ಹಾಸನದಲ್ಲಿ ಭೀತಿ ಹುಟ್ಟಿಸಿದ ಚಿರತೆ: ಅರಣ್ಯ ಇಲಾಖೆ ವೈಫಲ್ಯದ ವಿರುದ್ಧ ಗ್ರಾಮಸ್ಥರು ಕಿಡಿ

ಇಲ್ಲಿ ಆನೆಗಳಷ್ಟೇ ಅಲ್ಲ, ಚಿರತೆಗಳೂ ಇಲ್ಲಿನ ಜನರಲ್ಲಿ ಭಯವನ್ನು ಹೆಚ್ಚಿಸಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ, ಚನ್ನರಾಯಪಟ್ಟಣ ಮತ್ತು ಅರಸೀಕೆರೆ ತಾಲೂಕಿನ ಗ್ರಾಮಗಳ ವಸತಿ ಪ್ರದೇಶಗಳಿಗೆ ಚಿರತೆಗಳು ನುಗ್ಗುತ್ತಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿವೆ. ಈ ಬೆಳವಣಿಗೆ ಜನರಲ್ಲಿನ ಆತಂಕವನ್ನು ಹೆಚ್ಚು ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹಾಸನ: ಇಲ್ಲಿ ಆನೆಗಳಷ್ಟೇ ಅಲ್ಲ, ಚಿರತೆಗಳೂ ಇಲ್ಲಿನ ಜನರಲ್ಲಿ ಭಯವನ್ನು ಹೆಚ್ಚಿಸಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ, ಚನ್ನರಾಯಪಟ್ಟಣ ಮತ್ತು ಅರಸೀಕೆರೆ ತಾಲೂಕಿನ ಗ್ರಾಮಗಳ ವಸತಿ ಪ್ರದೇಶಗಳಿಗೆ ಚಿರತೆಗಳು ನುಗ್ಗುತ್ತಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿವೆ. ಈ ಬೆಳವಣಿಗೆ ಜನರಲ್ಲಿನ ಆತಂಕವನ್ನು ಹೆಚ್ಚು ಮಾಡಿದೆ.

ರಾತ್ರಿ ವೇಳೆ ಆಹಾರ ಅರಸಿ ಚಿರತೆಗಳು ಗ್ರಾಮಗಳಿಗೆ ನುಗ್ಗುತ್ತಿವೆ. ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿ, ಹಾಸನ ತಾಲೂಕಿನ ಸಾಲಗಾಮೆ ಹೋಬಳಿ ಮತ್ತು ಹೊಳೆನರಸೀಪುರ ತಾಲೂಕಿನ ಹಳೇಕೋಟೆ ಹೋಬಳಿ ಚಿರತೆ ಪೀಡಿತ ಪ್ರದೇಶಗಳಾಗಿವೆ.

75 ಅಡಿ ಎತ್ತರದ ಗೋಮಟೇಶ್ವರನ ಏಕಶಿಲಾ ಪ್ರತಿಮೆಯನ್ನು ಸ್ಥಾಪಿಸಿರುವ ವಿಂಧ್ಯಗಿರಿ ಬೆಟ್ಟದ ದೇಗುಲವನ್ನು ಚಿರತೆ ಪೀಡಿತ ಪ್ರದೇಶವೆಂದು ಪರಿಗಣಿಸಲಾಗಿದ್ದು, ಚಿರತೆಗಳು ಆಗಾಗ್ಗೆ ಗ್ರಾಮಕ್ಕೆ ನುಗ್ಗಿ ಕರುಗಳು ಮತ್ತು ನಾಯಿಗಳ ಮೇಲೆ ದಾಳಿ ಮಾಡುವುದರಿಂದ ವಿಂದ್ಯಾಗಿರಿ ಕೆಳಭಾಗದಲ್ಲಿರುವ ನಾಗಯ್ಯನ ಕೊಪ್ಪಲು ಜನರು ಆತಂಕಕ್ಕೊಳಗಾಗಿದ್ದಾರೆ. ಹಗಲು ಹೊತ್ತಿನಲ್ಲಿಯೇ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ವಿಂಧ್ಯಗಿರಿಗೆ ಭೇಟಿ ನೀಡುವ ಪ್ರವಾಸಿಗರು ಆತಂಕ ಪಡುತ್ತಿದ್ದಾರೆ.

ಹಾಡಹಗಲಿನಲ್ಲಿಯೇ ಪ್ರತ್ಯಕ್ಷವಾಗುತ್ತಿರುವ ಚಿರತೆಗಳು ಕುರಿ, ಮೇಕೆ ಮತ್ತು ಬೀದಿನಾಯಿಗಳನ್ನು ಹೊತ್ತೊಯ್ಯುತ್ತಿವೆ. ತೋಟದ ಮನೆಗಳಲ್ಲಿ ದನದ ಕೊಟ್ಟಿಗೆಗಳಿಗೆ ನುಗ್ಗಿ ಕರುಗಳ ಮೇಲೆ ದಾಳಿ ಮಾಡುತ್ತವೆ.

ದೂರುಗಳ ಆಧಾರದ ಮೇಲೆ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಣಗಣಿಸಿರುವ ಅರಣ್ಯಾಧಿಕಾರಿಗಳು ಚಿರತೆಗಳ ಸೆರೆ ಹಿಡಿಯಲು ಹಲವೆಡೆ ಬೋನನ್ನು ಹಾಕಿದ್ದಾರೆ.

ಹೊಳೆನರಸೀಪುರ ಮತ್ತು ಅರಸೀಕೆರೆ ತಾಲೂಕಿನಲ್ಲಿ ಕಳೆದ ವರ್ಷ ಮೂರು ಬಾರಿ ರೈತರ ಮೇಲೆ ಚಿರತೆ ದಾಳಿ ನಡೆಸಿದ್ದ ಘಟನೆಗಳು ವರದಿಯಾಗಿದ್ದವು.

ಎರಡು ದಶಕಗಳಲ್ಲಿ ಚಿರತೆಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಜಿಲ್ಲೆಯ ವಿವಿಧ ಕಾಡುಗಳು ಮತ್ತು ಬೆಟ್ಟಗಳಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಚಿರತೆಗಳು ವಾಸಿಸುತ್ತವೆ. ಅರಣ್ಯ ಇಲಾಖೆ ಜಿಲ್ಲೆಯ ವಿವಿಧೆಡೆ ಸುಮಾರು ಮೂವತ್ತೈದು ಚಿರತೆಗಳನ್ನು ಸೆರೆಹಿಡಿದು ಬಿಸಲೆ ಅರಣ್ಯದಲ್ಲಿ ಬಿಚ್ಚಿದೆ ಎಂದು ಇಲಾಖೆ ತಿಳಿಸಿದೆ.

ಆರು ತಿಂಗಳ ಅವಧಿಯಲ್ಲಿ ಎರಡು ಕರುಗಳನ್ನು ಕಳೆದುಕೊಂಡ ರೈತ ಬಸವೇಗೌಡ ಅವರು ಮಾತನಾಡಿ, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿರತೆ ಹಾವಳಿಯನ್ನು ಎದುರಿಸಲು ಮತ್ತು ಕಾಡಿನೊಳಗೆ ಆಹಾರವನ್ನು ಒದಗಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಇಲಾಖೆಯು ಬೇರೆ ಬೇರೆ ಕಾರಣಗಳನ್ನು ಮುಂದಿಟ್ಟು ಪರಿಹಾರವನ್ನು ಸಕಾಲದಲ್ಲಿ ನೀಡುತ್ತಿಲ್ಲ. ಚಿರತೆ ಸೆರೆ ಹಿಡಿಯಲು ಇಲಾಖೆಗೆ ಬೋನುಗಳ ಕೊರತೆ ಇದೆ ಎಂದು ಹೇಳಿದ್ದಾರೆ.

ಹಂಗರಹಳ್ಳಿಯ ರೈತ ನಾಗರಾಜಯ್ಯ ಮಾತನಾಡಿ, ಚಿರತೆ ಕಾಟಕ್ಕೆ ರೈತರು ಹೆದರಿ ಗುಡ್ಡದ ಪಕ್ಕದ ಹೊಲಗಳಿಗೆ ಹೋಗುತ್ತಿಲ್ಲ ಎಂದು ತಿಳಿಸಿದ್ದಾರೆ.  

ಈ ಕುರಿತು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್ ಅವರು ಪ್ರತಿಕ್ರಿಯೆ ನೀಡಿ, ಚಿರತೆ ಹೆಚ್ಚಾಗಿ ಕಾಣಿಸಿಕೊಳ್ಳುವ ಪ್ರದೇಶಗಳಲ್ಲಿ ಬೋನುಗಳನ್ನು ಇರಿಸಲಾಗಿದೆ. ಮಾರ್ಗಸೂಚಿಗಳನ್ನು ಅನುಸರಿಸಿ ಚಿರತೆ ದಾಳಿಗೆ ಪರಿಹಾರವನ್ನು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com