ಉತ್ಪನ್ನ ಮಾರಾಟ ಲಾಭದ ಆಮಿಷ: ಇ–ಬಯೋಟೋರಿಯಂ ನೆಟ್‌ವರ್ಕ್ ಕಂಪನಿ ವಿರುದ್ಧ ಎಫ್ಐಆರ್‌, ನಾಲ್ವರ ಬಂಧನ

ಉತ್ಪನ್ನ ಮಾರಾಟ ಲಾಭದ ಆಮಿಷವೊಡ್ಡಿ ವಂಚನೆ ಮಾಡಿದ ಆರೋಪದ ಮೇರೆಗೆ ಬೆಂಗಳೂರು ಮೂಲದ ಇ–ಬಯೋಟೋರಿಯಂ ನೆಟ್‌ವರ್ಕ್ ಕಂಪನಿ ವಿರುದ್ಧ ಎಫ್ಐಆರ್‌ ದಾಖಲಾಗಿದ್ದು, ಸಂಸ್ಥೆಯ ನಾಲ್ತು ಮಂದಿಯನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಉತ್ಪನ್ನ ಮಾರಾಟ ಲಾಭದ ಆಮಿಷವೊಡ್ಡಿ ವಂಚನೆ ಮಾಡಿದ ಆರೋಪದ ಮೇರೆಗೆ ಬೆಂಗಳೂರು ಮೂಲದ ಇ–ಬಯೋಟೋರಿಯಂ ನೆಟ್‌ವರ್ಕ್ ಕಂಪನಿ ವಿರುದ್ಧ ಎಫ್ಐಆರ್‌ ದಾಖಲಾಗಿದ್ದು, ಸಂಸ್ಥೆಯ ನಾಲ್ತು ಮಂದಿಯನ್ನು ಬಂಧಿಸಲಾಗಿದೆ.

ಬಯೋ ಮ್ಯಾಗ್ನೆಟಿಕ್ ಉತ್ಪನ್ನಗಳನ್ನು ಮಾರಿದರೆ ಕಮಿಷನ್ ಲೆಕ್ಕದಲ್ಲಿ ಉತ್ತಮ ಲಾಭ ನೀಡುವುದಾಗಿ ಹೇಳಿ ವಂಚಿಸುತ್ತಿದ್ದ ಆರೋಪದಡಿ ‘ಇ–ಬಯೋಟೋರಿಯಂ ನೆಟ್‌ವರ್ಕ್’ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದ್ದು, ನಾಲ್ವರು ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಂಪನಿಯ ನಿರ್ದೇಶಕ ಮಧ್ಯಪ್ರದೇಶದ ಸುನೀಲ್ ಜೋಶಿ (58), ವಿತರಕರಾದ ಗೋವಾದ ಪ್ರಮೋದ್ ಗೋಪಿನಾಥ್ (51), ಬೆಂಗಳೂರು ಸುಭಾಷ್‌ನಗರದ ಶೇಖ್ ಸಾದಿಕ್ ಅಲಿ (32) ಮತ್ತು ಎನ್‌. ಯೋಗೇಶ್ (44)ರನ್ನು ಬಂಧಿಸಲಾಗಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ವಲಯ ಡಿಸಿಪಿ ಆರ್ ಶ್ರೀನಿವಾಸ್ ಗೌಡ ಅವರು, ಇ– ಬಯೋಟೋರಿಯಂ ನೆಟ್‌ವರ್ಕ್ ಕಂಪನಿ ವತಿಯಿಂದ ಅಂಬೇಡ್ಕರ್‌ ಭವನದಲ್ಲಿ ಜ. 15ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. 100ಕ್ಕೂ ಹೆಚ್ಚು ಜನರು ಸೇರಿದ್ದರು. ಮಾನವನ ಆರೋಗ್ಯಕ್ಕೆ ಸಂಬಂಧಿಸಿದ ಬಯೋ ಮ್ಯಾಗ್ನೆಟಿಕ್ ಉತ್ಪನ್ನಗಳನ್ನು ಚೈನ್ ಲಿಂಕ್‌ ಮೂಲಕ ಮಾರಿದರೆ ಹೆಚ್ಚು ಲಾಭ ನೀಡುವುದಾಗಿ ಆರೋಪಿಗಳು ಹೇಳುತ್ತಿದ್ದರು. ವಸ್ತುಗಳನ್ನು ಖರೀದಿಸಲು ಪ್ರಚೋದಿಸುತ್ತಿದ್ದರು. ಕಾರ್ಯಕ್ರಮದ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದರು. ವಂಚನೆ ಉದ್ದೇಶದಿಂದ ಕಾರ್ಯಕ್ರಮ ಸಂಘಟಿಸಿರುವುದು ಗೊತ್ತಾಯಿತು. ಬಳಿಕ, ನಾಲ್ವರೂ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ಆರೋಪಿಗಳು ಜನರನ್ನು ವಂಚಿಸುತ್ತಿದ್ದ ಬಗ್ಗೆ ಪುರಾವೆಗಳು ಲಭ್ಯವಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ ಎಂದು ಹೇಳಿದರು.

ಇ– ಬಯೋಟೋರಿಯಂ ನೆಟ್‌ವರ್ಕ್ ಕಂಪನಿಯ ಪ್ರಧಾನ ಕಚೇರಿ ಮುಂಬೈನಲ್ಲಿದೆ. ಟೆಕ್ಸ್‌ಟೈಲ್ಸ್‌ ಹೆಸರಿನಲ್ಲಿ ಅಕ್ರಮವಾಗಿ ಬಯೋ ಮ್ಯಾಗ್ನೆಟಿಕ್ ಉತ್ಪನ್ನಗಳನ್ನು ಕಂಪನಿಯಿಂದ ಮಾರಲಾಗುತ್ತಿತ್ತು. ಬಯೋ ಮ್ಯಾಗ್ನೆಟಿಕ್ ಬ್ರೇಸ್‌ಲೆಟ್ (ಒಂದಕ್ಕೆ 8,800 ರೂ), ನಿದ್ದೆ ವೇಳೆ ಗೊರಕೆ ತಪ್ಪಿಸುವ ಪಟ್ಟಿ (ಒಂದಕ್ಕೆ 5,760 ರೂ) ದಿಂಬು (ಒಂದಕ್ಕೆ 7,400ರಿಂದ 19,080 ರೂ) ಹಾಗೂ ನೀರಿನ ಬಾಟಲಿ ಹೊದಿಕೆ (ಒಂದಕ್ಕೆ 5,100 ರೂ) ಉತ್ಪನ್ನಗಳನ್ನು ಕಂಪನಿಯವರು ಬಿಡುಗಡೆ ಮಾಡಿದ್ದರು. ಯಾವುದಾದರೊಂದು ಉತ್ಪನ್ನ ಖರೀದಿಸುವ ವ್ಯಕ್ತಿ, ತನ್ನಿಂದ ಮೂರು ಜನರಿಗೆ ಉತ್ಪನ್ನಗಳನ್ನು ಮಾರಿದರೆ ಲಾಭ ನೀಡುವುದಾಗಿ ಕಂಪನಿ ಹೇಳಿತ್ತು. ಇದನ್ನು ನಂಬಿದ್ದ 2 ಸಾವಿರ ಮಂದಿ ಕಂಪನಿ ಸೇರಿದ್ದರು. ಇತ್ತೀಚಿನ ದಿನಗಳಲ್ಲಿ ಜನರಿಗೆ ಲಾಭ ನೀಡದೇ ಕಂಪನಿ ವಂಚಿಸಿರುವ ಬಗ್ಗೆ ಮಾಹಿತಿ ಇದೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com