕ್ಟರ್ ಸಂಚಾರ ನಿಷೇಧಿಸಿರುವ ಕ್ರಮವನ್ನು ಖಂಡಿಸಿ ಟ್ರಾಕ್ಟರ್ ಚಾಲಕರು ಮತ್ತು ಮಾಲೀಕರು ಬೃಹತ್ ಪ್ರತಿಭಟನೆ ನಡೆಸಿದರು.
ಟ್ರಾಕ್ಟರ್ ಪ್ರತಿಭಟನೆ
ಟ್ರಾಕ್ಟರ್ ಪ್ರತಿಭಟನೆ

ಬೆಂಗಳೂರು: ಬೆಂಗಳೂರು ನಗರದ ರಸ್ತೆಗಳಲ್ಲಿ ಟ್ರಾಕ್ಟರ್ ಸಂಚಾರ ನಿಷೇಧಿಸಿರುವ ಕ್ರಮವನ್ನು ಖಂಡಿಸಿ ಟ್ರಾಕ್ಟರ್ ಚಾಲಕರು ಮತ್ತು ಮಾಲೀಕರು ಬೃಹತ್ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಇಂತಹ ವಾಹನಗಳ ಸಂಚಾರವನ್ನು ನಿಷೇಧಿಸಿರುವ ಬೆಂಗಳೂರು ಟ್ರಾಫಿಕ್ ಪೊಲೀಸರ ಆದೇಶವನ್ನು ವಿರೋಧಿಸಿ ಸುಮಾರು 3,000 ಟ್ರ್ಯಾಕ್ಟರ್ ಮಾಲೀಕರು ಮತ್ತು ಕಾರ್ಮಿಕರು ಗುರುವಾರ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು. ನಗರದಲ್ಲಿ 35,000 ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿದ್ದು, ಈ ನಿರ್ಬಂಧದಿಂದ ಸುಮಾರು ಎರಡು ಲಕ್ಷ ಕಾರ್ಮಿಕರು ತೊಂದರೆಗೀಡಾಗಿದ್ದಾರೆ ಎಂದು ಟ್ರ್ಯಾಕ್ಟರ್ ಮಾಲೀಕರ ಸಂಘ ತಿಳಿಸಿದೆ. 

ಟ್ರಾಕ್ಟರ್‍ಗಳ ಸಮೇತ ಫ್ರೀಡಂ ಪಾರ್ಕ್‍ಗೆ ಆಗಮಿಸಿದ ನೂರಾರು ಟ್ರಾಕ್ಟರ್ ಚಾಲಕರು ಹಾಗೂ ಮಾಲೀಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸರ್ಕಾರದ ಈ ನಿರ್ಧಾರ ಖಂಡಿಸಿ ಕಳೆದ ರಾತ್ರಿಯೇ ರಾಜ್ಯದ ನಾನಾ ಮೂಲೆಗಳಿಂದ ನೂರಾರು ಟ್ರಾಕ್ಟರ್‍ಗಳು ನಗರ ಪ್ರವೇಶಿಸಲು ಮುಂದಾದವು . ಆದರೆ, ಪೊಲೀಸರು ಟ್ರಾಕ್ಟರ್‍ಗಳ ಪ್ರವೇಶಕ್ಕೆ ಅವಕಾಶ ನೀಡದ ಹಿನ್ನಲೆಯಲ್ಲಿ ಚಾಲಕರು ಸ್ಥಳದಲ್ಲೇ ಟ್ರಾಕ್ಟರ್ ನಿಲ್ಲಿಸಿ ರಸ್ತೆಯಲ್ಲೇ ಮಲಗಿ ಪ್ರತಿಭಟನೆ ನಡೆಸಿದರು. 

ಟ್ರಾಕ್ಟರ್ ಚಾಲಕರ ಪ್ರತಿಭಟನೆಯಿಂದ ಬೆಚ್ಚಿಬಿದ್ದ ಪೊಲೀಸರು ಕೊನೆಗೂ ಟ್ರಾಕ್ಟರ್‍ಗಳನ್ನು ಫ್ರೀಡಂ ಪಾರ್ಕ್‍ವರೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಲು ಅನುಮತಿ ನೀಡಬೇಕಾಯಿತು. ಕರ್ನಾಟಕ ಸೇನೆ ರಾಜ್ಯಧ್ಯಕ್ಷ ಬಸವರಾಜ್ ಪಡುಕೋಟಿ ನೇತೃತ್ವದಲ್ಲಿ ನೂರಾರು ಮಂದಿ ಇಂದು ಫ್ರೀಡಂಪಾರ್ಕ್ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ನಗರದ ರಸ್ತೆಗಳಲ್ಲಿ ಟ್ರಾಕ್ಟರ್ ಸಂಚಾರಕ್ಕೆ ನಿಷೇಧ ವಿಧಿಸಿದರೆ 40 ಸಾವಿರಕ್ಕೂ ಹೆಚ್ಚಿರುವ ಟ್ರಾಕ್ಟರ್‍ಗಳು, ಮಾಲೀಕರು, ಚಾಲಕರು ಹಾಗೂ ಕಟ್ಟಡ ಕಾರ್ಮಿಕರು ಬೀದಿಪಾಲಾಗಲಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು. ಟ್ರಾಕ್ಟರ್ ಚಾಲಕರ ಈ ಹೋರಾಟಕ್ಕೆ ಬಿಗ್‍ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ, ಹರೀಶ್ ಬೈರಪ್ಪ ಮತ್ತಿತರರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಸುಮಾರು ಒಂದು ತಿಂಗಳ ಹಿಂದೆ, ಸಂಚಾರ ಪೊಲೀಸರು ನಗರದಲ್ಲಿ ಟ್ರ್ಯಾಕ್ಟರ್‌ಗಳ ಸಂಚಾರವನ್ನು ನಿಷೇಧಿಸಿದರು. “ನಾವು ಕಸ ಸಂಗ್ರಹಣೆ, ಚರಂಡಿಗಳಿಂದ ಹೂಳು ಎತ್ತುವುದು ಮತ್ತು ಹಾಲೊ ಇಟ್ಟಿಗೆಗಳು, ಮರಳು, ಲೋಹದ ಸರಳುಗಳು ಮತ್ತು ಇತರ ನಿರ್ಮಾಣ ಸಾಮಗ್ರಿಗಳನ್ನು ಸ್ಥಳಾಂತರಿಸುವಲ್ಲಿ ತೊಡಗಿಸಿಕೊಂಡಿದ್ದೇವೆ. ಪೊಲೀಸರ ಕ್ರಮದಿಂದ ಟ್ರ್ಯಾಕ್ಟರ್ ಮಾಲೀಕರು ಮತ್ತು ಇದನ್ನು ಅವಲಂಬಿಸಿರುವ ಸುಮಾರು 2 ಲಕ್ಷ ಕಾರ್ಮಿಕರಿಗೆ ಏನಾಗುತ್ತದೆ? ಸಂಚಾರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂಬ ಕಾರಣಕ್ಕೆ ಸಂಚಾರ ಪೊಲೀಸರು ಟ್ರ್ಯಾಕ್ಟರ್‌ಗಳನ್ನು ನಿರ್ಬಂಧಿಸಿದ್ದಾರೆ’ ಎಂದು ಬೆಂಗಳೂರು ಟ್ರ್ಯಾಕ್ಟರ್ ಮಾಲೀಕರ ಸಂಘ, ಬೆಂಗಳೂರು ಕಟ್ಟಡ ಕಾರ್ಮಿಕರ ಸಂಘ ಹಾಗೂ ಇತರರ ಸಹಯೋಗದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ನಮ್ಮ ಕರ್ನಾಟಕ ಸೇನೆಯ ಅಧ್ಯಕ್ಷ ಬಸವರಾಜು ಪಡುಕೋಟೆ ಹೇಳಿದರು.

ಅಂತೆಯೇ “ನಾವು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿ ಮಾಡಿ ನಿಷೇಧವನ್ನು ಹಿಂಪಡೆಯಲು ಮನವಿ ಪತ್ರವನ್ನು ಸಲ್ಲಿಸಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಎಡಿಜಿಪಿ ಮತ್ತು ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಂ ಎ ಸಲೀಂ ಅವರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಟ್ರ್ಯಾಕ್ಟರ್ ಮಾಲೀಕರು ಇನ್ನೆರಡು ದಿನ ಕಾಯಲಿದ್ದು, ಸಂಚಾರ ಪೊಲೀಸರು ತಮ್ಮ ವಾಹನಗಳನ್ನು ನಗರದಲ್ಲಿ ಬಿಡದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com