ಸಾರಿಗೆ ನೌಕರರ ಮುಷ್ಕರ ವಾಪಸ್‌: ಅಧ್ಯಕ್ಷ ಅನಂತ ಸುಬ್ಬರಾವ್ ಘೋಷಣೆ, ಮುಷ್ಕರ ನಡೆಯುತ್ತದೆ ಎಂದ ಚಂದ್ರಶೇಖರ್

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮಾರ್ಚ್‌ 21ರಂದು ಕರೆ ನೀಡಿದ್ದ ಸಾರಿಗೆ ಮುಷ್ಕರವನ್ನು ವಾಪಸ್‌ ಪಡೆಯಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮಾರ್ಚ್‌ 21ರಂದು ಕರೆ ನೀಡಿದ್ದ ಸಾರಿಗೆ ಮುಷ್ಕರವನ್ನು ವಾಪಸ್‌ ಪಡೆಯಲಾಗಿದೆ.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರೊಂದಿಗೆ ಶನಿವಾರ ರಾತ್ರಿ ನಡೆದ ಸಭೆ ಯಶಸ್ವಿಯಾಗಿದ್ದು, ಹಂತ ಹಂತವಾಗಿ ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿದ ಮೇರೆಗೆ ಮುಷ್ಕರ ವಾಪಸ್‌ ಪಡೆಯಲಾಗಿದೆ ಎಂದು ಸಾರಿಗೆ ನೌಕರರ ಸಂಘದ ಮುಖಂಡರು ತಿಳಿಸಿದ್ದಾರೆ.

ವೇತನ ಹೆಚ್ಚಳ ಹಾಗೂ ಭತ್ಯೆ ಸೇರಿದಂತೆ ಉಳಿದ ಎಲ್ಲ ಬೇಡಿಕೆಗಳನ್ನು ಕಾರ್ಮಿಕ ಸಂಘಟನೆ ಜೊತೆಗೆ ನಿಗಮ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದೆಂದು ಎಂ.ಡಿ ಅನ್ಬುಕುಮಾರ್ ಅವರು ಭರವಸೆ ನೀಡಿದ್ದು, ಮಂಗಳವಾರದ ಮುಷ್ಕರ ಕೈಬಿಡಲಾಗಿದೆ ಎಂದು ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್‌.ವಿ.ಅನಂತಸುಬ್ಬರಾವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ವೇತನ ಹೆಚ್ಚಳ ವಿಷಯವು ನನೆಗುದಿಗೆ ಬಿದ್ದಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು ಬಗೆಹರಿಸಿದ್ದಾರೆ. ಹಿಂಬಾಕಿ ನೀಡುವ ವಿಚಾರದಲ್ಲಿ ಸಂಘಟನೆಗಳ ಮಾಹಿತಿ ಪಡೆಯುವ ಭರವಸೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ನ್ಯಾಯ ಸಮ್ಮತವಾಗಿ ವೇತನ ಪರಿಷ್ಕರಿಸಿಲ್ಲ ಎಂದು ಆರೋಪಿಸಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ‘ಯುಗಾದಿ ಹಬ್ಬದಲ್ಲಿ ಪ್ರಯಾಣಿಕರಿಗೆ ತೊಂದರೆ ನೀಡುವ ಉದ್ದೇಶ ಇರಲಿಲ್ಲ. ಸ್ಪಷ್ಟ ಭರವಸೆ ಸಿಗದ ಕಾರಣಕ್ಕೆ ಮುಷ್ಕರಕ್ಕೆ ಕರೆ ನೀಡಲಾಗಿತ್ತು’ ಎಂದು ತಿಳಿಸಿದ್ದಾರೆ.

ಮಾರ್ಚ್‌ 24ರಂದು ಮುಷ್ಕರ ನಡೆಯುತ್ತದೆ: ಚಂದ್ರಶೇಖರ್
ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಎಚ್‌.ವಿ.ಅನಂತಸುಬ್ಬರಾವ್ ಮುಷ್ಕರ ಹಿಂಪಡೆದಿದ್ದಾರೆಯಾದರೂ, ಆದರೆ, ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಮಾರ್ಚ್‌ 24ರಂದು ಕರೆ ನೀಡಿದ್ದ ಮುಷ್ಕರವನ್ನು ವಾಪಸ್‌ ಪಡೆದಿಲ್ಲ. ಕೆಎಸ್​​ಆರ್​ಟಿಸಿ ನೌಕಕರ ಸಂಘ ಜಂಟಿ ಕ್ರಿಯಾ ಸಮಿತಿ ವಾಪಸ್​ ಪಡೆದುಕೊಂಡರು ಸಮಾನ ಮನಸ್ಕರ ವೇದಿಕೆ ಸಾರಿಗೆ ಬಂದ್​ಗೆ ಕರೆ ನೀಡಿದೆ. ಮಾರ್ಚ್​​ 24ರಂದು ಕರೆ ನೀಡಿರುವ ಬಂದ್​ ನಡೆಸಲಾಗುತ್ತದೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವ ಚಂದ್ರಶೇಖರ್ ಅವರು, ಸರ್ಕಾರ ಹೊರಡಿಸಿದ ಆದೇಶ ಕೇವಲ‌ ಮೂಲ ವೇತನಕ್ಕೆ ಶೇಕಡಾ 15 ಹೆಚ್ಚಳ ಮಾಡುವ ವಿಚಾರಕ್ಕೆ ಸಂಬಂಧಿಸಿದೆ. ಇವತ್ತು ಜಂಟಿ ಕ್ರಿಯಾಸಮಿತಿಯವರು ಎಂಡಿ ಜೊತೆ ಮೀಟಿಂಗ್ ನಡೆಸಿದ್ದಾರೆ. ಅವರು ಯಾವ ಒಪ್ಪಂದ ಮಾಡಿಕೊಂಡು ಮುಷ್ಕರ ವಾಪಾಸ್ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಆದರೆ ಏಕಾಏಕಿ ಮುಷ್ಕರ ವಾಪಾಸ್ ಪಡೆದಿದ್ದಾರೆ. ಇದರ ಉದ್ದೇಶ 24ರಂದು ನಡೆಯುವ ಸಾರಿಗೆ ಮುಷ್ಕರವನ್ನು ದಿಕ್ಕು ತಪ್ಪಿಸುವ ಹುನ್ನಾರವಾಗಿದೆ. ಆದರೆ ನಮ್ಮ ಬೇಡಿಕೆಗಳು ಈಡೇರಿಲ್ಲ. ಮಾರ್ಚ್ 24 ರಂದು ಸಾರಿಗೆ ಮುಷ್ಕರ ಮಾಡುತ್ತೇವೆ ಎಂದು ಹೇಳಿದ್ದಾರೆ.

‘ಸರ್ಕಾರಿ ನೌಕರರು ಮುಷ್ಕರಕ್ಕೆ ಕರೆ ನೀಡಿದ ಕೆಲವೇ ಗಂಟೆಗಳಲ್ಲಿ 7ನೇ ವೇತನ ಜಾರಿ ಭರವಸೆ ಜತೆಗೆ ಮಧ್ಯಂತರ ಪರಿಹಾರವಾಗಿ ಶೇ 17ರಷ್ಟು ವೇತನ ಹೆಚ್ಚಿಸಲಾಗಿದೆ. ನಿಗಮಗಳಲ್ಲಿ ಒಂದಾದ ಕೆಪಿಟಿಸಿಎಲ್‌ ನೌಕರರ ಪ್ರತಿಭಟನೆಗೆ ಮಣಿದು ಒಟ್ಟು ವೇತನಕ್ಕೆ ಶೇ 20 ವೇತನ ಹೆಚ್ಚಳ ಮಾಡಲಾಗಿದೆ. ಸಾರಿಗೆ ನೌಕರರಿಗೆ ಲಿಖಿತ ಭರವಸೆ ನೀಡಿದ್ದರೂ ಮೂಲವೇತನಕ್ಕೆ ಶೇ 15ರಷ್ಟು ವೇತನ ಹೆಚ್ಚಿಸಿ, ಬಾಕಿ ಎಲ್ಲ ಆರ್ಥಿಕ ಸೌಲಭ್ಯ ಕಡಿತಗೊಳಿಸಿ ಆದೇಶಿಸಲಾಗಿದೆ. ನಾವು ಮುಷ್ಕರ ನಡೆಸುತ್ತೇವೆ’ ಎಂದು ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com