ಕಲಬುರಗಿ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಆನೆಗುಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ಮಂಗಳವಾರ ಉತ್ತರಾದಿ ಮಠದ ಪರಂಪರೆಯ ಪೂರ್ವ ಯತಿಗಳಾದ ರಘುವರ್ಯ ತೀರ್ಥರ ಮಧ್ಯಾರಾಧನೆ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಮಧ್ಯಾರಾಧನೆ ನಿಮಿತ್ತ ಉತ್ತರಾದಿ ಮಠದ ಪ್ರಸ್ತುತ ಪೀಠಾಧಿಪತಿ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿಗಳು, ಶ್ರೀ ರಘುವರ್ಯ ತೀರ್ಥ ಸ್ವಾಮೀಜಿ ಅವರ ಬೃಂದಾವನಕ್ಕೆ ಮಹಾಪೂಜೆ, ಪಂಚಾಮೃತ ಅಭಿಷೇಕ ನೆರವೇರಿಸಿದರು. ಆರ್ಯ ಅಕ್ಷೋಭ್ಯ ತೀರ್ಥ ಮಠದ ಶ್ರೀ ರಘುವಿಜಯ ತೀರ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿಗಳು, ಶ್ರೀರಾಮ, ಸೀತಾ ಮಾತೆ ಮತ್ತು ಲಕ್ಷ್ಮಣ ಮೂರ್ತಿಗಳಿಗೆ ಪೂಜೆ ನೆರವೇರಿಸಿದರು.
ಶ್ರೀ ರಘುವರ್ಯ ತೀರ್ಥರ ಬೃಂದಾವನದ ಮಹಾಪೂಜೆಗೆ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚು ಭಕ್ತರು ಸಾಕ್ಷಿಯಾದರು. ಈ ಸಂದರ್ಭದಲ್ಲಿ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ, ಶ್ರೀ ರಘುವರ್ಯ ತೀರ್ಥ ಸ್ವಾಮೀಜಿಯವರ ಜೀವನ ಚರಿತ್ರೆ ಹಾಗೂ ಮಠಾಧೀಶರಾದ ಪೂಜ್ಯ ರಘುವರ್ಯ ತೀರ್ಥರು ಬರೆದ ‘ಮದ್ವಾಸ್ತಕ’ ಗ್ರಂಥದ ಕುರಿತು ಮಾಹಿತಿ ನೀಡಿದರು. ಉತ್ತರಾದಿ ಮಠದ ಮುಖ್ಯಾಧಿಕಾರಿ ವಿದ್ಯಾಧೀಶಾಚಾರ್ಯ ಗುತ್ತಲ್ ಅವರು ವಿಶೇಷ ಉಪನ್ಯಾಸ ನೀಡಿದರು.
ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಜೂ. 5, 6 ಮತ್ತು 7ರಂದು ರಘುವರ್ಯತೀರ್ಥರ ಆರಾಧನೆಯನ್ನು ಉತ್ತರಾದಿ ಮಠದವರು ನೆರವೇರಿಸಲು ಈ ಹಿಂದೆ ಧಾರವಾಡ ಹೈಕೋರ್ಟ್ ಆದೇಶ ಅನುಮತಿ ನೀಡಿತ್ತು.
ಮೂರು ದಿನಗಳ ಕಾಲ ಆರಾಧನೆ ನೆರವೇರಿಸಲು ಅನುಮತಿ ನೀಡಬೇಕು ಎಂದು ಉತ್ತರಾದಿ ಮಠದವರು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಹೈಕೋರ್ಚ್ ನ್ಯಾಯಾಧೀಶರು, ಉತ್ತರಾದಿ ಮಠದವರು ಮೂರು ದಿನಗಳ ಕಾಲ ಆರಾಧನೆ ನೆರವೇರಿಸಲು ಅನುಮತಿ ನೀಡಿತ್ತು.
ಈ ವಿಚಾರ ತಿಳಿಯುತ್ತಿದ್ದಂತೆಯೇ ನವವೃಂದಾವನ ಗಡ್ಡೆಗೆ ಸಾವಿರಾರು ಜನರು ಆಗಮಿಸಿ, ಮಧ್ಯಾರಾಧನೆಗೆ ಸಾಕ್ಷಿಯಾದರು. ಇಂದು ಉತ್ತರಾರಾಧನೆ ನಡೆಯಲಿದ್ದು, ಸತ್ಯಾತ್ಮತೀರ್ಥರೇ ಪೂಜೆ ನೆರವೇರಿಸಲಿದ್ದಾರೆಂದು ತಿಳಿದುಬಂದಿದೆ.
Advertisement