ತಂಬಾಕು ನಿಯಂತ್ರಣ: ಬೆಂಗಳೂರಿಗೆ ಜಾಗತಿಕ ಪ್ರಶಸ್ತಿ, ಬಿಬಿಎಂಪಿಗೆ ಸಚಿವ ಸುಧಾಕರ್ ಅಭಿನಂದನೆ

ಸಾರ್ವಜನಿಕವಾಗಿ ಧೂಮಪಾನ ಕಡಿಮೆ ಮಾಡಲು ಮತ್ತು ಆ ಮೂಲಕ ಸಾಂಕ್ರಾಮಿಕವಲ್ಲದ ರೋಗಗಳ (ಎನ್‌ಸಿಡಿ) ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಶ್ರಮಿಸಿದ ಬೆಂಗಳೂರು ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಬಾಚಿಕೊಂಡಿದೆ.
ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ. ತ್ರಿಲೋಕ್ ಚಂದ್ರ ಪ್ರಶಸ್ತಿ ಸ್ವೀಕರಿಸಿದರು.
ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ. ತ್ರಿಲೋಕ್ ಚಂದ್ರ ಪ್ರಶಸ್ತಿ ಸ್ವೀಕರಿಸಿದರು.

ಬೆಂಗಳೂರು: ಸಾರ್ವಜನಿಕವಾಗಿ ಧೂಮಪಾನ ಕಡಿಮೆ ಮಾಡಲು ಮತ್ತು ಆ ಮೂಲಕ ಸಾಂಕ್ರಾಮಿಕವಲ್ಲದ ರೋಗಗಳ (ಎನ್‌ಸಿಡಿ) ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಶ್ರಮಿಸಿದ ಬೆಂಗಳೂರು ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಬಾಚಿಕೊಂಡಿದೆ.

ಉದ್ಯಾನ ನಗರಿ, ಐಟಿ ಹಬ್ ಆಗಿರುವ ಬೆಂಗಳೂರು, ಧೂಮಪಾನ-ಮುಕ್ತ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ನೀಡಲ್ಪಡುವ 'ಆರೋಗ್ಯಕರ ನಗರಗಳ ಶೃಂಗಸಭೆ ಪ್ರಶಸ್ತಿ-2023'ಯನ್ನು ಪಡೆದುಕೊಂಡಿದೆ.

ಮಾರ್ಚ್ 15 ರಂದು ಲಂಡನ್‌ನಲ್ಲಿ ನಡೆದ ಆರೋಗ್ಯಕರ ನಗರಗಳ ಶೃಂಗಸಭೆಗೆ ನಿಯೋಗದ ನೇತೃತ್ವ ವಹಿಸಿದ್ದ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ತ್ರಿಲೋಕ್ ಚಂದ್ರ ಅವರು ಪ್ರಶಸ್ತಿ ಸ್ವೀಕರಿಸಿದರು.

ಈ ಪ್ರಶಸ್ತಿ ನಮ್ಮ ಬಿಬಿಎಂಪಿ ಆರೋಗ್ಯ ವಿಭಾಗದ ತಂಡ, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ನಿವಾಸಿಗಳ ಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ ಎಂದು ತ್ರಿಲೋಕ್ ಚಂದ್ರ ಅವರು ಹೇಳಿದರು.

ಧೂಮಪಾನ-ಮುಕ್ತ ಬೆಂಗಳೂರಿನ ಕೇಂದ್ರೀಕೃತ ಪ್ರಯತ್ನದ ಫಲವಾಗಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನದ ಪ್ರಮಾಣ ಶೇ. 5.2 ರಷ್ಟು ಕಡಿಮೆ ಮಾಡಿದೆ (2017 ರಲ್ಲಿ ಶೇ,18.18, 2021 ರಲ್ಲಿ ಶೇ.13.30 ರಷ್ಟು ಕಡಿಮೆಯಾಗಿತ್ತು) ಇದಷ್ಟೇ ಅಲ್ಲದೆ, ನೋ ಸ್ಮೋಕಿಂಗ್‌ ಬೋರ್ಡ್‌ ಪ್ರದರ್ಶನವು ಶೇ. 51.9 ರಷ್ಟು ಹೆಚ್ಚಳವಾಗಿದೆ.  ಧೂಮಪಾನ ನಿಷೇಧ ಚಿಹ್ನೆಯ ಪ್ರದರ್ಶನದಲ್ಲಿ ಶೇ.51.9ರಷ್ಟು ಹೆಚ್ಚಳವಾಗಿದೆ ಅಂದರೆ 2017 ರಲ್ಲಿ ಶೇಕಡಾ 23.1ರಷ್ಟಿತ್ತು, ಅದು 2021ರವರೆಗೆ ಶೇಕಡಾ 75 ಹೆಚ್ಚಾಗಿದೆ ಎಂದರು ಎಂತು ತಿಳಿಸಿದರು.

