74ನೇ ಗಣರಾಜ್ಯೋತ್ಸವ: ಧ್ವಜಾರೋಹಣ ನೆರವೇರಿಸಿ, ರಾಜ್ಯ ಸರ್ಕಾರದ ಸಾಧನೆಗಳ ಕೊಂಡಾಡಿದ ರಾಜ್ಯಪಾಲ ಗೆಹ್ಲೋಟ್‌

74ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್​​ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಧ್ವಜಾರೋಹಣ ನೆರವೇರಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು: 74ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್​​ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರು ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಜನತೆಯನ್ನುದ್ದೇಶಿಸಿ ಮಾತನಾಡಿದರು.

ಎಲ್ಲರಿಗೂ ನಮಸ್ಕಾರ’ ಎನ್ನುತ್ತಾ ಕನ್ನಡದಲ್ಲೇ ಭಾಷಣ ಆರಂಭಿಸಿದ ರಾಜ್ಯಪಾಲರು, ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.

ಬಳಿಕ ನಾವೆಲ್ಲರೂ ಸೇರಿ ಕರ್ನಾಟಕ ರಾಜ್ಯವನ್ನು ಸ್ವಸ್ಥ ಮತ್ತು ಸಮೃದ್ಧವಾಗಿಸೋಣ ಹಾಗೂ ದೇಶದ ಸಾರ್ವಭೌಮತ್ವ ಏಕತೆ ಮತ್ತು ಅಖಂಡತೆಯನ್ನು ಬಲಿಷ್ಠಗೊಳಿಸುವ ಸಂಕಲ್ಪ ಮಾಡೋಣ ಮತ್ತು ಈ ನಿಟ್ಟಿನಲ್ಲಿ ನಾವು ಮುಂದುವರಿಯೋಣ ಎಂದು ರಾಜ್ಯ ಜನತೆಗೆ ಕರೆ ನೀಡಿದರು.

ದೇಶದ ಪ್ರಗತಿಪರ ರಾಜ್ಯಗಳಲ್ಲಿ  ಕರ್ನಾಟಕವು ಒಂದಾಗಿದೆ. ರಾಜ್ಯದ ಸರ್ವಾಂಗೀಣ ನಿರಂತರ ಅಭಿವೃದ್ಧಿ ಉದ್ದೇಶದೊಂದಿಗೆ ಮೂಲಭೂತ ಸೇವೆಗಳನ್ನು ಒದಗಿಸಲು ವಿಭಿನ್ನ, ನವೀನ ಮತ್ತು ಸರ್ವರನ್ನು ಒಳಗೊಂಡ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನಾವು ಅಗ್ರಗಣ್ಯ ಸ್ಥಾನದಲ್ಲಿದ್ದೇವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಬಡವರು, ದಲಿತರು, ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಶ್ರಮವಹಿಸಲಾಗುತ್ತಿದೆ. ನವಭಾರತಕ್ಕಾಗಿ ನವ ಕರ್ನಾಟಕ ಧ್ಯೇಯದೊಂದಿಗೆ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ದೇಶದ ಸ್ವಾತಂತ್ರ್ಯ ಅಮೃತಮಹೋತ್ಸದಡಿ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಅಮೃತ ಶಾಲೆ ಯೋಜ‌ನೆ ಸೇರಿ 14 ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. 20-21 ನೇ ಸಾಲಿನ ಎಸ್'ಡಿಜಿ ಸೂಚ್ಯಂಕ ವರದಿಯಲ್ಲಿ 4 ನೇ ಸ್ಥಾನದಲ್ಲಿದೆ ಎಂದು ಹೇಳಿದರು.

ಆರೋಗ್ಯ ಕರ್ನಾಟಕ ಕಾರ್ಯಕ್ರಮದಿಂದ ಜನರಿಗೆ ಲಾಭವಾಗಿದೆ. ನಮ್ಮ ಕ್ಲಿನಿಕ್​, ಮಹಿಳಾ ಕಲ್ಯಾಣ ಕೇಂದ್ರ ಸ್ಥಾಪನೆಗೆ ಒತ್ತು ನೀಡಲಾಗುವುದು. ಈ ದಿನ ನಮ್ಮ ದೇಶದ ಅಭಿವೃದ್ಧಿಗಾಗಿ ಕಠಿಣ ಪರಿಶ್ರಮ ಪಡುತ್ತೇವೆಂಬ ನಮ್ಮ ಬದ್ಧತೆಯನ್ನು ಪುನರ್ ದೃಢೀಕರಿಸುವ ಸುಸಂದರ್ಭವಾಗಿದೆ. ವಿಶೇಷವಾಗಿ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮವು 75 ವರ್ಷಗಳ ಪ್ರಗತಿಪರ ಭಾರತ ಮತ್ತು ಇಲ್ಲಿನ ಜನರು, ಸಂಸ್ಕೃತಿ ಹಾಗೂ ಸಾಧನೆಗಳ ವೈಭವದ ಇತಿಹಾಸವನ್ನು ಸ್ಮರಿಸಲು ಮತ್ತು ಸಂಭ್ರಮಿಸಲು ಭಾರತ ಸರ್ಕಾರವು ಕೈಗೊಂಡಿರುವ ಒಂದು ಉಪಕ್ರಮವಾಗಿದೆ.

