ಅಧಿಕಾರಿಗಳ ಹಣದಾಹಕ್ಕೆ ಬೇಸ್ತು; ಲಂಚ ನೀಡಲು ಹಣವಿಲ್ಲದೆ ದುಡಿಮೆಯ ಎತ್ತನ್ನೇ ಕೊಡಲು ಪುರಸಭೆಗೆ ತಂದ ಹಾವೇರಿ ರೈತ!
ಅಧಿಕಾರಿಗಳ ಹಣದಾಹ ಮಿತಿ ಮೀರಿದ್ದು, ಅಸಹಾಯಕ ರೈತನೊಬ್ಬ ಲಂಚ ನೀಡಲು ಹಣವಿಲ್ಲದ ಕಾರಣ ತನ್ನ ದುಡಿಮೆಯ ಎತ್ತನ್ನೇ ಲಂಚವಾಗಿ ನೀಡಲು ಪುರಸಭೆ ಕಚೇರಿಗೆ ತೆರಳಿದ ಮನಕಲಕುವ ಹಾಗೂ ಆಘಾತಕಾರಿ ಘಟನೆ ಹಾವೇರಿಯಲ್ಲಿ ವರದಿಯಾಗಿದೆ.
Published: 11th March 2023 02:57 PM | Last Updated: 11th March 2023 04:49 PM | A+A A-

ಲಂಚ ನೀಡಲು ಹಣವಿಲ್ಲದೆ ಎತ್ತನ್ನೇ ತಂದ ರೈತ
ಹಾವೇರಿ: ಅಧಿಕಾರಿಗಳ ಹಣದಾಹ ಮಿತಿ ಮೀರಿದ್ದು, ಅಸಹಾಯಕ ರೈತನೊಬ್ಬ ಲಂಚ ನೀಡಲು ಹಣವಿಲ್ಲದ ಕಾರಣ ತನ್ನ ದುಡಿಮೆಯ ಎತ್ತನ್ನೇ ಲಂಚವಾಗಿ ನೀಡಲು ಪುರಸಭೆ ಕಚೇರಿಗೆ ತೆರಳಿದ ಮನಕಲಕುವ ಹಾಗೂ ಆಘಾತಕಾರಿ ಘಟನೆ ಹಾವೇರಿಯಲ್ಲಿ ವರದಿಯಾಗಿದೆ.
ಹಾವೇರಿ ಜಿಲ್ಲೆಯ ಸವಣೂರಿನ ಪುರಸಭೆಯಲ್ಲಿ ಈ ಘಟನೆ ನಡೆದಿದ್ದು, ಮನೆ ಖಾತೆ ಬದಲಾಯಿಸಲು 25,000 ಸಾವಿರ ರೂ. ಲಂಚ ನೀಡುವಂತೆ ಪುರಸಭೆ ಅಧಿಕಾರಿಗಳು ಯಲ್ಲಪ್ಪ ರಾಣೋಜಿ ಎಂಬ ರೈತನಿಗೆ ಕೇಳಿದ್ದರು. ಈ ಹಿಂದೆಯು ಹಣವನ್ನು ಕೊಟ್ಟಿದ್ದೇನೆ. ಹಣ ತೆಗೆದುಕೊಂಡವರು ವರ್ಗಾವಣೆ ಆಗಿದ್ದಾರೆ. ಈಗ ಹೊಸದಾಗಿ ಬಂದಿರುವ ಅಧಿಕಾರಿಗಳು ಮತ್ತೆ 25,000 ಸಾವಿರ ಹಣ ಕೊಡಿ ಎಂದು ಬೇಡಿಕೆ ಇಡುತ್ತಿದ್ದಾರೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.
