ಸರಿಯಾದ ಸಾಕ್ಷ್ಯಧಾರ ಇಲ್ಲದೆ ವೈದ್ಯರ ಬಂಧನ; ಮಾದಕ ದ್ರವ್ಯ ಪ್ರಕರಣ ಸಿಬಿಐಗೆ ವಹಿಸಲು ಒತ್ತಾಯ

ಮಾದಕ ದ್ರವ್ಯ ಸೇವನೆ ಮತ್ತು ಸಾಗಣೆ ಪ್ರಕರಣದಲ್ಲಿ ಮಂಗಳೂರಿನಲ್ಲಿ ಇತ್ತೀಚಿಗೆ  ಹಲವು ವೈದ್ಯರು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಆದರೆ, ಈ ಪ್ರಕರಣದಲ್ಲಿ ನೆಪಮಾತ್ರಕ್ಕೆ, ಅವೈಜ್ಞಾನಿಕ ಹಾಗೂ ಕಾನೂನು ಆಧಾರ ರಹಿತವಾಗಿ ತನಿಖೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಂಗಳೂರು: ಮಾದಕ ದ್ರವ್ಯ ಸೇವನೆ ಮತ್ತು ಸಾಗಣೆ ಪ್ರಕರಣದಲ್ಲಿ ಮಂಗಳೂರಿನಲ್ಲಿ ಇತ್ತೀಚಿಗೆ  ಹಲವು ವೈದ್ಯರು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಲಾಗಿತ್ತು. ಆದರೆ, ಈ ಪ್ರಕರಣದಲ್ಲಿ  ಅವೈಜ್ಞಾನಿಕ ಹಾಗೂ ಕಾನೂನು ಆಧಾರ ರಹಿತವಾಗಿ ತನಿಖೆ ನಡೆಸಲಾಗಿದೆ ಎಂದು ಆರೋಪಿಸಿರುವ ವಿಧಿ ವಿಜ್ಞಾನ ತಜ್ಞ ಡಾ. ಮಹಾಬಲ ಶೆಟ್ಟಿ ಮತ್ತು ಹಿರಿಯ ವಕೀಲ ಮನೋರಾಜ್ ರಾಜೀವ, ಹೈಕೋರ್ಟ್ ಮಧ್ಯ ಪ್ರವೇಶಿಸಬೇಕು ಮತ್ತು ಸಿಬಿಐ ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಮನವಿ ಮಾಡಿದ್ದಾರೆ. ಇಲ್ಲವಾದರೆ ತಾವು ಮನವಿ ಮಾಡಿರುವಂತೆ ಪ್ರಕರಣದ ತನಿಖೆಯಲ್ಲಿ ಮೇಲ್ವಿಚಾರಣೆ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ಮಾದಕ ವ್ಯಸನಿಗಳನ್ನು ಡ್ರಗ್ ಪೆಡ್ಲರ್‌ಗಳೆಂದು ಪರಿಗಣಿಸಲು ಲಭ್ಯವಿರುವ ಸಾಕ್ಷಿಗಳ ಬಗ್ಗೆ ಗಂಭೀರವಾದ ಅನುಮಾನವಿದೆ. ಮೇಲ್ನೋಟಕ್ಕೆ ಸಾಕಷ್ಟು ಸಾಕ್ಷಿ ಆಧಾರಗಳಿಲ್ಲ ಅನ್ನಿಸುತ್ತಿದ್ದು, ತನಿಖೆ ಕಳಪೆ, ಅವೈಜ್ಞಾನಿಕ ಮತ್ತು ಕಾನೂನು ಆಧಾರರಹಿತವಾಗಿದೆ ಎಂದು ಎಂದು ಶೆಟ್ಟಿ ಮತ್ತು ರಾಜೀವ  ಸುದ್ದಿಗೋಷ್ಛಿಯಲ್ಲಿ ತಿಳಿಸಿದರು. 

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆದುಕೊಂಡ ರೀತಿ ಎನ್‌ಡಿಪಿಎಸ್ ಕಾಯ್ದೆಗೆ ಬದ್ಧವಾಗಿಲ್ಲ ಮತ್ತು ಅವರು ನ್ಯಾಯಯುತವಾಗಿ ನಡೆದುಕೊಂಡಿಲ್ಲ ಎಂದು ಅವರು ಆರೋಪಿಸಿದರು.

“ಪ್ರಮುಖ ಆರೋಪಿಯನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಮತ್ತು ವೈದ್ಯರ ಬಳಿ ಯಾವುದೇ ಗಾಂಜಾ ಪತ್ತೆಯಾಗಿಲ್ಲ. ಅಂತಹ ಸಂದರ್ಭಗಳಲ್ಲಿ ಪೊಲೀಸರು ದೃಢೀಕರಣಕ್ಕಾಗಿ ಸಿಎಫ್ ಎಸ್ ಎಲ್, ಎಫ್ ಎಸ್ ಎಲ್ ಅಥವಾ ಆರ್ ಎಫ್ ಎಸ್ ಎಲ್ ಪರೀಕ್ಷೆ ನಡೆಸಬೇಕು.  ಆದರೆ ಅವರು ಕೇವಲ ವಿಶ್ವಾಸಾರ್ಹವಲ್ಲದ ತಪಾಸಣೆ ಪರೀಕ್ಷೆ ಆಧಾರದ ಮೇಲೆ ವೈದ್ಯಾಧಿಕಾರಿಗಳನ್ನು ಬಂಧಿಸಿದ್ದಾರೆ ಎಂದು ಶೆಟ್ಟಿ ರಾಜ್ಯದಲ್ಲಿನ ಡ್ರಗ್ಸ್ ತಪಾಸಣೆಯನ್ನು ಪರಿಚಯಿಸಿದರು. 

