social_icon

ಅನಾಥ ಮಕ್ಕಳಿಗೆ ಪ್ರವರ್ಗ-1ರಡಿ ಮೀಸಲಾತಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ

ತಂದೆ-ತಾಯಿ ಇಲ್ಲದ ಹಾಗೂ ಜಾತಿ ಗೊತ್ತಿಲ್ಲದ ಅನಾಥ ಮಕ್ಕಳಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ತೆಲಂಗಾಣ ಮತ್ತು ಮಹಾರಾಷ್ಟ್ರ ಮಾದರಿಯಲ್ಲಿ ಜಾತಿ ತಿಳಿದಿರುವ ಮಕ್ಕಳಿಗೆ ಆಯಾ ಜಾತಿ ಪ್ರವರ್ಗದಡಿ ಮತ್ತು ಜಾತಿ ಗೊತ್ತಿಲ್ಲದ ಮಕ್ಕಳಿಗೆ ಪ್ರವರ್ಗ-1 ರಡಿ ಮೀಸಲಾತಿ ಕಲ್ಪಿಸುವಂತೆ ಕೋರಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು...

Published: 16th March 2023 02:43 PM  |   Last Updated: 16th March 2023 02:58 PM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ತಂದೆ-ತಾಯಿ ಇಲ್ಲದ ಹಾಗೂ ಜಾತಿ ಗೊತ್ತಿಲ್ಲದ ಅನಾಥ ಮಕ್ಕಳಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ತೆಲಂಗಾಣ ಮತ್ತು ಮಹಾರಾಷ್ಟ್ರ ಮಾದರಿಯಲ್ಲಿ ಜಾತಿ ತಿಳಿದಿರುವ ಮಕ್ಕಳಿಗೆ ಆಯಾ ಜಾತಿ ಪ್ರವರ್ಗದಡಿ ಮತ್ತು ಜಾತಿ ಗೊತ್ತಿಲ್ಲದ ಮಕ್ಕಳಿಗೆ ಪ್ರವರ್ಗ-1 ರಡಿ ಮೀಸಲಾತಿ ಕಲ್ಪಿಸುವಂತೆ ಕೋರಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿದೆ,

ಈ ಕುರಿತು ಮಾಹಿತಿ ನೀಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು, ಅನಾಥ ಮಕ್ಕಳಿಗೆ ಪ್ರವರ್ಗ 1 ರ ಅಡಿಯಲ್ಲಿ ಮೀಸಲಾತಿ ನೀಡಲು ರಾಜ್ಯ ಸರ್ಕಾರವುವು ತೆಲಂಗಾಣ ಮತ್ತು ಮಹಾರಾಷ್ಟ್ರ ಮಾದರಿಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಹೇಳಿದರು.

ಅನಾಥ ಮಕ್ಕಳಿಗೆ ಮೀಸಲಾತಿ ಒದಗಿಸುವ ದೃಷ್ಟಿಯಿಂದ ವಿವಿಧ ಜಿಲ್ಲೆಗಳಲ್ಲಿರುವ ಆಯೋಗವು ವಿವಿಧ ಜಿಲ್ಲೆಗಳ ಅನಾಥಾಶ್ರಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಈ ಎಲ್ಲಾ ಮಾಹಿತಿಯನ್ನಾಧರಿಸಿ, ಜಾತಿ ತಿಳಿದಿರುವ ಮಕ್ಕಳಿಗೆ ಆಯಾ ಜಾತಿಯ ಪ್ರವರ್ಗದಡಿಯಲ್ಲಿ ಮತ್ತು ಜಾತಿ ಗೊತ್ತಿಲ್ಲದ ಅನಾಥ ಮಕ್ಕಳಿಗೆ ಪ್ರವರ್ಗ-1 ರಡಿಯಲ್ಲಿ ಮೀಸಲಾತಿ ಕಲ್ಪಿಸಿಕೊಡಬೇಕೆಂದು ಶಿಫಾರಸ್ಸು ಮಾಡಿ ವಿಶೇಷ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಇದನ್ನೂ ಓದಿ: ತರಾತುರಿಯಲ್ಲಿ  ಪಂಚಮಸಾಲಿ-ಲಿಂಗಾಯತರ ಬೇಡಿಕೆ ಕುರಿತ ವರದಿ ಸಲ್ಲಿಕೆ ಸಾಧ್ಯವಿಲ್ಲ: ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ 