ಅಂತೆಯೇ ಅಧಿಕಾರಿಗಳ ಹಣ ದಾಹದ ವರ್ತನೆಯಿಂದ ರೊಚ್ಚಿಗೆದ್ದ ರೈತ ಯಲ್ಲಪ್ಪ ರಾಣೋಜಿ ತಮ್ಮ ಎತ್ತಿನ ಸಮೇತ ಪುರಸಭೆ ಕಚೇರಿಗೆ ಬಂದರು. ಬಳಿಕ ಅಧಿಕಾರಿಗಳ ಬಳಿ ಹೋಗಿ ದುಡ್ಡು ಕೊಡುವತನಕ ಎತ್ತು ಇಟ್ಕೊಳ್ಳಿ ಎಂದು ಹೇಳಿದರು. ಸಾರ್ ನನ್ನ ಬಳಿ ನೀವು ಕೇಳಿದಷ್ಟು ಕೊಡುವುದಕ್ಕೆ ಹಣ ಇಲ್ಲ. ಅಲ್ಲಿಯವರೆಗೆ ಈ ಎತ್ತನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ ಎಂದಿದ್ದಾನೆ. ಇದನ್ನು ಕೇಳಿದ ಪುರಸಭೆ ಅಧಿಕಾರಿಗಳು ಒಂದು ಕ್ಷಣ ದಂಗಾಗಿದ್ದಾರೆ. ಈ ಕುರಿತ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ರೈತನ ಕ್ರಮಕ್ಕೆ ಎಲ್ಲೆಡೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಯಲ್ಲಪ್ಪ ಸರಿಯಾಗಿಯೇ ಬುದ್ದಿ ಕಲಿಸಿದ್ದಾನೆಂದು ಸಾರ್ವಜನಿಕರು ಪ್ರಶಂಸೆಗಳ ಸುರಿಮಳೆಗೈದಿದ್ದಾರೆ.
ಇದನ್ನೂ ಓದಿ: ಲಂಚ ಪ್ರಕರಣ: ಜಾಮೀನು ಮೇಲೆ ಹೊರ ಬಂದ ಶಾಸಕ ಮಾಡಾಳ್; ಬಿಜೆಪಿ ಕಣ್ಣು ಕೆಂಪಗಾಗಿಸಿದ ವಿಜಯೋತ್ಸವ!
ವೈರಲ್ ಆಗುತ್ತಲೇ ಎಚ್ಚೆತ್ತ ಅಧಿಕಾರಿಗಳು; ತಾವೇ ರೈತನ ಮನೆಗೆ ಬಂದು ದಾಖಲೆ
ಇನ್ನು ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಎಚ್ಚೆತ್ತ ಅಧಿಕಾರಿಗಳು ತಾವಾಗಿಯೇ ರೈತ ಯಲ್ಲಪ್ಪ ರಾಣೋಜಿ ಮನೆಗೆ ದೌಡಾಯಿಸಿದ್ದಾರೆ. ಅಲ್ಲದೆ ರೈತನ ಜಮೀನಿನ ದಾಖಲೆಗಳನ್ನು ಒದಗಿಸಿದ್ದಾರೆ.
ಈ ಕುರಿತು ಮಾತನಾಡಿರುವ ರೈತ ಯಲ್ಲಪ್ಪ, "ನನ್ನ ಜಮೀನಿನ ದಾಖಲೆಗಳನ್ನು ಪಡೆಯಲು ಸಾಕಷ್ಟು ಬಾರಿ ನನ್ನನ್ನು ಓಡಾಸಿದ್ದಾರೆ. ಅದು ಈಗ ಎರಡು ವರ್ಷಗಳಾಗಿವೆ, ನಾನು ವೃತ್ತಿಯಲ್ಲಿ ರೈತ ಮತ್ತು ಸರ್ಕಾರಿ ಅಧಿಕಾರಿಗಳು ನನ್ನನ್ನು ಲಘುವಾಗಿ ತೆಗೆದುಕೊಂಡರು, ನಾನು ಕಚೇರಿಗೆ ಭೇಟಿ ನೀಡಿದಾಗ ಅವರು ನನ್ನ ಕಡತಗಳನ್ನು ತೋರಿಸಲು ನಿರಾಕರಿಸುತ್ತಿದ್ದರು. ತಿಂಗಳ ಹಿಂದೆ ಅಧಿಕಾರಿಯೊಬ್ಬರು ನನ್ನ ಕಡತ ನಾಪತ್ತೆಯಾಗಿದೆ ಎಂದು ಹೇಳಿದರು. ಕಳೆದ ಎರಡು ವರ್ಷಗಳಿಂದ ಅವರು ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.