ಸಿಲಿಕಾನ್ ಸಿಟಿ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಮತ್ತು ನಮ್ಮ ಸಮುದಾಯದ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸುವಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಭವಿಷ್ಯದಲ್ಲಿ ಇನ್ನಷ್ಟು ಆರೋಗ್ಯ ಮತ್ತು ಕ್ಷೇಮ ಉಪಕ್ರಮಗಳಿಗೆ ಆದ್ಯತೆ ನೀಡಲಿದ್ದೇವೆ ಎಂದರು.

ವೈಟಲ್ ಸ್ಟ್ರಾಟಜೀಸ್ ಅಡಿಯಲ್ಲಿ ಆರೋಗ್ಯಕರ ನಗರಗಳ ಕಾರ್ಯವನ್ನು ಮುನ್ನಡೆಸುತ್ತಿರುವ ಯೋಜನಾ ನಿರ್ದೇಶಕಿ ಡಾ ತ್ರಿವೇಣಿ ಬಿಎಸ್ ಅವರು ಮಾತನಾಡಿ, “ತಂಬಾಕು ನಿಯಂತ್ರಣ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಬೆಂಗಳೂರನ್ನು ಹೊಗೆ ಮುಕ್ತ ನಗರವನ್ನಾಗಿ ಮಾಡಲು ಬಿಬಿಎಂಪಿಯ ಬದ್ಧತೆವಾಗಿದೆ. ಈ ಪ್ರಶಸ್ತಿಯು ಯುವಕರು ತಂಬಾಕಿಗೆ ವ್ಯಸನಿಯಾಗುವುದನ್ನು ತಡೆಯಲು ಹೊಸ ತಂಬಾಕು ನಿಯಂತ್ರಣ ನಿಯಮಗಳು ಮತ್ತು ನಿಬಂಧನೆಗಳನ್ನು ತರಲು ಮತ್ತಷ್ಟು ಪ್ರೇರಣೆ ನೀಡಲಿದೆ ಎಂದು ಹೇಳಿದರು.

ಬಿಬಿಎಂಪಿಗೆ ಅಭಿನಂದನೆ ತಿಳಿಸಿದ ಆರೋಗ್ಯ ಸಚಿವ ಸುಧಾಕರ್
ತಂಬಾಕು ನಿಯಂತ್ರಿಸುವಲ್ಲಿ ಅತ್ಯುನ್ನತ ಪ್ರಶಸ್ತಿ ಪಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಆರೋಗ್ಯ ಸಚಿವ ಡಾಕೆ.ಸುಧಾಕರ್ ಅವರು ಅಭಿನಂದಿಸಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಡಬ್ಲ್ಯೂಹೆಚ್ಒ ದಿಂದ ಮನ್ನಣೆ ಪಡೆದ ಬಿಬಿಎಂಪಿಗೆ ಅಭಿನಂದನೆಗಳು. ತಂಬಾಕಿನ ಪಿಡುಗಿನ ಬಗ್ಗೆ ಜನರಿಗೆ ತಿಳುವಳಿಕೆ ನೀಡುವಲ್ಲಿ ಬಿಬಿಎಂಪಿಯ ಪರಿಶ್ರಮ ಶ್ಲಾಘನೀಯವಾದದ್ದು. ಈ ಪ್ರಯತ್ನಗಳು ಅನೇಕರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ತಂಬಾಕು ಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ನಮ್ಮ ಕೆಲಸವನ್ನು ಮುಂದುವರಿಸೋಣ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com