ವ್ಯಕ್ತಿಯ ಬ್ಯಾಗ್ ನಲ್ಲಿ ಗಾಂಜಾ ಇಟ್ಟು ಸುಲಿಗೆಗೆ ಯತ್ನ, ಇಬ್ಬರು ಬೆಂಗಳೂರು ಪೊಲೀಸರ ಅಮಾನತು!

ವ್ಯಕ್ತಿಯ ಬ್ಯಾಗ್ ನಲ್ಲಿ ಗಾಂಜಾ ಇಟ್ಟು ಸುಲಿಗೆಗೆ ಯತ್ನಿಸಿದ ಆರೋಪದ ಮೇರೆಗೆ ಬೆಂಗಳೂರಿನ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವ್ಯಕ್ತಿಯ ಬ್ಯಾಗ್ ನಲ್ಲಿ ಗಾಂಜಾ ಇಟ್ಟು ಸುಲಿಗೆಗೆ ಯತ್ನಿಸಿದ ಆರೋಪದ ಮೇರೆಗೆ ಬೆಂಗಳೂರಿನ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಬೆಂಗಳೂರಿನ ಎಚ್​ಎಸ್​ಆರ್ ಲೇಔಟ್​ನಲ್ಲಿ ಕಳೆದವಾರ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಪೊಲೀಸ್ ಇಲಾಖೆ ಇದೀಗ ಆರೋಪಿತ ಇಬ್ಬರು ಪೊಲೀಸರನ್ನು ಅಮಾನತು ಮಾಡಿದೆ. ಸೋಮವಾರ ಮುಂಜಾನೆ ಇಬ್ಬರನ್ನು ಅಮಾನತು ಮಾಡಲಾಗಿದ್ದು, ಇಬ್ಬರು ಕಾನ್ಸ್​ಟೆಬಲ್​ಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿರುವುದನ್ನು ಡಿಸಿಪಿ ಸಿ.ಕೆ.ಬಾಬಾ ದೃಢಪಡಿಸಿದ್ದಾರೆ.

‘ವಿಚಾರಣೆಯು ಮುಕ್ತಾಯಗೊಂಡಿದ್ದು, ವಿಚಾರಣಾಧಿಕಾರಿ ನೀಡಿದ ವರದಿ ಆಧರಿಸಿ ಶಿಸ್ತುಕ್ರಮ ಜರುಗಿಸಲಾಗಿದೆ. ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ’ ಎಂದು ಬಾಬಾ ಹೇಳಿದ್ದಾರೆ.

ಕಳೆದ ವಾರ ಈ ಸಂಬಂಧ ಸರಣಿ ಟ್ವೀಟ್ ಮಾಡಿದ್ದ ವೈಭವ್ ಪಾಟೀಲ್ ಎನ್ನುವವರು ಬೆಂಗಳೂರಿನ ಎಚ್​ಎಸ್​ಆರ್ ಲೇಔಟ್​ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯಿಂದ ಕಿರುಕುಳಕ್ಕೆ ಒಳಗಾಗಿದ್ದ ಬಗ್ಗೆ ನೋವಿನಿಂದ ಬರೆದುಕೊಂಡಿದ್ದರು. ಅನಗತ್ಯವಾಗಿ ನನ್ನನ್ನು ಮಾದಕ ವಸ್ತು ಕಾಯ್ದೆ ಪ್ರಕರಣಕ್ಕೆ ಸಿಲುಕಿಸಲಾಗುತ್ತಿದೆ ಎಂದು ಅವರು ದೂರಿದ್ದರು. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ನನ್ನ ಹೇಳಿಕೆ ದಾಖಲಿಸಿದೆ. ಇಬ್ಬರು ಪೊಲೀಸ್ ಕಾನ್ಸ್​ಟೆಬಲ್​ಗಳನ್ನು ಗುರುತಿಸಿದೆ. ನನ್ನ ಲಿಖಿತ ಮತ್ತು ಮೌಖಿಕ ಹೇಳಿಕೆಯನ್ನು ನೀಡಿದ್ದೇನೆ. ಶನಿವಾರವೂ ಪೊಲೀಸ್ ಠಾಣೆಗೆ ಭೇಟಿ ನೀಡಿ ನನ್ನ ಕಾಯಂ ವಿಳಾಸ ಮತ್ತಿತರ ವಿವರಗಳನ್ನು ಕೊಟ್ಟೆ ಎಂದು ವಿವರಿಸಿದ್ದರು.

ಏನಿದು ಘಟನೆ?
ಎಚ್​ಎಸ್​ಆರ್​ ಲೇಔಟ್​ನಲ್ಲಿ ರಾಪಿಡೊ ಬೈಕ್ ಟ್ಯಾಕ್ಸಿಯಲ್ಲಿ ಹೋಗುತ್ತಿದ್ದಾಗ ಪೊಲೀಸರು ನನ್ನನ್ನು ತಡೆದರು. ಅವರ ಪ್ರಶ್ನೆಗಳಿಗೆ ನಾನು ಉತ್ತರಿಸಿದೆ. ಓರ್ವ ಕಾನ್ಸ್​ಟೆಬಲ್ ನನ್ನ ಬ್ಯಾಗ್ ತಪಾಸಣೆ ಮಾಡಬೇಕೆಂದರು. ನಾನು ಕೊಟ್ಟೆ. ಮತ್ತೊಬ್ಬರು ನನ್ನ ಬಳಿಗೆ ಬಂದು ಎಲ್ಲಿ ಕೆಲಸ ಮಾಡುತ್ತೀ ಎಂದು ಪ್ರಶ್ನೆಗಳನ್ನು ಕೇಳಿದರು. ‘ನೀನು ಗಾಂಜಾ ಸೇದ್ತೀ ಅಲ್ವಾ’ ಎಂದು ಕೇಳಿದಾಗ ನಾನು ನಿರಾಕರಿಸಿದೆ.

ಅವರು ತಾವೇ ನನ್ನ ಬ್ಯಾಗ್​ನಲ್ಲಿ ಗಾಂಜಾ ಪೊಟ್ಟಣ ಇರಿಸಿ, ಅದನ್ನು ಬ್ಯಾಗ್​ನಿಂದ ಹೊರಗೆ ತೆಗೆದಂತೆ ನಾಟಕವಾಡಿದರು. ಗಾಂಜಾ ಸೇದುವುದಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು. ನನ್ನನ್ನು ಬಂಧಿಸುವ ನಾಟಕವಾಡಿ ನನ್ನ ಬಳಿಯಿದ್ದ ₹ 2,500 ಕಿತ್ತುಕೊಂಡರು. ಮನೆ ತಲುಪಲು ಕನಿಷ್ಠ ₹ 100 ಕೊಡಿ ಎಂದರೂ ಕೇಳಲಿಲ್ಲ. ನಾನು ಕೊನೆಗೆ ಊಬರ್ ಬುಕ್ ಮಾಡಿ ಮನೆ ಸೇರಿಕೊಂಡೆ. ನಂತರ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದೆ. ಪೊಲೀಸ್ ಅಧಿಕಾರಿ ನನ್ನನ್ನು ಗುರುತಿಸಿ, ನೆರವಾದರು. ನನ್ನ ಅಧಿಕೃತ ಹೇಳಿಕೆ ದಾಖಲಿಸಿದ ನಂತರ ಈ ಟ್ವೀಟ್​ಗಳನ್ನು ಡಿಲೀಟ್ ಮಾಡಿದೆ ಎಂದು ಪಾಟೀಲ್ ಟ್ವೀಟ್ ಮಾಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com