ಈ ವರ್ಷ ‘ಮಧ್ಯರಾತ್ರಿ ಬಜೆಟ್’ ಮಂಡಿಸುವುದಿಲ್ಲ: ಬಿಬಿಎಂಪಿ ಸ್ಪಷ್ಟನೆ

ಯಾವುದೇ ಕಾರಣಕ್ಕೂ ರಾತ್ರೋರಾತ್ರಿ ಬಿಬಿಎಂಪಿ ಬಜೆಟ್ ಮಂಡನೆ ಮಾಡುವುದಿಲ್ಲ. ಹಗಲು ಹೊತ್ತಿನಲ್ಲೇ, ಸೂರ್ಯ ಕಾಣುವ ಸಮಯದಲ್ಲೇ ಬಜೆಟ್ ಮಂಡನೆ ಮಾಡುತ್ತೇವೆಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಯಾವುದೇ ಕಾರಣಕ್ಕೂ ರಾತ್ರೋರಾತ್ರಿ ಬಿಬಿಎಂಪಿ ಬಜೆಟ್ ಮಂಡನೆ ಮಾಡುವುದಿಲ್ಲ. ಹಗಲು ಹೊತ್ತಿನಲ್ಲೇ, ಸೂರ್ಯ ಕಾಣುವ ಸಮಯದಲ್ಲೇ ಬಜೆಟ್ ಮಂಡನೆ ಮಾಡುತ್ತೇವೆಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ಎನ್‌ಜಿಒ, ಜನಾಗ್ರಹ ಸಹಯೋಗದಲ್ಲಿ ಬಿಬಿಎಂಪಿ ಆಯೋಜಿಸಿದ್ದ ‘ಮೈ ಸಿಟಿ ಮೈ ಬಜೆಟ್’ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸ್ಪಷ್ಟಪಡಿಸಿದರು.

2023-24ರ ಬಿಬಿಎಂಪಿ ಬಜೆಟ್ ನಲ್ಲಿ ಸೇರ್ಪಡೆಗೂಳಿಸಲು ನಗರದ 243 ವಾರ್ಡ್ ಗಳಿಂದ ಒಳಚರಂಡಿ, ಫುಟ್ ಪಾತ್, ರಸ್ತೆ, ಬೀದಿ ದೀಪ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು 16,261 ಸಲಹೆಗಳು ಸ್ವೀಕೃತಗೊಂಡಿದೆ. ಬಿಬಿಎಂಪಿ ವಾರ್ಷಿಕವಾಗಿ ನಗರದಾದ್ಯಂತ ನನ್ನ ನಗರ-ನನ್ನ ಬಜೆಟ್ ಅಭಿಯಾನವನ್ನು ಹಲವಾರು ಸಂಘ-ಸಂಸ್ಥೆಗಳು, ಕ್ಷೇಮಾಭಿವೃದ್ಧಿ ಸಂಘಗಳು, ಬೆಂಗಳೂರು ವಾರ್ಡ್ ಸಮಿತಿ ಬಳಗ ಹಾಗೂ ಜನಾಗ್ರಹ ಸಂಸ್ಥೆಯ ಬೆಂಬಲದೊಂದಿಗೆ ಕೈಗೊಂಡಿದ್ದ ನಾಗರಿಕ ಸಹಭಾಗಿತ್ವದ ಬಜೆಟ್ ಕುರಿತು ಅಭಿಪ್ರಾಯ ಸಂಗ್ರಹ ಮಾಡುವ ಪ್ರಕ್ರಿಯೆಯು ಮುಕ್ತಾಯಗೊಂಡಿದೆ ಎಂದು ಹೇಳಿದರು.

ನಗರದ ಎಂಟು ವಲಯಗಲ್ಲಿರುವ ಎಲ್ಲಾ 243 ವಾರ್ಡ್ ಗಳಿಂದ ನಾಗರಿಕ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಪೈಕಿ ಪಶ್ಚಿಮ ವಲಯ, ಪೂರ್ವ ವಲಯ, ದಕ್ಷಿಣ ವಲಯದ ವಾರ್ಡ್ ಗಳು ಒಳಗೊಂಡಂತೆ 141 ವಾರ್ಡ್ ಗಳಲ್ಲಿ ಶೇ.60ರಷ್ಟು ಹಾಗೂ ಉಳಿದ ವಾರ್ಡ್ ಗಳಲ್ಲಿ ಶೇ.40ರಷ್ಟು ಸಲಹೆಗಳು ಬಂದಿವೆ. ಪ್ರಮುಖವಾಗಿ ಪಾದಚಾರಿ ಮಾರ್ಗದ ದುರಸ್ತಿ ಮತ್ತು ನಿರ್ವಹಣೆ, ರಸ್ತೆ ಹಾಗೂ ಒಳಚರಂಡಿ ನಿರ್ವಹಣೆ, ರಸ್ತೆ, ದುರಸ್ತಿ, ಬೀದಿ ದೀಪಗಳನ್ನು ಅಳವಡಿಸುವುದು, ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಇನ್ನಿತರ ಸಲಹೆಗಳನ್ನು ನೀಡಿರುವ ಬಗ್ಗೆ ಜನಾಗ್ರಹ ಸಂಸ್ಥೆ ವರದಿ ನೀಡಿದೆ ಎಂದು ತಿಳಿಸಿದರು.

470 ಕಿ.ಮೀರಷ್ಟು ಹೊಸ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲು ಹಾಗೂ 950ಕಿಮೀ ಗಳಷ್ಟು ಅಸ್ತಿತ್ವದಲ್ಲಿರುವ ಪಾದಚಾರಿ ಮಾರ್ಗಗಳನ್ನು ಸರಿ ಮಾಡಲು ಬಯಸಿದ್ದಾರೆ. ಪರಿಸರ ಹಾಗೂ ಹವಾಮಾನ ಸಂರಕ್ಷಣೆಗೆ ಆದ್ಯತೆ ನೀಡಬೇಕು. ರಸ್ತೆ ಹಾಗೂ ವಾಹನ ಚಲನಶೀಲತೆಯನ್ನು ಉತ್ತಮಗೊಳಿಸಲು ಹಣಕಾಸು ಬಳಕೆ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. 2023-24ರ ಬಿಬಿಎಂಪಿ ಬಜೆಟ್ ನಲ್ಲಿ ನೀಡಲಾದ ಒಳಹರಿವುಗಳಿಗೆ ಸೂಕ್ತವಾದ ಹಂಚಿಕೆ ಸಂಭವಿಸಿದಾಗ ಮಾತ್ರ ಅದರ ಹರಿವಿನ ಪರಿಣಾಮ ವೀಕ್ಷಿಸಬಹುದು ಎಂದು ಸಲಹೆ ನೀಡಿದ್ದಾರೆಂದು ತಿಳಿಸಿದರು.

ಬಿಬಿಎಂಪಿಯ 2023-24ನೇ ಸಾಲಿನ ಬಜೆಟ್ ಸಿದ್ಧಪಡಿಸುವ ಕುರಿತು ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದ್ದು, ಫೆಬ್ರವರಿ 15ರ ನಂತರ ಸರ್ಕಾರಕ್ಕೆ ಬಜೆಟ್ ಮಂಡನೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮೂಲ ಸೌಕರ್ಯಗಳನ್ನು ಸುಧಾರಿಸಲು ನಾಗರಿಕರು ನೀಡಿದ ಸಲಹೆಗಳನ್ನು ಬಜೆಟ್‌ನಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಆಯುಕ್ತರು ಇದೇ ವೇಳೆ ಭರಸವೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com