"ಕಳೆದ ತಿಂಗಳು ಇತ್ತೀಚೆಗೆ ಸೇರ್ಪಡೆಗೊಂಡ ಅಧಿಕಾರಿಯೊಬ್ಬರು 25,000 ರೂಪಾಯಿ ಲಂಚ ಕೇಳಿದರು, ನಾನು ಈಗಾಗಲೇ ಹಿಂದಿನ ಅಧಿಕಾರಿಗೆ ಲಂಚ ನೀಡಿದ್ದೇನೆ ಮತ್ತು ಆದ್ದರಿಂದ ದಯವಿಟ್ಟು ನನ್ನ ಜಮೀನು ದಾಖಲೆಗಳನ್ನು ಒದಗಿಸಿ ಎಂದು ನಾನು ಅವರಿಗೆ ವಿವರಿಸಿದೆ. ನನ್ನ ಜಮೀನು ನನಗೆ ಮತ್ತು ನನ್ನ ಸಂಬಂಧಿಕರ ನಡುವೆ ಹಂಚಿಕೆಯಾಗಿದೆ. ನನಗೆ ಕಾಗದದ ಮೇಲೆ ದಾಖಲೆಗಳು ಬೇಕಾಗಿದ್ದವು.. ಆದರೆ ಅಧಿಕಾರಿಗಳು ಫೈಲ್ ನಾಪತ್ತೆಯಾಗಿದೆ ಎಂದು ಹೇಳಿದರೆ ನನ್ನ ಸ್ಥಿತಿ ಹೇಗಾಗಿರಬೇಡ ಎಂದು ಊಹಿಸಿ. ಹಾಗಾಗಿ ನಾನು ನನ್ನ ಎತ್ತು ಲಂಚವಾಗಿ ಅಡಮಾನ ಇಡಲು ನಿರ್ಧರಿಸಿದೆ. ಮೊದಲಿಗೆ ಅವರು ನನ್ನನ್ನು ನಿರ್ಲಕ್ಷಿಸಿದರು. ನಾನು ಕಚೇರಿಯನ್ನು ತಲುಪಿದೆ.. ಆದರೆ ಅಲ್ಲಿ ನೆರೆದಿದ್ದ ಜನರು ನನ್ನ ಮಾತುಗಳನ್ನು ಕೇಳಲು ಪ್ರಾರಂಭಿಸಿದಾಗ ಮತ್ತು ಅಧಿಕಾರಿಗಳನ್ನು ವೀಡಿಯೊ ಮಾಡಲು ಪ್ರಾರಂಭಿಸಿದರು ಎಂದು ಹೇಳಿದರು.
Even farmers are not spared by cruel 40% @BJP4Karnataka sarkar. Frustrated farmer wanted to give his cattle as bribe to an officer in @BSBommai's home district.
— Siddaramaiah (@siddaramaiah) March 10, 2023
No wonder Basavaraj Bommai is known as #PayCM. He is a CM only for those who pay him.#BrashtaJanagalaPaksha pic.twitter.com/iaoS4ojY0G
ಸಿದ್ದರಾಮಯ್ಯ ಪ್ರತಿಕ್ರಿಯೆ
ಇನ್ನು ಈ ವಿಡಿಯೋ ವೈರಲ್ ಆದ ನಂತರ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಇದಕ್ಕೆ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ''ಶೇ.40 ಕ್ರೂರ ಬಿಜೆಪಿ ಸರ್ಕಾರದಿಂದ ರೈತರೂ ಪಾರಲ್ಲ, ಅಧಿಕಾರಿ ಬೊಮ್ಮಾಯಿ ತವರು ಜಿಲ್ಲೆಗೆ ತನ್ನ ದನವನ್ನು ಲಂಚವಾಗಿ ಕೊಡಲು ಹತಾಶನಾದ ರೈತ, ಬಸವರಾಜ್ ಬೊಮ್ಮಾಯಿ ಪೇಸಿಎಂ ಎಂದೇ ಖ್ಯಾತರಾದರೇ ಆಶ್ಚರ್ಯವಿಲ್ಲ, ಹಣ ಕೊಡುವವರಿಗೆ ಮಾತ್ರ ಸಿಎಂ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.