ಬೆಂಗಳೂರು: ಕೈ ಕಾಲು, ರುಂಡವಿಲ್ಲದ ಮಹಿಳೆ ಶವ ಪತ್ತೆ; ಬೆಚ್ಚಿಬಿದ್ದ ಸ್ಥಳೀಯರು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೈ ಕಾಲುಗಳು ಹಾಗೂ ರುಂಡವಿಲ್ಲದ 52 ವರ್ಷದ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ದೃಶ್ಯಗಳನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಗೀತಾ
ಗೀತಾ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೈ ಕಾಲುಗಳು ಹಾಗೂ ರುಂಡವಿಲ್ಲದ 52 ವರ್ಷದ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ದೃಶ್ಯಗಳನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ನಗರದ ಹೊರವಲಯದ ಬನ್ನೇರುಘಟ್ಟದಲ್ಲಿ ಈ ಘಟನೆ ನಡೆದಿದ್ದು, ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಕೊಲೆಯ ಹಿಂದಿನ ಉದ್ದೇಶವನ್ನು ತಿಳಿಯಲು ತನಿಖೆ ನಡೆಸುತ್ತಿದ್ದಾರೆ.

ಮೃತರನ್ನು ಬನ್ನೇರುಘಟ್ಟದ ಜನತಾ ಕಾಲೋನಿ ನಿವಾಸಿ ಗೀತಾ ಎಂದು ಗುರುತಿಸಲಾಗಿದ್ದು, ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆರು ವರ್ಷಗಳ ಹಿಂದೆ ಪತಿ ತೀರಿಕೊಂಡ ನಂತರ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾದ ನಂತರ ಅವರು ಒಂಟಿಯಾಗಿ ವಾಸಿಸುತ್ತಿದ್ದರು.

ಕಳೆದ ನಾಲ್ಕು ದಿನಗಳಿಂದ ಗೀತಾ ತನ್ನ ಮಗಳ ಫೋನ್ ಕರೆಗಳಿಗೆ ಉತ್ತರಿಸಿಲ್ಲ. ಹೀಗಾಗಿ ಅವರು ಬುಧವಾರ ರಾತ್ರಿ ತಾಯಿಯನ್ನು ನೋಡಲು ಮನೆಗೆ ಬಂದಿದ್ದಾರೆ. ಆದರೆ ಮನೆಗೆ ಬೀಗ ಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ ಆಕೆಯ ಮನೆಯ ಮುಂದಿನ ಕಾಂಪೌಂಡ್ ಬಳಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು, ಕೊಳೆತ ಸ್ಥಿತಿಯಲ್ಲಿ ರುಂಡವಿಲ್ಲದ ಶವ ಕಂಡು ಬೆಚ್ಚಿಬಿದ್ದಿದ್ದಾರೆ ಮತ್ತು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದು ಗೀತಾಳ ಶವ ಎಂದು ಕುಟುಂಬಸ್ಥರು ಗುರುತಿಸಿದ್ದಾರೆ. ಆದರೆ ಹುಡುಕಾಟ ನಡೆಸಿದರೂ ತಲೆ ಅಥವಾ ಕೈಕಾಲುಗಳು ಪತ್ತೆಯಾಗಿಲ್ಲ.

ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. 3-4 ದಿನಗಳ ಹಿಂದೆ ಮನೆ ಖಾಲಿ ಮಾಡಿದ ಪಕ್ಕದ ಮನೆಯಲ್ಲಿ ವಾಸವಿದ್ದ ಮೂವರು ಯುವಕರ ಬಗ್ಗೆ ಶಂಕೆ ವ್ಯಕ್ತವಾಗಿದೆ. "ಪ್ರಾಥಮಿಕ ತನಿಖೆಯಲ್ಲಿ ಮೇ 28 ಅಥವಾ 29 ರಂದು ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಾವು ಎಲ್ಲಾ ಕೋನಗಳಿಂದ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ ಮೂವರು ಯುವಕರ ಪಾತ್ರದ ಬಗ್ಗೆ ಬಲವಾಗಿ ಶಂಕಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

ಬನ್ನೇರುಘಟ್ಟ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com