ರಾಜ್ಯದ ಸರ್ವಾಂಗೀಣ ನಿರಂತರ ಅಭಿವೃದ್ಧಿ ಉದ್ದೇಶದೊಂದಿಗೆ ಮೂಲಭೂತ ಸೇವೆಗಳನ್ನು ಒದಗಿಸಲು ವಿಭಿನ್ನ, ನವೀನ ಮತ್ತು ಸರ್ವರನ್ನೂ ಒಳಗೊಂಡ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನಾವು ಅಗ್ರಗಣ್ಯ ಸ್ಥಾನದಲ್ಲಿದ್ದೇವೆ ಎಂದು ಹೇಳಿದರು.

‘ನವಭಾರತಕ್ಕಾಗಿ ನವ ಕರ್ನಾಟಕ’ ಎಂಬ ಧೈಯದೊಂದಿಗೆ “ಆಜಾದಿ ಕಾ ಅಮೃತ್ ಮಹೋತ್ಸವ” ಕಾರ್ಯಕ್ರಮದಡಿ ರಾಜ್ಯದಲ್ಲಿ ಅಮೃತ ಶಾಲೆಗಳ ಯೋಜನೆ, ಅಮೃತ ಆರೋಗ್ಯ, ಮೂಲಸೌಕರ್ಯ ಉನ್ನತೀಕರಣ ಯೋಜನೆ, ಅಮೃತ ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆ, ಅಮೃತ ಸ್ವ-ಸಹಾಯ ಗುಂಪುಗಳ ಯೋಜನೆ, ಅಮೃತ ನವೋದ್ಯಮ ಯೋಜನೆ, ಅಮೃತ ಕ್ರೀಡಾ ದತ್ತು ಯೋಜನೆ ಇತ್ಯಾದಿಗಳನ್ನು ಒಳಗೊಂಡಂತೆ 14 ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ವಿವಿಧ ಹಂತಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ವಿವರಿಸಿದರು.

2020-21ರ ಎಸ್‌ಡಿಜಿ ಸೂಚ್ಯಾಂಕ ವರದಿಯ ಪ್ರಕಾರ ಕರ್ನಾಟಕ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯಾದ್ಯಂತ ಇರುವ ಸಣ್ಣ, ಅತಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಹಿಡುವಳಿದಾರರನ್ನು ಗುರುತಿಸಲು 01/10/2022 ರಿಂದ 11 ನೇ ಕೃಷಿ ಗಣತಿಯ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೂ. 6478.76 ಕೋಟಿ ವೆಚ್ಚ ಮಾಡಲಾಗಿದ್ದು, 2022ನೇ ವರ್ಷದ ಜನವರಿ ತಿಂಗಳಿನಿಂದ ಡಿಸೆಂಬರ್ ಅಂತ್ಯದವರೆಗೆ ಒಟ್ಟು 13.47 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆ ಮಾಡಿ, 29.03 ಲಕ್ಷ ಕುಟುಂಬಗಳ 52.71 ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗಿದೆ. ಒಟ್ಟು ರೂ.4110 ಕೋಟಿಗಳ ಕೂಲಿ ಮೊತ್ತವನ್ನು ಕೂಲಿಕಾರರ ಖಾತೆಗಳಿಗೆ ನೇರವಾಗಿ ಪಾವತಿಸಲಾಗಿದೆ. ಡಿಸೆಂಬರ್ 2022 ರ ಅಂತ್ಯದವರೆಗೆ ರೂ.2314.34 ಕೋಟಿ ವೆಚ್ಚದಲ್ಲಿ 13.35 ಲಕ್ಷ ಮನೆಗಳಿಗೆ ಸಕ್ರಿಯ ನಲ್ಲಿ ಸಂಪರ್ಕಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

2022-23ನೇ ಸಾಲಿಗೆ ಒಟ್ಟು 20.19 ಲಕ್ಷ ರೈತರಿಗೆ ಕೃಷಿ ಸಾಲ ಯೋಜನೆಯಡಿಯಲ್ಲಿ 15,066 ಕೋಟಿಗಳಷ್ಟು ಬೆಳೆ ಸಾಲವನ್ನು ಡಿಸೆಂಬರ್ 2022ರ ಅಂತ್ಯದವರೆಗೆ ನೀಡಲಾಗಿದೆ. ಅಗ್ರಿಕಲ್ಚರ್ ಟುಡೇ ಮ್ಯಾಗಜಿನ್ ತನ್ನ 13ನೇ ಕೃಷಿ ನಾಯಕ ಸಮಾವೇಶ ಮತ್ತು ಪ್ರಶಸ್ತಿ ಕಾರ್ಯಕ್ರಮ- 2022 ರಲ್ಲಿ ತೋಟಗಾರಿಕೆ ಅಭಿವೃದ್ಧಿ ಮತ್ತು ಉತ್ಪನ್ನಗಳ ಪ್ರೋತ್ಸಾಹಕ್ಕಾಗಿ ಕರ್ನಾಟಕ ರಾಜ್ಯವನ್ನು “ಉತ್ತಮ ತೋಟಗಾರಿಕಾ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಿದೆ. ತೋಟಗಾರಿಕಾ ಇಲಾಖೆಯು 4,663 ಹೆಕ್ಟೇರ್ ಪ್ರದೇಶವನ್ನು ಆಧುನಿಕ ಕೃಷಿ ಪದ್ಧತಿಗೆ ಒಳಪಡಿಸಿದೆ. 26.21 ಲಕ್ಷ ಹೆಕ್ಟೇರ್ ಗಳನ್ನು ತೋಟಗಾರಿಕಾ ನೀರಾವರಿಗೆ ಒಳಪಡಿಸಿದ್ದು, ಅದರಲ್ಲಿ 953 ಹೆಕ್ಟೇರ್ ಪುದೇಶವು ಗ್ರೀನ್ ಹೌಸ್ , ಪಾಲಿ ಹೌಸ್​ಗೆ ಒಳಪಡಿಸಿದೆ. ರೈತ ಸಮುದಾಯಕ್ಕೆ 60 ಲಕ್ಷ ಉತ್ಕೃಷ್ಟ ಮೊಳಕೆ ಸಸಿಗಳನ್ನು, 400 ಟನ್ ಜೈವಿಕ ಗೊಬ್ಬರ ಮತ್ತು 23,000 ಲೀ. ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಂ ಅನ್ನು ಒದಗಿಸಲಾಗಿದೆ ಎಂದು ವಿವರಿಸಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆ – ಸರ್ವರಿಗೂ ಸೂರು ಯೋಜನೆಯಡಿಯಲ್ಲಿ ರೂ.2804.01 ಕೋಟಿಗಳ ವೆಚ್ಚದಲ್ಲಿ 44,452 ಮನೆಗಳನ್ನು ಪೂರ್ಣಗೊಳಿಸಿದೆ. ನನ್ನ ಸರ್ಕಾರವು ಸರ್ಕಾರಿ ಮಾಲೀಕತ್ವದಲ್ಲಿ ಇರುವ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ 3.36 ಲಕ್ಷ ಕುಟುಂಬಗಳಿಗೆ ಭೂ ಮಾಲೀಕತ್ವದ ಹಕ್ಕುಪತ್ರ ನೀಡುವ ಐತಿಹಾಸಿಕ ನಿರ್ಣಯ ಕೈಗೊಂಡಿದ್ದು, ಇಲ್ಲಿಯವರೆಗೆ ಈ ಕೊಳಗೇರಿ ಪ್ರದೇಶಗಳಲ್ಲಿ ಸಮೀಕ್ಷೆ ಕೈಗೊಂಡು ಇದುವರೆಗೂ 1,14,604 ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಸಮಾಜದ ದುರ್ಬಲ ವರ್ಗದ ಮಕ್ಕಳಿಗೆ ಸಹಾಯ ಮಾಡುವ ಸಲುವಾಗಿ ಸರ್ಕಾರ ರೈತ ವಿದ್ಯಾನಿಧಿ ಯೋಜನೆ ಪ್ರಾರಂಭಿಸಿದೆ.

ಇದುವರೆಗೆ ಒಟ್ಟು ರೂ.483.62 ಕೋಟಿ ರೂ.ಗಳ ವಿದ್ಯಾರ್ಥಿ ವೇತನವನ್ನು ರೈತರ ಮಕ್ಕಳಿಗೆ ವಿತರಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಫಲಾನುಭವಿಗಳನ್ನು ಒಳಗೊಂಡಿರುವ ಮೀನುಗಾರರು, ನೇಕಾರರು, ಕೃಷಿ ಕಾರ್ಮಿಕರು, ಟ್ಯಾಕ್ಸಿ ಚಾಲಕರು ಮುಂತಾದ ವಿವಿಧ ವರ್ಗಗಳಿಗೆ ಯೋಜನೆಯನ್ನು ವಿಸ್ತರಿಸಲಾಗಿದೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ 8101 ಹೆಚ್ಚುವರಿ ತರಗತಿ ಕೊಠಡಿಗಳ ನಿರ್ಮಾಣ ಮತ್ತು 978 ಅಂಗನವಾಡಿ ಕೇಂದ್ರಗಳ ನಿರ್ಮಾಣಕ್ಕಾಗಿ ಅನುದಾನವನ್ನು ನೀಡಲಾಗಿದೆ. ಸರ್ಕಾರವು 4244 ಹೊಸ ಅಂಗನವಾಡಿ ಕೇಂದ್ರ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com