ರಾಜ್ಯಾದ್ಯಂತ ಹಲವಾರು ಜಾತಿ ಜನಾಂಗ ಹಾಗೂ ಸಮುದಾಯಗಳಿಂದ, ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ವಿವಿಧ ಪ್ರವರ್ಗಗಳಿಗೆ ಸೇರ್ಪಡೆಗೊಳಿಸುವಂತೆ ಮನವಿಗಳು ಅಯೋಗಕ್ಕೆ ಸಲ್ಲಿಕೆಯಾಗಿದೆ. ಇದೂವರೆಗೆ ಸುಮಾರು 133 ಮನಗಳು ಸಲ್ಲಿಕೆಯಾಗಿವೆ. ಇವುಗಳ ಬಹಿರಂಗ ವಿಚಾರಣೆ ನಡೆಸಿ, ಮನವಿ ಮಾಡಿರುವ  ಜನಾಂಗದವರು ವಾಸವಾಗಿರುವ ಸ್ಥಳಗಳಿಗೆ ಪ್ರವಾಸ ಕೈಗೊಂಡು ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿ ಆದ್ಯತೆಯ ಮೇರೆಗೆ ಒಟ್ಟು 34 ವರದಿಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರಾಜ್ಯದಲ್ಲಿ 46 ಸಣ್ಣ ಸಮುದಾಯಗಳಿವೆ. ಇದರಲ್ಲಿ 300ಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಸಮುದಾಯಗಳನ್ನು ಗುರುತಿಸಲಾಗಿದೆ. ಈ ಸಮುದಾಯಗಳು ಯಾವ ವರ್ಗಕ್ಕೆ ಸೇರಿದವರು ಎಂಬ ಮಾಹಿತಿಯ ಕೊರತೆಯಿಂದಾಗಿ ಯಾವುದೇ ಸರ್ಕಾರಿ ಸವಲತ್ತುಗಳನ್ನು ಪಡೆಯುತ್ತಿಲ್ಲ. ಅಂತಹ ಸಮುದಾಯಗಳಿಗೆ ಮೀಸಲಾತಿಯನ್ನು ನೀಡುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.

ಮನವಿದಾರರು ಆಯೋಗಕ್ಕೆ ಸಲ್ಲಿಸಿದ ಮನವಿ ಮತ್ತು ದಾಖಲೆಗಳು ಹಾಗೂ ಆಯೋಗವು ಪ್ರವಾಸ ಕೈಗೊಂಡು ಸಂಗ್ರಹಿಸಿದ ಮಾಹಿತಿಯನ್ನಾಧರಿಸಿ ಕಾಡುಗೊಲ್ಲ, ಹಟ್ಟಿಗೊಲ್ಲ (ಅಡವಿಗೊಲ್ಲ), ಖಂಜಿರ್ ಭಾಟ್, ಕಂಜರ್, ಖಂಜಾರ್ ಭಾಟ್, ಚಪ್ಪರ್‌ಬಂದ್, ಕುಡುಬಿ, ಮುಖಾರಿ/ಮುವಾರಿ, ನಾಯಿಂದ, ಪೊಮ್ಮಲ, ಚೆನ್ನದಾಸರ,  ಮರುತ್ತುವರ್, ನಾಯರ್, ಪರಿಯಾಳ ರಾಮಕ್ಷತ್ರಿಯ,ಮಡಿಒಕ್ಕಲಿಗ,ಜೋಗಾರ್, ಚೌರಾಸಿಯಾ ಸಮುದಾಯಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಇದನ್ನೂ ಓದಿ: ಹೇಳೋದು ವೇದಾಂತ, ತಿನ್ನೋದು...! ಮಹಿಳಾ ಮೀಸಲಾತಿ ಪರ ಮಾತನಾಡುವ ಪಕ್ಷಗಳು ಹೆಚ್ಚಿನ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಲ್ಲ ಏಕೆ?  

ಅಲ್ಲದೆ, ಲಿಂಗಾಯತ ಕೂಡು ಒಕ್ಕಲಿಗ, ಆದಿಬಾಣಜಿಗ, ನೊಳಂಬ, ಮಲ್ಲವ ಮಾಳೇಗೌಡ, ಲಿಂಗಾಯತ ರಡ್ಡಿ, ಗೌಡ ಲಿಂಗಾಯತ, ಶಿವಸಿಂಪಿ, ಬಂಗಾರ, ಶಿವಾಚಾರ ನಗರ್ತ, 24 ಮನೆ ತೆಲುಗುಶೆಟ್ಟಿ, ಆರೇರ, ಕನ್ನಡ ವೈಶ್ಯ, ಮತ್ತು ಗಾಣಿಗ/ಗಾಣಿಗ ಸಮುದಾಯದ ಉಪ ಜಾತಿಗಳು ಸಿದ್ಧಪಡಿಸಲಾಗಿದೆ. ಅವುಗಳನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು. ಈಗಾಗಲೇ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿರುವ 46 ಅಲೆಮಾರಿ/ಅರೆ ಅಲೆಮಾರಿ ಜಾತಿಗಳಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆಯೂ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಹೆಗ್ಡೆ ಹೇಳಿದರು.

ಇದಷ್ಟೇ ಅಲ್ಲದೆ, ಲಿಂಗಾಯತ ಕೂಡು ಒಕ್ಕಲಿಗ, ಆದಿಬಾಣಜಿಗ, ನೊಳಂಬ, ಮಲ್ಲವ ಮಾಳೇಗೌಡ, ಲಿಂಗಾಯತ ರಡ್ಡಿ, ಗೌಡ ಲಿಂಗಾಯತ, ಶಿವಸಿಂಪಿ, ಬಂಗಾರ, ಶಿವಾಚಾರ ನಗರ್ತ, 24 ಮನೆ ತೆಲುಗುಶೆಟ್ಟಿ, ಆರೇರ, ಕನ್ನಡ ವೈಶ್ಯ, ಮತ್ತು ಗಾಣಿಗ/ಗಾಣಿಗ ಸಮುದಾಯದ ಉಪ ಜಾತಿಗಳ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. ಈ ಪಟ್ಟಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗುವುದು.

ಈಗಾಗಲೇ ಹಿಂದುಳಿದ ವರ್ಗಗಳ ಮೀಸಲಾತಿ ಜಾತಿ ಪಟ್ಟಿಯಲ್ಲಿರುವ 46 ಅಲೆಮಾರಿ/ಅರೆಅಲೆಮಾರಿ ಜಾತಿಗಳಿಗೆ ಜಾತಿ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ, ಆಯಾ ಜಾತಿಯ ಮುಂದೆ ಅಲೆಮಾರಿ/ಅರೆಅಲೆಮಾರಿ ಎಂದು ನಮೂದಿಸಿ ಜಾತಿ ಪ್ರಮಾಣ ಪತ್ರವನ್ನು ನೀಡುವ ಕುರಿತು ಶಿಫಾರಸ್ಸು ಮಾಡಲು ಆಯೋಗವು ತೀರ್ಮಾನಿಸಿದೆ ಎಂದು ಹೆಗ್ಡೆ ವಿವರಿಸಿದರು.


Stay up to date on all the latest ರಾಜ್ಯ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp