2019-20ರಲ್ಲಿನ 182 ಕೋಟಿ ರೂ. ವೆಚ್ಚದ ಬಗ್ಗೆ ವಿವರ ನೀಡಲು ಇಲಾಖೆಗಳು ವಿಫಲ: ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯಲ್ಲಿ ಬಹಿರಂಗ

2019-20ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಂದ 182 ಕೋಟಿ ರೂ.ಗಳ ಅನುದಾನದ ಕಾಮಗಾರಿಗಳನ್ನು ನಡೆಸಲಾಗಿದ್ದು, ಈ ಪ್ರತಿಯೊಂದು ಕಾಮಗಾರಿಗೆ ಅಫಿಡವಿಟ್ ಸಲ್ಲಿಕೆ ಕಡ್ಡಾಯವಾಗಿದ್ದರೂ ವಿವರ ನೀಡುವಲ್ಲಿ ಹಲವು ಇಲಾಖೆಗಳು ವಿಫಲವಾಗಿವೆ ಮಾಹಿತಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯಲ್ಲಿ ಬಹಿರಂಗಗೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 2019-20ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಂದ 182 ಕೋಟಿ ರೂ.ಗಳ ಅನುದಾನದ ಕಾಮಗಾರಿಗಳನ್ನು ನಡೆಸಲಾಗಿದ್ದು, ಈ ಪ್ರತಿಯೊಂದು ಕಾಮಗಾರಿಗೆ ಅಫಿಡವಿಟ್ ಸಲ್ಲಿಕೆ ಕಡ್ಡಾಯವಾಗಿದ್ದರೂ ವಿವರ ನೀಡುವಲ್ಲಿ ಹಲವು ಇಲಾಖೆಗಳು ವಿಫಲವಾಗಿವೆ ಮಾಹಿತಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯಲ್ಲಿ ಬಹಿರಂಗಗೊಂಡಿದೆ.

ಕೃಷ್ಣ ಬೈರೇಗೌಡ ನೇತೃತ್ವದ 24 ಶಾಸಕರ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮಂಗಳವಾರ ತನ್ನ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿತು.

ಇದು ಪ್ರಸಕ್ತ ವಿಧಾನಸಭೆಯ 10ನೇ ಲೆಕ್ಕಪತ್ರ ಸಮಿತಿ ವರದಿಯಾಗಿದೆ. ಆರ್ಥಿಕ ಇಲಾಖೆಗೆ ಸಂಬಂಧಿಸಿದ ಭಾರತೀಯ ಲೆಕ್ಕಪರಿಶೋಧಕರ ವರದಿಯ ಕುರಿತು ಇದು ಅಧ್ಯಯನ ಮಾಡಿದೆ.

2019-20ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಂದ 182 ಕೋಟಿ ರೂ.ಗಳ ಅನುದಾನದ ಕಾಮಗಾರಿಗಳನ್ನು ನಡೆಸಲಾಗಿದ್ದು, ಈ ವರೆಗೂ 51 ಪ್ರಕರಣಗಳು ದಾಖಲಾಗಿವೆ. ಪ್ರತಿಯೊಂದು ಕಾಮಗಾರಿಗೆ ಅಫಿಡವಿಟ್ ಕಡ್ಡಾಯವಾಗಿದ್ದು, ಈ ಪ್ರಮಾಣ ಪತ್ರ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿದ್ದರೂ ಮಾಡಿಲ್ಲ

ಸರ್ಕಾರದಿಂದ ವಿವಿಧ ಇಲಾಖೆಗಳಿಗೆ ಬಿಡುಗಡೆಯಾದ ಅನುದಾನಗಳ ಬಗ್ಗೆ ಆರ್ಥಿಕ ಇಲಾಖೆಯು ಸರಿಯಾದ ಮೇಲ್ವಿಚಾರಣೆ ನಡೆಸಬೇಕು. ಈ ರೀತಿಯ ಮೇಲ್ವಿಚಾರಣೆ ನಡೆಸುವ ಹೊಣೆಯನ್ನು ಆರ್ಥಿಕ ಇಲಾಖೆಯ ಉನ್ನತಾಧಿಕಾರಿಗಳಿಗೆ ವಹಿಸಬೇಕು ಎಂದು ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.

ಸರ್ಕಾರದ ಅನುದಾನಗಳ ಬಗ್ಗೆ ಭಾರತೀಯ ಮಹಾಲೇಖಪಾಲರ ಕಚೇರಿಗೆ ಒದಗಿಸದೇ ಇದ್ದರೆ ಸಿಎಜಿ ವರದಿಗಳನ್ನು ಸಿದ್ಧಪಡಿಸಲು ತೊಂದರೆಯಾಗುತ್ತದೆ. ಅಷ್ಟೇ ಅಲ್ಲ, ಸಿಎಜಿ ವರದಿ ಗುರುತಿಸಿರುವುದನ್ನು ಉಸ್ತುವಾರಿ ಮಾಡಿ ಸದನಕ್ಕೆ ವರದಿ ನೀಡುವುದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಕಷ್ಟವಾಗುತ್ತದೆ ಎಂಬ ತಾತ್ಪರ್ಯ ಕೃಷ್ಣ ಬೈರೇಗೌಡ ಸಮಿತಿಯಿಂದ ಹೊರಹೊಮ್ಮಿದೆ.

