ಬೆಂಗಳೂರು: ಡೆತ್ ನೋಟ್ ನಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಆರು ಮಂದಿಯ ಹೆಸರನ್ನು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದ ಉದ್ಯಮಿ ಪ್ರದೀಪ್ ಎಸ್ ಅವರ ಪ್ರಕರಣದ ತನಿಖೆ ನಡೆಸುತ್ತಿರುವ ರಾಮನಗರ ಪೊಲೀಸರು, ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿದ್ದು, ವೈದ್ಯರ ಹೇಳಿಕೆಯನ್ನು ಮಂಗಳವಾರ ದಾಖಲಿಸಿಕೊಂಡಿದ್ದಾರೆ.
ಆದರೆ, ಇದುವರೆಗೂ ಶಾಸಕರಿಗೆ ನೋಟಿಸ್ ಜಾರಿ ಮಾಡಿಲ್ಲ. ಮೃತ ವ್ಯಕ್ತಿ ನೀಡಿರುವ ಹೇಳಿಕೆ ನಿಜವೇ ಎಂದು ಖಚಿತಪಡಿಸಿಕೊಳ್ಳಲು ತನಿಖೆ ನಡೆಸಲಾಗುತ್ತಿದೆ. ನಾವು ಆರೋಪಿಗಳ ಬ್ಯಾಂಕ್ ವಿವಾರ ಮತ್ತು ಪಾಲುದಾರಿಕೆ ಪತ್ರವನ್ನು ಸಂಗ್ರಹಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಪೊಲೀಸರು ಗೋಪಿ ಕೆ, ಸೋಮಯ್ಯ, ಜಿ ರಮೇಶ್ ರೆಡ್ಡಿ ಮತ್ತು ರಾಘವ ಭಟ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇತರ ಆರೋಪಿಗಳ ಹೇಳಿಕೆ ಆಧರಿಸಿ ಶಾಸಕ ಲಿಂಬಾವಳಿ ಅವರನ್ನು ವಿಚಾರಣೆಗೆ ಕರೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ನಿನ್ನೆ ಚರ್ಮರೋಗ ತಜ್ಞ ಡಾ.ಜಿ.ಜಯರಾಮರೆಡ್ಡಿ ಅವರನ್ನು ವಿಚಾರಣೆಗೊಳಪಡಿಸಿದ್ದರು.
ಮೃತ ಪ್ರದೀಪ್ ತನ್ನ ಡೆತ್ ನೋಟ್ ನಲ್ಲಿ ವೈದ್ಯರ ಹೆಸರನ್ನು ಹೇಳಿಕೊಂಡಿದ್ದ. “ತನ್ನ ಸಹೋದರನಿಗೆ ಸೇರಿದ ಆಸ್ತಿಯ ಬಗ್ಗೆ ನ್ಯಾಯಾಲಯದಲ್ಲಿ ಸಿವಿಲ್ ಕೇಸ್ ದಾಖಲಿಸುವ ಮೂಲಕ ರೆಡ್ಡಿ ಕಿರುಕುಳ ನೀಡುತ್ತಿದ್ದ. ಆಸ್ತಿಯನ್ನು ಮಾರಾಟ ಮಾಡುವಂತೆಯೂ ಬೆದರಿಕೆ ಹಾಕುತ್ತಿದ್ದ ಎಂದು ಹೇಳಿಕೊಂಡಿರುವುದು ಕಂಡು ಬಂದಿತ್ತು.
ವಿಚಾರಣೆ ವೇಳೆ ವೈದ್ಯರು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದಾರೆ. ಅವರ ಹೇಳಿಕೆಯನ್ನು ದಾಖಲಿಸಿದ್ದೇವೆಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement