social_icon

ಸೀತೆಯನ್ನು ಕಾಡಿಗೆ ಕಳಿಸಿದ, ಮರದ ಕೆಳಗೆ ತಪಸ್ಸಿಗೆ ಕುಳಿತಿದ್ದ ಶಂಬುಕನ ತಲೆ ಕಡಿದ ರಾಮ ಹೇಗೆ ಆದರ್ಶ ಪುರುಷ?: ಕೆ ಎಸ್ ಭಗವಾನ್

ನಿವೃತ್ತ ಪ್ರಾಧ್ಯಾಪಕ ಹಾಗೂ ನಾಡಿನ ಖ್ಯಾತ ಬರಹಗಾರ ಕೆ ಎಸ್ ಭಗವಾನ್ ಮತ್ತೊಮ್ಮೆ ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

Published: 22nd January 2023 12:56 PM  |   Last Updated: 23rd January 2023 03:26 PM   |  A+A-


K S Bhagavan

ಕೆ ಎಸ್ ಭಗವಾನ್

Posted By : Sumana Upadhyaya
Source : ANI

ಮಂಡ್ಯ: ನಿವೃತ್ತ ಪ್ರಾಧ್ಯಾಪಕ ಹಾಗೂ ನಾಡಿನ ಖ್ಯಾತ ಬರಹಗಾರ ಕೆ ಎಸ್ ಭಗವಾನ್ ಮತ್ತೊಮ್ಮೆ ಶ್ರೀರಾಮನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

ಮೊನ್ನೆ ಮಂಡ್ಯದ ಕೆ.ಆರ್.ಪೇಟೆ ಪಟ್ಟಣದ ಎಸ್.ಎಂ.ಲಿಂಗಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ವಿಶ್ರಾಂತ ಶಿಕ್ಷಕ ಎನ್.ಎಂ.ತಿಮ್ಮೇಗೌಡ ಅವರು ರಚಿಸಿರುವ ನಾಲ್ಕು ಆಂಗ್ಲ ಪುಸ್ತಕಗಳು ಹಾಗೂ ಮೂರು ಕನ್ನಡ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಶ್ರೀರಾಮಚಂದ್ರ ಆದರ್ಶ ವ್ಯಕ್ತಿಯಲ್ಲ, ಮರ್ಯಾದ ಪುರುಷೋತ್ತಮನೂ ಅಲ್ಲ, ಹಿಂದೂಗಳು ಪೂಜಿಸುವಂತಹ ದೇವರಂತೂ ಅಲ್ಲವೇ ಅಲ್ಲ. ಆತ ಒಬ್ಬ ಸಾಮಾನ್ಯ ಮನುಷ್ಯ, ತನ್ನ ಗರ್ಭಿಣಿ ಹೆಂಡತಿಯನ್ನೇ ನಿರ್ದಾಕ್ಷಿಣ್ಯವಾಗಿ 18 ವರ್ಷಗಳ ಕಾಲ ಕಾಡಿಗಟ್ಟಿದ ನಿರ್ದಯಿ ಎಂದಿದ್ದಾರೆ.

ಶ್ರೀರಾಮ ಆದರ್ಶ ಪುರುಷ ಅಲ್ಲ: ನಮಗೆ ರಾಮರಾಜ್ಯ ಬೇಕಾಗಿಲ್ಲ, ನಮಗೆ ಬೇಕಾಗಿರುವುದು ಸರ್ವಜನಾಂಗದ ಶಾಂತಿಯ ತೋಟದ ಸಂವಿಧಾನ ಪರಿಕಲ್ಪನೆಯ ರಾಜ್ಯ. ಎಂದಿರುವ ಭಗವಾನ್ ತಮ್ಮ ಮಾತಿನುದ್ದಕ್ಕೂ ಪುರೋಹಿತ ಶಾಹಿ ವ್ಯವಸ್ಥೆ ಹಾಗೂ ಶ್ರೀ ರಾಮಚಂದ್ರನ ಬಗ್ಗೆ ತೀಕ್ಷ್ಣವಾಗಿ ಹೇಳುತ್ತಾ, ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಮಂಡಿಸಿದರು.

ಪುರೋಹಿತ ಶಾಹಿ ವ್ಯವಸ್ಥೆಯಿಂದಾಗಿ ನಮ್ಮ ದೇಶ ಹಾಳಾಗಿ, ನೈತಿಕವಾಗಿ ಅಧ:ಪಥನದತ್ತ ಸಾಗುತ್ತಿದೆ. ನಮಗೆ ಈಗ ವಿಶ್ವಕ್ಕೆ ಶಾಂತಿಯ ಸಂದೇಶವನ್ನು ನೀಡಿ ಸಮಾನತೆಯ ಮಂತ್ರವನ್ನು ಕೊಡುಗೆಯಾಗಿ ನೀಡಿದ ಭಗವಾನ್‌ ಬುದ್ಧರ ತತ್ವ ಸಂದೇಶಗಳು ಬೇಕಾಗಿವೆ. ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಗಳು ತತ್ವ ಸಂದೇಶಗಳು ನಮಗೆ ದಾರಿದೀಪವಾಗಬೇಕು. ಕುವೆಂಪು ಅವರನ್ನು ಜಾತಿಯ ವ್ಯವಸ್ಥೆಯಲ್ಲಿ ಗುರುತಿಸದೇ ಅವರು ನಮಗೆ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ. ಹಾಗೂ ವಿಶ್ವಮಾನವ ಸಂದೇಶದ ಆಧಾರದ ಮೇಲೆ ಅವರೊಬ್ಬ ಶ್ರೇಷ್ಠ ಸಂತರೆಂದು ಗುರುತಿಸಿ ಗೌರವಿಸಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ಇದನ್ನೂ ಓದಿ: ಶಿವಮೊಗ್ಗ: ಸಾಹಿತಿ ಪ್ರೊ. ಭಗವಾನ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

ರಾಮನೊಬ್ಬ ಸಾಮಾನ್ಯ ಮನುಷ್ಯ ಇಂದು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೊಲೆಮಾಡಿದವನಿಗೂ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಲು ಅವಕಾಶವಿದೆ. ಆದರೆ ತನ್ನ ಪತ್ನಿಯಾದ ಸೀತಾದೇವಿಗೆ ಒಂದು ಮಾತನಾಡಲು ಅವಕಾಶ ನೀಡದೇ ನಿರ್ದಯವಾಗಿ ಕಾಡಿಗಟ್ಟಲಾಯಿತು. ಸೀತಾದೇವಿ ಗರ್ಭಿಣಿ ಎಂದೂ ಪರಿಗಣಿಸದೇ ಕಾಡಿಗಟ್ಟಿದ ಶ್ರೀರಾಮಚಂದ್ರ ಹೇಗೆ ದೇವರಾಗುತ್ತಾನೆ? ಅವನೊಬ್ಬ ಸಾಮಾನ್ಯ ಮನುಷ್ಯ. ನಾವು ಶ್ರೀರಾಮನ ಮಂತ್ರವನ್ನು ಪಠಿಸಿ, ದಾಸ್ಯವನ್ನು ಒಪ್ಪಿಕೊಳ್ಳುವ ಬದಲಿಗೆ ಶಾಂತಿಪುರುಷ ಭಗವಾನ್ ಬುದ್ಧರ ತತ್ವ ಸಂದೇಶಗಳನ್ನು ಪಾಲಿಸಿದರೆ ಸಾಕು. ಜಾತಿ, ಮತ, ಪಂಥಗಳಿಂದ ಮುಕ್ತವಾದ ಸಮಾನತೆಯ ಸಮಾಜವನ್ನು ಸುಲಭವಾಗಿ ಕಟ್ಟಬಹುದಾಗಿದೆ ಎಂದು ಹೇಳಿದರು. 

ಪ್ರತಿಯೊಬ್ಬರೂ ರಾಮರಾಜ್ಯ ಕಟ್ಟುವ ಬಗ್ಗೆ ಮಾತನಾಡುತ್ತಾರೆ. ವಾಲ್ಮೀಕಿ ರಾಮಾಯಣದ ಉತ್ತರಾ ಖಾಂಡವನ್ನು ಓದಿದರೆ ರಾಮ ಆದರ್ಶ ಪುರುಷ ಅಲ್ಲ ಎಂಬುದು ಗೊತ್ತಾಗುತ್ತದೆ. ಆತ 11 ಸಾವಿರ ವರ್ಷ ಆಳಲಿಲ್ಲ ಕೇವಲ 11 ವರ್ಷ ಮಾತ್ರ ಆಳಿದ್ದಾನೆ ಎಂದರು.

ರಾಮ ಮದ್ಯ ಸೇವಿಸುತ್ತಿದ್ದ: ಮಧ್ಯಾಹ್ನ ನಂತರ ರಾಮ ಸೀತೆಯ ಪಕ್ಕ ಕುಳಿತು ತನ್ನ ಇಡೀ ದಿನವನ್ನು ಕುಡಿಯುತ್ತಾ ಕಳೆಯುತ್ತಿದ್ದ. ಹೆಂಡತಿಯನ್ನು ಕಾಡಿಗೆ ಅಟ್ಟಿದ, ತಪಸ್ಸಿಗೆ ಕುಳಿತಿದ್ದ ಶಂಬುಕ ಎಂಬ ಶೂದ್ರನ ತಲೆ ಕತ್ತರಿಸಿದ, ಇಂತವನ್ನು ಆದರ್ಶ ಪುರುಷನೇ ಎಂದು ಕೆ ಎಸ್ ಭಗವಾನ್ ಕಠುವಾಗಿ ಟೀಕಿಸಿದ್ದಾರೆ.


Stay up to date on all the latest ರಾಜ್ಯ news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp