ದೇಶೀಯ ಆಗಮನದ ಗೇಟ್ನಲ್ಲಿ ಇಳಿದ 30 ಅಂತರರಾಷ್ಟ್ರೀಯ ಪ್ರಯಾಣಿಕರು; ಕೆಐಎನಲ್ಲಿ ಕೆಲಕಾಲ ಗೊಂದಲ ನಿರ್ಮಾಣ
ಶುಕ್ರವಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ಏರ್ಲೈನ್ಸ್ ವಿಮಾನದ 30 ಪ್ರಯಾಣಿಕರನ್ನು ಅಂತರರಾಷ್ಟ್ರೀಯ ವಿಮಾನಗಳ ಆಗಮನದ ಗೇಟ್ ಬದಲಿಗೆ ದೇಶೀಯ ವಿಮಾನ ಆಗಮನದ ಗೇಟ್ನಲ್ಲಿ ಇಳಿಸಲಾಯಿತು. ಇದರಿಂದ ಅಂತರರಾಷ್ಟ್ರೀಯ ಆಗಮನ ಗೇಟ್ನಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
Published: 19th March 2023 10:58 AM | Last Updated: 19th March 2023 11:00 AM | A+A A-

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಬೆಂಗಳೂರು: ಶುಕ್ರವಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶ್ರೀಲಂಕಾ ಏರ್ಲೈನ್ಸ್ ವಿಮಾನದ 30 ಪ್ರಯಾಣಿಕರನ್ನು ಅಂತರರಾಷ್ಟ್ರೀಯ ವಿಮಾನಗಳ ಆಗಮನದ ಗೇಟ್ ಬದಲಿಗೆ ದೇಶೀಯ ವಿಮಾನ ಪ್ರಯಾಣಿಕರ ಆಗಮನದ ಗೇಟ್ನಲ್ಲಿ ಇಳಿಸಲಾಯಿತು. ಇದರಿಂದ ವಿದೇಶದಿಂದ ಬಂದ ಪ್ರಯಾಣಿಕರು ವಲಸೆ ತಪಾಸಣೆಗೆ ಒಳಪಡಬೇಕಾಗಿದ್ದರಿಂದ ಅಂತರರಾಷ್ಟ್ರೀಯ ಆಗಮನ ಗೇಟ್ನಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಕೊಲಂಬೊದಿಂದ UL 173 ವಿಮಾನವು ಕೆಐಎನಲ್ಲಿ 2.22ಕ್ಕೆ ಇಳಿಯಿತು. ಈ ವೇಳೆ ಪ್ರಯಾಣಿಕರನ್ನು ತಪ್ಪಾಗಿ ದೇಶೀಯ ಆಗಮನದ ಬಸ್ ಗೇಟ್ಗೆ ಕರೆದೊಯ್ಯಲಾಯಿತು. 'ಪ್ರಯಾಣಿಕರು ತಮ್ಮ ಸಾಮಾನುಗಳನ್ನು ಸಂಗ್ರಹಿಸಲು ದೇಶೀಯ ಲಗೇಜ್ ಸಂಗ್ರಹಿಸುವ ಪ್ರದೇಶವನ್ನು ಪ್ರವೇಶಿಸಿದರು. ಟರ್ಮಿನಲ್ನಲ್ಲಿನ ಕಾರ್ಯಾಚರಣೆ ತಂಡವು ಸ್ಥಳಕ್ಕೆ ಧಾವಿಸಿ ಸಿಐಎಸ್ಎಫ್ ಮತ್ತು ವಲಸೆ ಅಧಿಕಾರಿಗಳಿಗೆ ವಿಷಯವನ್ನು ವರದಿ ಮಾಡಿದೆ' ಎಂದು ಕೆಐಎ ಮೂಲಗಳು ತಿಳಿಸಿವೆ.
ಏರ್ಲೈನ್ ಅಧಿಕಾರಿಗಳು ಮತ್ತು ಗ್ರೌಂಡ್ ಹ್ಯಾಂಡ್ಲಿಂಗ್ ಏಜೆಂಟ್ಗೆ ಕಠಿಣ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
'ಪ್ರಯಾಣಿಕರನ್ನು ತಕ್ಷಣವೇ ವಲಸೆ ಅಧಿಕಾರಿಗಳು ತಪಾಸಣೆಗಾಗಿ ಅಂತರರಾಷ್ಟ್ರೀಯ ಆಗಮನದ ಗೇಟ್ಗೆ ಸ್ಥಳಾಂತರಿಸಲಾಯಿತು. ನಂತರ ಅವರು ಅಂತಾರಾಷ್ಟ್ರೀಯ ಬ್ಯಾಗೇಜ್ ಕ್ಲೈಮ್ ವಿಭಾಗಕ್ಕೆ ತೆರಳಿದರು' ಎಂದು ಅವರು ಹೇಳಿದರು.
ಬಿಐಎಎಲ್ ವಕ್ತಾರರು ಘಟನೆಯನ್ನು ಖಚಿತಪಡಿಸಿದ್ದಾರೆ. 'ಇದು ಗೊಂದಲಕ್ಕೆ ಕಾರಣವಾದ ದೋಷ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು' ಎಂದು ವಕ್ತಾರರು ತಿಳಿಸಿದರು.