2019ರಿಂದ 2020ರ ಅವಧಿಯಲ್ಲಿ 1,959 ಬಿಲ್​ಗಳಿಗೆ ಸಂಬಂಧಿಸಿದ 96.08 ಕೋಟಿ ರೂ ಮೊತ್ತದ ಲೆಕ್ಕ ಸಲ್ಲಿಸಲಿಲ್ಲ. ಇವುಗಳನ್ನು ಸಂಬಂಧಿಸಿದವರಿಗೆ ಕೊಡುವ ಮೂಲಕ ಅಧಿಕೃತ ತೀರುವಳಿಯನ್ನು ಮಾಡಿಲ್ಲ. ಇದರಿಂದ ಸರ್ಕಾರದ ಮೊತ್ತ ದುರ್ಬಳಕೆಯಾಗುವ ಸಂಭವ ಇದೆ. ಆದ್ದರಿಂದ ಇವುಗಳ ತೀರುವಳಿಗೆ ಸಂಬಂಧಪಟ್ಟ ಅಧಿಕಾರಿಗಳು ಮೊದಲ ಆದ್ಯತೆ ನೀಡಬೇಕು ಎಂದು ಸಮಿತಿಯು ಸರ್ಕಾರಕ್ಕೆ ಸಲಹೆ ನೀಡಿದೆ.

ಮುಂಗಡ ಪತ್ರದಲ್ಲಿ ನೀಡಲಾಗಿರುವ ಅನುದಾನಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಲು ಅಗತ್ಯವಾದ ಕ್ರಮಗಳನ್ನು ಇಲಾಖಾ ಮುಖ್ಯಸ್ಥರುಗಳು ತೆಗೆದುಕೊಳ್ಳಬೇಕು ಎಂದು ಸಮಿತಿ ಸಲಹೆ ನೀಡಿದೆ.

ಬೆಳೆಯುತ್ತಿರುವ ತಂತ್ರಜ್ಞಾನ ಬಳಸಿಕೊಂಡು ಮುಂಗಡ ಪತ್ರದಲ್ಲಿನ ಘೋಷಣೆಗಳ ನಿರ್ವಹಣೆಯಾಗುವಂತೆ ಸಂಬಂಧಿಸಿದ ಇಲಾಖಾ ಮುಖ್ಯಸ್ಥರು ನೋಡಿಕೊಳ್ಳಬೇಕು. ಹೆಚ್ಚುವರಿ ಅನುದಾನಗಳು, ಉಳಿತಾಯ ಇತ್ಯಾದಿ ವಿಷಯಗಳಲ್ಲಿ ವೈಫಲ್ಯಗಳಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದೆ.

2011 ರಿಂದ 2020ರವರೆಗಿನ ಅವಧಿಯ ಎಲ್ಲ ಸಿಎಜಿ ವರದಿಗಳ ಬಗ್ಗೆ ಸಮಿತಿ ವ್ಯಾಪಕ ಚರ್ಚೆ ನಡೆಸಿತು. ಈ ವರದಿಗಳಲ್ಲಿ ಗುರುತಿಸಿದ ಲೋಪಗಳು ಮರುಕಳಿಸದಂತೆ ಇಲಾಖೆಗಳ ಮಟ್ಟದಲ್ಲಿ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಲೆಕ್ಕಪತ್ರ ಸಮಿತಿ ಸೂಚಿಸಿದೆ. ಸರ್ಕಾರದ ಉದ್ದೇಶಗಳ ಯೋಜನೆಗಳು ಹಾಗೂ ಇವುಗಳಿಗಾಗಿ ಬಿಡುಗಡೆ ಮಾಡಲಾದ ಅನುದಾನಗಳನ್ನು ಅನೇಕ ಇಲಾಖೆಗಳು ನಿರ್ಲಕ್ಷ್ಯ ಮಾಡುತ್ತಿವೆ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ. ಸಿಎಜಿ ವರದಿಗಳು ಇದರ ಬಗ್ಗೆ ಗಮನಸೆಳೆದಿದ್ದು, ಆದ್ಯತೆ ಮೇಲೆ ಸರಿಪಡಿಸಿಕೊಳ್ಳಬೇಕು ಎಂದು ಹೇಳಿದೆ.

ಕಳೆದ ಹತ್ತು ವರ್ಷಗಳಲ್ಲಿ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕಕ್ಕೆ ಬಿಡುಗಡೆಯಾಗಿರುವ ಕೇಂದ್ರದ ಅನುದಾನ ಮೊತ್ತ ಕಡಿಮೆ ಎಂದು ವರದಿ ಗುರುತಿಸಿದೆ. ರಾಜ್ಯದ ವಿವಿಧ ಬಾಬ್ತುಗಳಿಗೆ ಕೇಂದ್ರ ಸರ್ಕಾರ ನೀಡಬೇಕಾಗಿದ್ದಷ್ಟು ಹಣ ಬಂದಿಲ್ಲ ಎಂದು ವರದಿಯಲ್ಲಿ ಸಮಿತಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com