ಎನ್‌ಡಿಪಿಎಸ್ ಕಾಯ್ದೆಯ ಪ್ರಕಾರ, ಸ್ಕ್ರೀನಿಂಗ್ ಪರೀಕ್ಷೆಯು ಪಾಸಿಟಿವ್ ಆದ ಒಂದು ಗಂಟೆಯೊಳಗೆ ದೃಢೀಕರಣ ಪರೀಕ್ಷೆಯನ್ನು ಮಾಡಬೇಕು ಮತ್ತು ಎರಡನೇ ಪರೀಕ್ಷೆಯು ಪಾಸಿಟಿವ್ ಆಗಿದ್ದರೆ ಮಾತ್ರ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಜೈಲಿಗೆ ಕಳುಹಿಸಬಹುದು ಎಂದು ಹೇಳಿದ ಶೆಟ್ಟಿ,  ಈ ಪ್ರಕರಣದಲ್ಲಿ ವಿಶೇಷವಾಗಿ ಒಂದು ನಿರ್ದಿಷ್ಟ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಬಗ್ಗೆ ಪೊಲೀಸರು ಪ್ರತೀಕಾರದಿಂದ ವರ್ತಿಸಿದಂತೆ ತೋರುತ್ತಿದೆ ಎಂದು ಅವರು ಆರೋಪಿಸಿದರು.

2020 ರಲ್ಲಿ ಹೊರಡಿಸಲಾದ ಸಾಮಾಜಿಕ ನ್ಯಾಯ ಸಚಿವಾಲಯದ ನಿರ್ದೇಶನಗಳನ್ನು ಉಲ್ಲೇಖಿಸಿದ ಅವರು, ಮಾದಕ ವಸ್ತು ತೆಗೆದುಕೊಂಡವರು ಅಪರಾಧಿಗಳಲ್ಲ, ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕು ಎಂದು ಹೇಳಿದರು.

ಇದಲ್ಲದೆ, ಪ್ರಕರಣದಲ್ಲಿ ಆರೋಪಿಯಾಗಿರುವ ವೈದ್ಯರ ಛಾಯಾಚಿತ್ರಗಳನ್ನು ಪೊಲೀಸರು ಏಕೆ ಪ್ರಕಟಿಸಿದರು, ಅದೇ ರೀತಿಯ ಪ್ರಕರಣಗಳಲ್ಲಿ ದಾಖಲಾಗಿರುವ ಇತರರಿಗೆ ಆ ರೀತಿ ಏಕೆ ಮಾಡಿಲ್ಲ ಎಂದು ಅವರು ಕೇಳಿದರು. ಇದು ಮಾದಕ ವ್ಯಸನಿಗಳು ಮತ್ತು ಅವರ ಪೋಷಕರು ಮತ್ತು ಅವರ ಹತ್ತಿರದ ಮತ್ತು ಆತ್ಮೀಯ ಸಂಬಂಧಿಕರಿಗೆ ಆಘಾತವನ್ನು ಉಂಟುಮಾಡಿದೆ"ಎಂದು ಅವರು ಹೇಳಿದರು.

ಪೊಲೀಸರು ವಿದ್ಯಾರ್ಥಿಗಳನ್ನು ಬಂಧಿಸಿ ಆ ಮೂಲಕ ಅವರ ಭವಿಷ್ಯವನ್ನು ಪಣಕ್ಕಿಟ್ಟಿದ್ದಾರೆ. ಈ  ಬೆಳವಣಿಗೆಯಿಂದ ಮಂಗಳೂರು ಬ್ರ್ಯಾಂಡ್‌ಗೆ ತೀವ್ರ ಹಿನ್ನಡೆಯಾಗಿದೆ . ಮಂಗಳೂರು ಶೈಕ್ಷಣಿಕ ಕೇಂದ್ರ ಎಂಬ  ಇಮೇಜ್ ಹಾಳಾಗಿದ್ದು, ಗಂಭೀರ ಆರ್ಥಿಕ ಪರಿಣಾಮ ಉಂಟು ಮಾಡಬಹುದಾದರೂ ಜಿಲ್ಲೆಯ ಸಂಸದರು ಮತ್ತು ಶಾಸಕರು ಈ ವಿಷಯದಲ್ಲಿ ಏಕೆ ಮಧ್ಯಪ್ರವೇಶಿಸಲಿಲ್ಲ ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com